ವರಮಹಾಲಕ್ಷ್ಮೀ ವ್ರತ : ಆಚರಣೆ, ಹುಟ್ಟಿನ ಕಥೆ ನಿಮಗೆ ಗೊತ್ತಾ

  • ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.

ಮಹಾಲಕ್ಷ್ಮೀ ಅಂದರೆ ಶ್ರೀಮನ್ನಾರಾಯಣನ ಮಡದಿ. ತನ್ನನ್ನು ಪೂಜಿಸಿದವರಿಗೆ ಬೇಕಾದ ವರಗಳನ್ನು ನೀಡುವವಳೇ ವರಮಹಾಲಕ್ಷ್ಮೀ ಎಂದುಕೊಳ್ಳಬಹುದು. ‘ವರ’ ಅಂದರೆ ಶ್ರೇಷ್ಠ ಅಂತಲೂ ಅರ್ಥವಿದೆ. ಆದ್ದರಿಂದ ವರಮಹಾಲಕ್ಷ್ಮೀ ಅಂದರೆ ಶ್ರೇಷ್ಠಳಾದ ಮಹಲಾಕ್ಷ್ಮೀ ಎಂದೂ ಅರ್ಥವಾಗುತ್ತದೆ. ಇಂತಹ ಮಹಾಲಕ್ಷ್ಮಿಯು ಎಂಟು ರೂಪಗಳಲ್ಲಿ ಇರುತ್ತಾಳೆ ಎಂಬುದು ಪ್ರತೀತಿ. ಆದಿಲಕ್ಷ್ಮೀ , ಧನಲಕ್ಷ್ಮೀ , ಧಾನ್ಯಲಕ್ಷ್ಮೀ , ಗಜಲಕ್ಷ್ಮೀ , ಸಂತಾನಲಕ್ಷ್ಮೀ , ವೀರಲಕ್ಷ್ಮೀ , ವಿಜಯಲಕ್ಷ್ಮೀ ಮತ್ತು ವಿದ್ಯಾಲಕ್ಷ್ಮಿಯರೇ ಆ ಅಷ್ಟಲಕ್ಷ್ಮಿಯರು.

