K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

ಬೆಂಗಳೂರು : ಐಪಿಎಲ್‌ (IPL 2022) 15ನೇ ಆವೃತ್ತಿಗೆ ಸಿದ್ದತೆ ಜೋರಾಗುತ್ತಿದೆ. ವಿರಾಟ್‌ ಕೊಯ್ಲಿ ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಬಾರಿಗೆ ಯಾರು ಆರ್‌ಸಿಬಿ (RCB) ನಾಯಕ ಅನ್ನೋ ಚರ್ಚೆ ಶುರುವಾಗಿದೆ. ಈ ನಡುವಲ್ಲೇ ಕನ್ನಡಿಗ ಕೆ.ಎಲ್.ರಾಹುಲ್‌ ಪಂಜಾಬ್‌ (Punjab) ತೊರೆದು ಆರ್‌ಸಿಬಿ ಪಾಳಯ ಸೇರೋದು ಬಹುತೇಕ ಖಚಿತವಾಗಿದೆ. ಜೊತೆಗೆ ಕೆ.ಎಲ್.ರಾಹುಲ್‌ ಮಾಡಿರುವ ಆ ಒಂದು ಪೋಸ್ಟ್‌ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಳೆದ 3 ಆವೃತ್ತಿಗಳಲ್ಲಿಯೂ ಕನ್ನಡಿಗ ಕೆ.ಎಲ್.‌ ರಾಹುಲ್‌ ಭರ್ಜರಿ ಆಟದ ಪ್ರದರ್ಶನ ನೀಡಿದ್ದಾರೆ. ಪಂಜಾಬ್‌ ತಂಡದ ನಾಯಕನಾಗಿರುವ ರಾಹುಲ್‌ ಐಪಿಎಲ್‌ನಲ್ಲಿ ಈ ಬಾರಿಯೂ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಆದರೆ ತಂಡ ಕ್ವಾಲಿಫೈಯರ್‌ ಹಂತ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದ್ರೀಗ ರಾಹುಲ್‌ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಪ್ರತಿನಿಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಈ ನಡುವಲ್ಲೇ ಕೆ.ಎಲ್.ರಾಹುಲ್‌ ಮಾಡಿರುವ ಆ ಒಂದು ಟ್ವೀಟ್‌ ಇದೀಗ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕಲಿಯಲು ಸಾಕಷ್ಟಿದೆ. ನಮ್ಮ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಒಟ್ಟಾಗಿ ಒಂದು ತಂಡವಾಗಿ ಹೋರಾಟ ಮಾಡಿದ್ದೇವು. ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸಿದ್ದೇವೆ. ಪಂಜಾಬ್‌ ತಂಡವನ್ನು ಮುನ್ನೆಡೆಸಿದ್ದು ನನಗೆ ಗೌರವವಿದೆ. ಇದುವರೆಗೂ ನನಗೆ ಬೆಂಬಲಿಸಿ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ಅಲ್ಲದೇ ರಾಹುಲ್‌ ತಮ್ಮ ಟ್ವೀಟ್‌ ಅನ್ನು ಪಂಜಾಬ್‌ ತಂಡಕ್ಕೆ ಟ್ಯಾಗ್‌ ಮಾಡಿದ್ದಾರೆ.

ಕೆ.ಎಲ್.ರಾಹುಲ್‌ ಮಾಡಿರುವ ಟ್ವೀಟ್‌ ಬೆನ್ನಲ್ಲೇ ಪಂಜಾಬ್‌ ತಂಡವನ್ನು ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆರಂಭದಿಂದಲೂ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್‌ ಭರ್ಜರಿ ಆಟವನ್ನು ಪ್ರದರ್ಶಿಸಿದ್ದು, 2017ರಲ್ಲಿ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಿಂದ ದೂರ ಉಳಿದಿದ್ದರು. ಆದರೆ 2018ರಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡ ಕೆ.ಎಲ್.ರಾಹುಲ್‌ ಕೈ ಬಿಟ್ಟಿತ್ತು. ಹೀಗಾಗಿಯೇ ಪಂಜಾಬ್‌ ತಂಡ ಬರೋಬ್ಬರಿ 11 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ಅಲ್ಲದೇ ಕಳೆದ ಎರಡು ಋತುವಿನಲ್ಲಿಯೂ ಪಂಜಾಬ್‌ ತಂಡದ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ.

ಆದರೆ ಐಪಿಎಲ್‌ 15ನೇ ಆವೃತ್ತಿಗೆ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗುವ ಹಿನ್ನೆಲೆಯಲ್ಲಿ ಮೆಗಾ ಹರಾಜು ಪ್ರಕ್ರೀಯೆ ನಡೆಯಲಿದೆ. ಈ ವೇಳೆಯಲ್ಲಿ ಎಲ್ಲಾ ಆಟಗಾರರು ಹರಾಜು ಪ್ರಕ್ರಿಯೆಗೆ ಒಳಪಡುವ ಸಾಧ್ಯತೆಯಿದೆ. ಈಗಾಗಲೇ ಆರ್‌ಸಿಬಿ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್‌ ಕೊಯ್ಲಿ ಘೋಷಣೆಯನ್ನು ಮಾಡಿದ್ದಾರೆ. ಹೀಗಾಗಿ ಹೊಸ ನಾಯಕನ ಹುಡುಕಾಟದಲ್ಲಿದೆ ಬೆಂಗಳೂರು ತಂಡ. ಲಭ್ಯ ಮಾಹಿತಿಯ ಪ್ರಕಾರ ಆರ್‌ಸಿಬಿ ರಾಹುಲ್‌ಗೆ ಮಣೆ ಹಾಕುವ ಸಾಧ್ಯತೆಯಿದೆ. ಜೊತೆಗೆ ಟೀಂ ಇಂಡಿಯಾ ಮುಂದಿನ ನಾಯಕನ ಸಾಲಿನಲ್ಲಿಯೂ ಕನ್ನಡಿಗ ರಾಹುಲ್‌ ನಿಂತಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ಹಾಗೂ ರಾಹುಲ್‌ ಆರ್‌ಸಿಬಿ ಸೇರ್ಪಡೆಯ ಕುರಿತು ಎದ್ದಿರುವ ಗೊಂದಲಕ್ಕೆ ತೆರೆ ಎಳೆಯ ಬೇಕಾದ್ರೆ ಐಪಿಎಲ್‌ ಮೆಗಾ ಹರಾಜು ವರೆಗೆ ಕಾಯಲೇ ಬೇಕಾಗಿದೆ.

ಇದನ್ನೂ ಓದಿ :  ಚೆನ್ನೈ ಡೆಲ್ಲಿ ನಡುವೆ ಮೊದಲ ಕ್ವಾಲಿಫೈಯರ್‌ : ಗೆದ್ರೆ ಫೈನಲ್‌, ಸೋತ್ರು ಇದೆ ಚಾನ್ಸ್‌

ಇದನ್ನೂ ಓದಿ : DREAM 11 BAN : ಕರ್ನಾಟಕದಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಡ್ರೀಮ್‌ 11

( KL Rahul returns to RCB Bangalore squad)

Comments are closed.