Ranji Trophy 2022-23 : ಛತ್ತೀಸ್‌ಗಢ ವಿರುದ್ಧ ತವರು ನೆಲದಲ್ಲಿ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಕರ್ನಾಟಕ

ಬೆಂಗಳೂರು: ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ (Ranji Trophy 2023) 2ನೇ ಗೆಲುವು ದಾಖಲಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಎಲೈಟ್ ‘ಸಿ‘ ಗುಂಪಿನ ತನ್ನ 4ನೇ ಲೀಗ್ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ (Karnataka Ranji Team), ಛತ್ತೀಸ್‘ಗಢ ವಿರುದ್ಧ 7 ವಿಕೆಟ್‘ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಗೆಲುವು, 2 ಡ್ರಾಗೊಳೊಂದಿಗೆ ಅಂಕಗಳಿಕೆಯನ್ನು ಒಟ್ಟು 19ಕ್ಕೆ ಏರಿಸಿಕೊಂಡ ಕರ್ನಾಟಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.

ಪ್ರಥಮ ಇನ್ನಿಂಗ್ಸ್‘ನಲ್ಲಿ 55 ರನ್‘ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಛತ್ತೀಸ್‘ಗಢ 2 ವಿಕೆಟ್ ನಷ್ಟಕ್ಕೆ 35 ರನ್‘ಗಳಿಂದ 4ನೇ ದಿನದಾಟ ಮುಂದುವರಿಸಿತು. ಆದರೆ ಮೊದಲ ಇನ್ನಿಂಗ್ಸ್‘ನಲ್ಲಿ ಪ್ರತಿರೋಧ ತೋರಿದ್ದ ಪ್ರವಾಸಿ ಪಡೆಗೆ 2ನೇ ಇನ್ನಿಂಗ್ಸ್‘ನಲ್ಲಿ ಕರ್ನಾಟಕದ ಯುವ ಬಲಗೈ ಮಧ್ಯಮ ವೇಗಿ ವೈಶಾಖ್ ವಿಜಯ್ ಕುಮಾರ್ ಆಘಾತ ನೀಡಿದರು. ರಣಜಿ ಟ್ರೋಫಿಯಲ್ಲಿ ಮೊದಲ ಬಾರಿ ಐದು ವಿಕೆಟ್‘ಗಳ ಸಾಧನೆ ಮಾಡಿದ ವೈಶಾಖ್ 59 ರನ್ನಿಗೆ 5 ವಿಕೆಟ್ ಕಬಳಿಸಿ ಪ್ರವಾಸಿಗರನ್ನು ಕೇವಲ 177 ರನ್ನಿಗೆ ಕಟ್ಟಿ ಹಾಕಿದರು.

ನಂತರ 123 ರನ್‘ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ 23.2 ಓವರ್‘ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮಯಾಂಕ್ 14 ರನ್ನಿಗೆ ಔಟಾದ್ರೆ, ಉಪನಾಯಕ ಆರ್.ಸಮರ್ಥ್ 24 ರನ್, ಮಾಜಿ ನಾಯಕ ಮನೀಶ್ ಪಾಂಡೆ 27 ರನ್ ಹಾಗೂ ಯುವ ಬ್ಯಾಟ್ಸ್‘ಮನ್ ನಿಕಿನ್ ಜೋಸ್ ಅಜೇಯ 44 ರನ್ ಗಳಿಸಿ ಕರ್ನಾಟಕಕ್ಕೆ ಸುಲಭ ಗೆಲುವು ತಂದುಕೊಟ್ಟರು. ಛತ್ತೀಸ್‘ಗಢದ ದ್ವಿತೀಯ ಇನ್ನಿಂಗ್ಸ್‘ನಲ್ಲಿ 5 ವಿಕೆಟ್ ಕಬಳಿಸಿ ಡ್ರಾದತ್ತ ಸಾಗುತ್ತಿದ್ದ ಪಂದ್ಯವನ್ನು ಕರ್ನಾಟಕದ ತೆಕ್ಕೆಗೆ ಎಳೆದು ತಂದ ಯುವ ಮಧ್ಯಮ ವೇಗಿ ವೈಶಾಖ್ ವಿಜಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜನವರಿ 10ರಂದು ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಮೈದಾನದಲ್ಲಿ ಆರಂಭವಾಗಲಿರುವ ತನ್ನ 5ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ತಂಡದ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ : Dasun Shanaka : ಶ್ರೀಲಂಕಾ ನಾಯಕನಿಗೆ ಐಪಿಎಲ್ ಫ್ರಾಂಚೈಸಿಗಳು ಅನ್ಯಾಯ ಮಾಡಿದ್ರಾ?

ಇದನ್ನೂ ಓದಿ : Kedar Jadhav double century : ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ 283 ರನ್ ಚಚ್ಚಿದ ಟೀಮ್ ಇಂಡಿಯಾದ ಮಾಜಿ ಆಟಗಾರ

Ranji Trophy 2023 Big win at home against Chhattisgarh Karnataka climbs to the top

Comments are closed.