ಆದಿಲಕ್ಷ್ಮೀ ಅಂದರೆ ಹೆಸರೇ ಸೂಚಿಸುವಂತೆ ಮೂಲಪ್ರಕೃತಿಯಾದ ಲಕ್ಷ್ಮೀದೇವತೆ , ಆದಿಶಕ್ತಿ , ಜಗತ್ತನ್ನೆಲ್ಲ ಕಾಪಾಡುತ್ತಿರುವ ಶಕ್ತಿದೇವತೆ , ವೈಕುಂಠದಲ್ಲಿ ಶ್ರೀಮನ್ನಾರಾಯಣನ ತೊಡೆಯೇರಿ ಕುಳಿತು ರಾರಾಜಿಸುತ್ತಿರುವ ಚತುರ್ಭುಜಳಾದ ಲಕ್ಷ್ಮೀದೇವಿ.
ಧನಲಕ್ಷ್ಮೀ ಅಂದರೆ ಸಂಪತ್ತಿನ ಅಧಿದೇವತೆ , ಷಡ್ಭುಜೆಯಾದ ಈಕೆಯ ಒಂದು ಕೈಯಿಂದ ಚಿನ್ನದ ನಾಣ್ಯಗಳು ಹರಿಯುತ್ತಿರುತ್ತವೆ.
ಧಾನ್ಯಲಕ್ಷ್ಮೀ ಅಂದರೆ ದವಸ ಧಾನ್ಯಗಳ ಅಧಿದೇವತೆ , ಅಂದರೆ ಸಮೃದ್ಧವಾದ ಬೆಳೆಯನ್ನು ಕೊಡುವ ಅಷ್ಟಭುಜೆಯಾದ ಲಕ್ಷ್ಮೀದೇವಿ.
ಗಜಲಕ್ಷ್ಮೀ ಅಂದರೆ ಅಧಿಕಾರ ಹಾಗೂ ಶ್ರೇಯಸ್ಸನ್ನು ಉಂಟುಮಾಡುವಾಕೆ. ಈಕೆಯ ಅಕ್ಕಪಕ್ಕದಲ್ಲಿರುವ ಎರಡು ಆನೆಗಳು ಈಕೆಯ ಮೇಲೆ ನೀರನ್ನು ಪ್ರೋಕ್ಷಿಸುತ್ತಾ ಇರುತ್ತವೆ ,
ಸಂತಾನಲಕ್ಷ್ಮೀ ಅಂದರೆ ಹೆಸರೇ ಸೂಚಿಸುವಂತೆ ಸಂತಾನ ಭಾಗ್ಯವನ್ನು ಕರುಣಿಸುವಾಕೆ , ಮನುಷ್ಯರಿಗೆ ದೀರ್ಘವಾದ ಆಯುಸ್ಸನ್ನು ಕರುಣಿಸಿ ಪುತ್ರ ಪೌತ್ರರನ್ನೆಲ್ಲಾ ನೀಡುವಾಕೆ. ಈಕೆಯ ಮಡಿಲಲ್ಲಿ ಸದಾ ಒಂದು ಮಗು ಇರುತ್ತದೆ.
ವೀರಲಕ್ಷ್ಮೀ ಅಂದರೆ ಧೈರ್ಯಲಕ್ಷ್ಮೀ , ಮನುಷ್ಯರಿಗೆ ಧೈರ್ಯ ಹಾಗೂ ಶಕ್ತಿಗಳನ್ನು ನೀಡುವ ಅಷ್ಟಭುಜ ಲಕ್ಷ್ಮೀದೇವಿ.
ವಿಜಯಲಕ್ಷ್ಮೀ ಅಥವಾ ಜಯಲಕ್ಷ್ಮೀ ಅಂದರೆ ಮನುಷ್ಯರಿಗೆ ಅವರ ಸಕಲ ಕಾರ್ಯಗಳಲ್ಲಿ ಜಯವನ್ನು ಕರುಣಿಸುವ ಅಷ್ಟಭುಜ ಲಕ್ಷ್ಮೀದೇವಿ.
ವಿದ್ಯಾಲಕ್ಷ್ಮೀ ಅಂದರೆ ವಿದ್ಯೆ ಬುದ್ಧಿಗಳನ್ನು ನೀಡುವ ಅಧಿದೇವತೆ.

ಈ ಅಷ್ಟಲಕ್ಷ್ಮಿಯರನ್ನು ಪೂಜಿಸಿದರೆ ಅಷ್ಟ ದರಿದ್ರಗಳು ದೂರವಾಗಿ ಅಷ್ಟ ಸೌಭಾಗ್ಯಗಳು ಅಂದರೆ ಅಷ್ಟ ಐಶ್ವರ್ಯಗಳು ಲಭಿಸುತ್ತವೆ ಎಂಬುದು ನಂಬಿಕೆ. ಅಷ್ಟದರಿದ್ರಗಳು ಯಾವುವು ? ಅಷ್ಟ ಐಶ್ವರ್ಯಗಳು ಯಾವುವು ? ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಧನ , ಧಾನ್ಯ , ಗೃಹ , ಆಯುಸ್ಸು , ಧೈರ್ಯ , ಶೌರ್ಯ , ಆರೋಗ್ಯ , ಸಂತಾನ , ವಿದ್ಯೆ , ಶಾಂತಿ , ಕೀರ್ತಿಗಳೇ ಮೊದಲಾದ ಸೌಭಾಗ್ಯಗಳು ಅಷ್ಟ ಐಶ್ವರ್ಯಗಳು ಎಂದುಕೊಳ್ಳಬಹುದು. ಅವುಗಳು ಇಲ್ಲದಿದ್ದರೆ ಅದೇ ಅಷ್ಟದಾರಿದ್ರ್ಯ ಎಂದುಕೊಳ್ಳಬಹುದು.

