KL Rahul Shubman Gill : ಶುಭಮನ್ ಗಿಲ್ ಬದಲು ಕೆ.ಎಲ್ ರಾಹುಲ್ ಯಾಕೆ ? ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ

ನಾಗ್ಪುರ: ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಮೊದಲ ಟೆಸ್ಟ್ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಭಾರತಕ್ಕೆ ತಿರುಗೇಟು ನೀಡಿದೆ. ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XIನಲ್ಲಿ ಯುವ ಓಪನರ್ ಶುಭಮನ್ ಗಿಲ್ (Shubman Gill) ಸ್ಥಾನ ಪಡೆದಿಲ್ಲ. ಉಪನಾಯಕ ಕೆ.ಎಲ್ ರಾಹುಲ್ (KL Rahul) ಅವರ ಮೇಲೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಭರವಸೆ ಇಟ್ಟಿದೆ.

ಕಳೆದ ಬಾಂಗ್ಲಾದೇಶ ಪ್ರವಾಸದಲ್ಲಿ ವಿಫಲರಾಗಿದ್ದ ಕೆ.ಎಲ್ ರಾಹುಲ್ ಬದಲು, ಶುಭಮನ್ ಗಿಲ್ ಅವರನ್ನು ಆಡಿಸಬೇಕಿತ್ತು ಎಂದು ಕೆಲವರು ವಾದಿಸುತ್ತಿದ್ದಾರೆ. ಶುಭಮನ್ ಗಿಲ್ ಭಾರತ ಪರ ಆಡಿದ ಕಳೆದ 7 ಇನ್ನಿಂಗ್ಸ್’ಗಳಲ್ಲಿ 4 ಶತಕ ಬಾರಿಸಿದ್ದು, ಅವರನ್ನೇ ಆಸೀಸ್ ವಿರುದ್ಧ ಕಣಕ್ಕಿಳಿಸಬೇಕಿತ್ತು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ಉಪನಾಯಕನೆಂಬ ಕಾರಣಕ್ಕೆ ತಂಡದಿಂದ ಕೈಬಿಡಬಾರದು ಎಂಬ ನಿಯಮವಿದೆಯೇ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ (Kapil Dev) ಕೂಡ ಪ್ರಶ್ನಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅನುನುಭವಿ ಶುಭಮನ್ ಗಿಲ್ ಬದಲು ಅನುಭವಿ ಕೆ.ಎಲ್ ರಾಹುಲ್ ಅವರನ್ನು ಆಡಿಸಲು ಕಾರಣವಿದೆ. 2016-17ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸೀಸ್ ವಿರುದ್ಧ ರಾಹುಲ್ ಅಮೋಘ ಆಟವಾಡಿದ್ದರು. ಆಡಿದ 7 ಇನ್ನಿಂಗ್ಸ್’ಗಳಲ್ಲಿ 6 ಅರ್ಧಶತಕಗಳನ್ನು ಬಾರಿಸಿ ಭಾರತ 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು. ಆ ಸರಣಿಯಲ್ಲಿ ರಾಹುಲ್ 65ರ ಸರಾಸರಿಯಲ್ಲಿ ಒಟ್ಟು 393 ರನ್ ಕಲೆ ಹಾಕಿದ್ದರು.

2016-17ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಾಹುಲ್
64, 10: ಪ್ರಥಮ ಟೆಸ್ಟ್ (ಪುಣೆ)
90, 51: ದ್ವಿತೀಯ ಟೆಸ್ಟ್ (ಬೆಂಗಳೂರು)
67: ತೃತೀಯ ಟೆಸ್ಟ್ (ರಾಂಚಿ)
60, 51*: ನಾಲ್ಕನೇ ಟೆಸ್ಟ್ (ಧರ್ಮಶಾಲಾ)

ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಮೊದಲ ಮೂರು ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಉಸ್ಮಾನ್ ಖ್ವಾಜ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರೆ, ಅನುಭವಿ ಓಪನರ್ ಡೇವಿಡ್ ವಾರ್ನರ್ ಕೂಡ ಕೇವಲ 1 ರನ್ ಗಳಿಸಿ ವೇಗಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಕ್ಲೀನ್ ಬೌಲ್ಡಾದರು. 2 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇವಿಯಾ ತಂಡವನ್ನು ಮಾರ್ನಸ್ ಲಬುಶೇನ್ ಮತ್ತು ಸ್ಟೀವನ್ ಸ್ಮಿತ್ ಆರಂಭಿಕ ಆಘಾತದಿಂದ ಪಾರು ಮಾಡಿದ್ದಾರೆ.

ಇದನ್ನೂ ಓದಿ : Test debuts for Surya and Bharat: ಟೆಸ್ಟ್ ಕ್ರಿಕೆಟ್‌ಗೆ ಸೂರ್ಯ, ಭರತ್ ಪದಾರ್ಪಣೆ, ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ತಂದೆ-ತಾಯಿ

ಇದನ್ನೂ ಓದಿ : Mayank Agarwal Double Century: ಮಯಾಂಕ್ ಮ್ಯಾಜಿಕ್; ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಕರ್ನಾಟಕ ಕ್ಯಾಪ್ಟನ್

KL Rahul instead of Shubman Gill Here is the answer for the questioner

Comments are closed.