ಒಮ್ಮೆ ಕಾಲನೇಮಿ ಎಂಬ ಒಬ್ಬ ರಾಕ್ಷಸನು ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ ಆತನಲ್ಲಿ ವಿಚಿತ್ರವಾದ ವರವೊಂದನ್ನು ಬೇಡುತ್ತಾನೆ. ತನಗೆ ಮರಣವೇ ಬರಬಾರದು ಮತ್ತು ಶ್ರೀಮನ್ನಾರಾಯಣ ನನ್ನು ಆಶ್ರಯಿಸಿ ಇದ್ದ ಆ ಅಷ್ಟಲಕ್ಷ್ಮಿಯರು ತನ್ನ ಮನೆಯಲ್ಲಿ ಬಂದು ನೆಲೆಸಬೇಕು ಎಂದು ಆತ ಬೇಡುತ್ತಾನೆ. ಅಂದರೆ ತಾನು ಚಿರಾಯುವಾಗಿದ್ದು ಅಷ್ಟ ಐಶ್ವರ್ಯಗಳಿಂದ ಕೂಡಿಕೊಂಡಿರಬೇಕು ಎಂದು ಆತ ಬಯಸುತ್ತಾನೆ. ಆಗ ಬ್ರಹ್ಮನು “ಜಾತಸ್ಯ ಮರಣಂ ಧ್ರುವಂ , ಅಂದರೆ ಹುಟ್ಟಿದವರೆಲ್ಲರೂ ಸಾಯಲೇಬೇಕು, ಆದ್ದರಿಂದ ಮರಣವೇ ಇಲ್ಲದಂತೆ ವರಕೊಡಲು ಸಾಧ್ಯವಿಲ್ಲ , ಆದರೆ ಆ ಅಷ್ಟ ಲಕ್ಷ್ಮಿಯರು ನಿನ್ನ ಮನೆಯಲ್ಲಿ ನೆಲೆಸುವಂತೆ ಮಾಡುತ್ತೇನೆ , ಅವರು ಎಲ್ಲಿಯ ತನಕ ನಿನ್ನ ಮನೆಯಲ್ಲಿ ನೆಲೆಸಿರುತ್ತಾರೋ ಅಲ್ಲಿಯ ತನಕ ನಿನಗೆ ಮರಣವಿಲ್ಲ” ಎಂಬ ವರವನ್ನು ನೀಡುತ್ತಾನೆ.

ಅಂತೆಯೇ ಅಷ್ಟಲಕ್ಷ್ಮಿಯರು ಕಾಲನೇಮಿಯ ಅರಮನೆಯಲ್ಲಿ ಹೋಗಿ ನೆಲೆಸುತ್ತಾರೆ. ಕಾಲನೇಮಿಯು ಪ್ರತಿನಿತ್ಯವೂ ಅಷ್ಟಲಕ್ಷ್ಮಿಯರನ್ನು ಭಕ್ತಿಯಿಂದ ಪೂಜಿಸುತ್ತಾ ಸಕಲ ಸೌಭಾಗ್ಯ ಗಳೊಂದಿಗೆ ಸುಖವಾಗಿರುತ್ತಾನೆ. ಇದರಿಂದಾಗಿ ಕಾಲಕ್ರಮೇಣ ಆತನಲ್ಲಿ ಅಹಂಕಾರ ಉದ್ಭವಿಸುತ್ತದೆ. ಹೀಗಾಗಿ ಆತನು ಲೋಕಕಂಟಕನಾಗುತ್ತಾನೆ. ಭೂಲೋಕದ ಜನರನ್ನೆಲ್ಲಾ ಹಿಂಸಿ ಸಿದ್ದು ಮಾತ್ರವಲ್ಲದೇ ದೇವಲೋಕದ ಮೇಲೂ ಧಾಳಿ ಮಾಡಿ ದೇವೇಂದ್ರನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಸೋತಂತಹ ದೇವೇಂದ್ರನು ಯಥಾ ಪ್ರಕಾರವಾಗಿ ಶ್ರೀಮನ್ನಾರಾಯಣ ನಲ್ಲಿಗೆ ಹೋಗಿ ದೂರುತ್ತಾನೆ. ಅಷ್ಟಲಕ್ಷ್ಮಿಯರು ಕಾಲನೇಮಿಯನ್ನು ತೊರೆಯದೇ ಇದ್ದಲ್ಲಿ ಆತನನ್ನು ಕೊಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀಮನ್ನಾರಾಯಣನು ಒಂದು ಉಪಾಯವನ್ನು ಮಾಡುತ್ತಾನೆ. ಕಾಲನೇಮಿಯು ತಾನಾಗಿ ಅಷ್ಟಲಕ್ಷ್ಮಿಯರನ್ನು ಒದ್ದು ಓಡಿಸುವಂತೆ ಮಾಡುತ್ತಾನೆ.

ಒಂದು ದಿನ ರಾತ್ರಿ ಕಾಲನೇಮಿಯು ಮಲಗಿ ಗಾಢವಾಗಿ ನಿದ್ರಿಸುತ್ತಿರುವಾಗ ಆತನಿಗೆ ಒಂದು ದುಃಸ್ವಪ್ನ ಬೀಳುತ್ತದೆ. ಆ ಕನಸಿನಲ್ಲಿ ಅಷ್ಟ ಲಕ್ಷ್ಮಿಯರು ಒಬ್ಬೊಬ್ಬರಾಗಿ ಆತನಲ್ಲಿಗೆ ಬಂದು ಆತನ ದುಷ್ಕೃತ್ಯಗಳನ್ನೆಲ್ಲ ಹೇಳಿ ಆತನಿಗೆ ಚೆನ್ನಾಗಿ ಬೈದು “ಅಹಂಕಾರದಿಂದ ಕೂಡಿರುವ ನಿನ್ನ ಮನೆಯಲ್ಲಿ ನಾನು ಇರುವುದಿಲ್ಲ , ಈ ಕ್ಷಣವೇ ನಾನು ಇಲ್ಲಿಂದ ತೆರಳುತ್ತೇನೆ” ಎನ್ನುತ್ತಾ ಪ್ರತಿಯೊಬ್ಬರೂ ತೆರಳುತ್ತಾರೆ. ಕೊನೆಯಲ್ಲಿ ವಿಕಾರ ರೂಪದ ಸ್ತ್ರೀಯೋರ್ವಳು ಬಂದು ವಿಕಟ ಅಟ್ಟಹಾಸ ಗೈಯುತ್ತಾ “ಕಾಲನೇಮೀ , ಇದೋ ನೋಡು ನಾನೇ ದರಿದ್ರ ಲಕ್ಷ್ಮೀ , ಆ ಅಷ್ಟ ಲಕ್ಷ್ಮಿಯರು ನಿನ್ನನ್ನು ತೊರೆದು ಹೋದರೆ ಹೋಗಲಿ , ನಿನ್ನೊಡನೆ ನಾನಿದ್ದೇನೆ , ನಾನು ನಿನ್ನ ಕೈಬಿಡುವುದಿಲ್ಲ” ಎನ್ನುತ್ತಾ ಆತನ ಸನಿಹಕ್ಕೆ ಬಂದು ಅವನ ಕೈಹಿಡಿಯಲು ಬರುತ್ತಾಳೆ. ನಿದ್ದೆಯಲ್ಲಿರುವ ಕಾಲನೇಮಿಯು ಅವಳಿಂದ ತಪ್ಪಿಸಿಕೊಳ್ಳುತ್ತಾ “ಛೀ , ದರಿದ್ರವೇ , ಹತ್ತಿರ ಬರಬೇಡ , ತೊಲಗು” ಎನ್ನುತ್ತಾ ಆಕೆ ಹತ್ತಿರ ಬಂದಾಗಲೆಲ್ಲ ಆಕೆಯನ್ನು ಒದೆದು ಓಡಿಸುತ್ತಾನೆ.

ಅಷ್ಟರಲ್ಲಿ ಅವನಿಗೆ ಎಚ್ಚರವಾಗುತ್ತದೆ. ಕಣ್ತೆರೆದು ನೋಡುತ್ತಾನೆ. ಆತನು ಒದೆದು ಓಡಿಸಿದ್ದು ಆ ದರಿದ್ರ ಲಕ್ಷ್ಮಿಯನ್ನಲ್ಲ , ಆತನು ಒದೆದದ್ದು ಆ ಅಷ್ಟಲಕ್ಷ್ಮಿಯರನ್ನು , ಅವನಿಗೆ ಸರಿಯಾಗಿ ಎಚ್ಚರವಾಗುವುದರೊಳಗಾಗಿ ಅಷ್ಟಲಕ್ಷ್ಮಿಯರು ಅವನನ್ನು ತೊರೆದು ವೈಕುಂಠಕ್ಕೆ ಹೋಗಿ ಆಗಿತ್ತು. ತಾನೇ ನೇರವಾಗಿ ವೈಕುಂಠಕ್ಕೆ ಹೋಗಿ ಆ ಅಷ್ಟಲಕ್ಷ್ಮಿಯರನ್ನು ಪುನಹ ಕರೆತರುತ್ತೇನೆ ಎಂದುಕೊಂಡು ಕಾಲನೇಮಿಯು ತಾನೂ ವೈಕುಂಠಕ್ಕೆ ತೆರಳುತ್ತಾನೆ. ಅಲ್ಲಿ ಅಷ್ಟಲಕ್ಷ್ಮಿಯರನ್ನು ಕೈ ಹಿಡಿದು ಎಳೆದಾಗ ಶ್ರೀಹರಿಯು ಆತನನ್ನು ತಡೆಯುತ್ತಾನೆ. ಅವರಿಬ್ಬರಿಗೂ ಯುದ್ಧವಾಗುತ್ತದೆ. ಶ್ರೀಹರಿಯು ಕಾಲನೇಮಿಯನ್ನು ಕೊಲ್ಲುತ್ತಾನೆ. ಸಾಯುವಾಗ ಕಾಲನೇಮಿಗೆ ಇದೆಲ್ಲವೂ ಈ ಶ್ರೀಮನ್ನಾರಾಯಣನ ಕುತಂತ್ರ ಎಂಬುದು ಅರ್ಥವಾಗುತ್ತದೆ. ಹೀಗಾಗಿ “ನಾನು ಇನ್ನೂ ಮೂರು ಜನ್ಮಗಳನ್ನು ತಳೆದು ಬಂದು ನಿನ್ನೊಡನೆ ದ್ವೇಷ ಸಾಧಿಸುತ್ತೇನೆ” ಎಂದು ಶಪಥ ಮಾಡುತ್ತಾನೆ. ಅದರಂತೆ ಮುಂದೆ ಕಂಸ , ಅಭಿಮನ್ಯು ಮತ್ತು ಕೌಂಡ್ಲಿಕನಾಗಿ ಜನಿಸಿ ಬರುತ್ತಾನೆ.

ಈ ಕಥೆಯಿಂದಾಗಿ ಅಷ್ಟಲಕ್ಷ್ಮಿಯರ ಪೂಜೆಯ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ. ಅರಿವಿಲ್ಲದೆಯೂ ಕೂಡಾ ಧನವನ್ನಾಗಲೀ , ಧಾನ್ಯವನ್ನಾಗಲೀ , ಹೊಸ್ತಿಲನ್ನಾಗಲೀ , ಪುಸ್ತಕ ವನ್ನಾಗಲೀ , ಆಹಾರವನ್ನಾಗಲೀ ತುಳಿಯಬಾರದು. ಏಕೆಂದರೆ ಅವೆಲ್ಲವೂ ಲಕ್ಷ್ಮಿಯ ಪ್ರತೀಕಗಳು ಎಂಬುದು ನಮ್ಮ ನಂಬಿಕೆ. ಹೀಗೆ ಈ ಅಷ್ಟ ಲಕ್ಷ್ಮಿಯರ ಬಗ್ಗೆ ಇನ್ನೂ ಅನೇಕ ಕಥೆಗಳು ಇವೆ. ಅವುಗಳಲ್ಲಿ ವಿದರ್ಭ ದೇಶದಲ್ಲಿನ ಬಡ ಗೃಹಿಣಿ ಚಾರುಮತಿಯು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿ ಸಕಲ ಐಶ್ವರ್ಯಗಳನ್ನು ಪಡೆದ ಕಥೆ ಮತ್ತು ಸಾಕ್ಷಾತ್ ಪರಮೇಶ್ವರನೇ ತನ್ನ ಮಡದಿ ಪಾರ್ವತಿಗೆ ವರಮಹಾಲಕ್ಷ್ಮೀ ವ್ರತದ ಪ್ರಾಮುಖ್ಯತೆಯನ್ನು ವಿವರಿಸಿದ ಕಥೆಗಳು ಹೆಚ್ಚು ಪ್ರಚಲಿತದಲ್ಲಿವೆ.

ಈ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ಅಂದರೆ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವುದು ರೂಢಿಯಾದರೂ ಹಿಂದೂಗಳ ಮನೆಯಲ್ಲಿ ಪ್ರತಿ ದಿನವೂ ಹೊಸ್ತಿಲು ಪೂಜೆಯನ್ನು ಮಾಡುವ ಮೂಲಕ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಆಚರಣೆಯ ವಿಧಿ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಪ್ರತಿ ಮನೆಯಲ್ಲಿಯೂ ಆಚರಿಸುವ ಕ್ರಮವಿದೆ. ಸುಮಂಗಲಿಯರೆಲ್ಲ ಕೂಡಿ ಸಾಮೂಹಿಕವಾಗಿಯೂ ಆಚರಿಸುವ ಕ್ರಮವಿದೆ. ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಅಷ್ಟಲಕ್ಷ್ಮಿ ಯರನ್ನು ಈ ಕೆಳಗಿನಂತೆ ಸ್ತುತಿಸಬಹುದು :

1) ಆದಿಲಕ್ಷ್ಮೀ :–
ಸುಮನಸ ವ೦ದಿತ ಸು೦ದರಿ ಮಾಧವಿ ಚ೦ದ್ರ ಸಹೋದರಿ ಹೇಮಮಯೇ|
ಮುನಿಗಣ ಮ೦ಡಿತ ಮೋಕ್ಷಪ್ರದಾಯಿನಿ ಮ೦ಜುಳ ಭಾಷಿಣಿ ವೇದನುತೇ|
ಪ೦ಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾ೦ತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ೦||೧||

2) ಧನಲಕ್ಷ್ಮೀ :–
ಧಿಮಿ ಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ ದು೦ದುಭಿನಾದ ಸ೦ಪೂರ್ಣಮಯೇ|
ಘಮಘಮ ಘ೦ಘಮ ಘ೦ಘಮ ಘ೦ಘಮ ಶ೦ಖನಿನಾದ ಸುವಾದ್ಯನುತೇ|
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ೦||೨||

3) ಧಾನ್ಯಲಕ್ಷ್ಮೀ :–
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮ೦ಗಳರೂಪಿಣಿ ಮ೦ತ್ರನಿವಾಸಿನಿ ಮ೦ತ್ರನುತೇ|
ಮಗಳದಾಯಿನಿ ಅ೦ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ೦||೩||

4) ಗಜಲಕ್ಷ್ಮೀ :–
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|
ರಥಗಜತುರಗಪಾದಾತಿ ಸಮಾವೃತ ಪರಿಜನ ಮ೦ಡಿತ ಲೋಕನುತೇ|
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ೦||೪||

5) ಸ೦ತಾನಲಕ್ಷ್ಮೀ :–
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವ೦ದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸ೦ತಾನಲಕ್ಷ್ಮೀ ಸದಾ ಪಾಲಯಮಾ೦||೫||

6) ವೀರಲಕ್ಷ್ಮೀ :–
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮ೦ತ್ರಸ್ವರೂಪಿಣಿ ಮ೦ತ್ರಮಯೇ|
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಞಾನವಿಕಾಸಿನಿ ಶಾಸ್ತ್ರನುತೇ|
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ೦||೬||

7) ವಿಜಯ ಲಕ್ಷ್ಮೀ :-
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಞಾನವಿಕಾಸಿನಿ ಗಾನಮಯೇ|
ಅನುದಿನಮರ್ಚಿತ ಕು೦ಕುಮನೂಪುರ ಭೂಷಿತವಾಸಿತ ವಾದ್ಯನುತೇ|
ಕನಕಧಾರಾಸ್ತುತಿ ವೈಭವ ವ೦ದಿತೆ ಶ೦ಕರ ದೇಶಿಕ ಮಾನ್ಯಪದೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ೦||೭||

8) ವಿದ್ಯಾಲಕ್ಷ್ಮೀ :-
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ೦ತಿ ಸಮಾವೃತೆ ಹಾಸ್ಯಮುಖೇ|
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ೦||೮||

(ಸಂಗ್ರಹಿತ ಚಿತ್ರ ಮತ್ತು ಸಂಗ್ರಹಿತ ಶ್ಲೋಕಗಳು)

Comments are closed.