ಬೆಂಗಳೂರು : ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನೇಮಕವಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ರಾಹುಲ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಸಿದ್ದಾರೆ. ಈ ಮೂಲಕ ಹಿರಿಯರ ತಂಡಕ್ಕೆ ವಾಲ್ ತರಬೇತುದಾರರಾಗೋದು ಅನುಮಾನ.
ಶ್ರೀಲಂಕಾ ಸರಣಿಗೆ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಭಾರತದ ತಂಡ ಶ್ರೀಲಂಕಾ ನೆಲದಲ್ಲಿ ಅದ್ಬುತ ಆಟ ಪ್ರದರ್ಶಿಸಿತ್ತು. ಟಿ20 ವಿಶ್ವಕಪ್ ನಂತರದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ರಾಹುಲ್ ದ್ರಾವಿಡ್ ಅವರನ್ನೇ ಟೀಂ ಇಂಡಿಯಾದ ಮುಖ್ಯ ಕೋಚ್ ಅನ್ನಾಗಿ ನೇಮಕ ಮಾಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿದ್ದವು.
ಈ ನಡುವಲ್ಲೇ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹಿಂದೆ ರಾಹುಲ್ ಎನ್ಸಿಎ ಮುಖ್ಯ ಕೋಚ್ ಆಗಿ ಸಾಕಷ್ಟು ಯುವ ಕ್ರಿಕೆಟರ್ಗಳನ್ನು ಸಿದ್ದ ಪಡಿಸುವ ಕಾರ್ಯವನ್ನು ಮಾಡಿದ್ದರು. ಹೀಗಾಗಿ ರಾಹುಲ್ ಅವರೇ ಎನ್ಸಿಎ ಮುಖ್ಯ ಕೋಚ್ ಆಗಿ ಮುಂದುವರಿಯಬೇಕೆಂಬ ಮಾತುಗಳು ಕೇಳಿಬಂದಿದೆ. ಇನ್ನೊಂದೆಡೆಯಲ್ಲಿ ಟೀಂ ಇಂಡಿಯಾ ಕೋಚ್ ಆಗೋದಕ್ಕೆ ರಾಹುಲ್ ದ್ರಾವಿಡ್ ಜೊತೆಗೆ ಹಲವು ಹೆಸರುಗಳು ಕೇಳಿಬಂದಿದ್ದವು. ಇದೀಗ ರಾಹುಲ್ ಎನ್ಸಿಎಗೆ ಅರ್ಜಿ ಸಲ್ಲಿಸಿದ್ದಾರೆ.
ಎನ್ಸಿಎ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗಸ್ಟ್ 15ರ ವರೆಗೆ ಅವಕಾಶವನ್ನು ನೀಡಿತ್ತು. ಕೇವಲ ರಾಹುಲ್ ದ್ರಾವಿಡ್ ಮಾತ್ರವೇ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ ವಿಸ್ತರಣೆಯನ್ನು ಮಾಡಿದೆ. ಇನ್ನೊಂದೆಡೆಯಲ್ಲಿ ರಾಹುಲ್ ದ್ರಾವಿಡ್ ಮತ್ತೆ ಎನ್ಸಿಎ ಕೋಚ್ ಆಗಿ ಮುಂದುವರಿಯಲು ಬಯಸಿರುವ ಹಿನ್ನೆಲೆಯಲ್ಲಿ ಉಳಿದ ಕ್ರಿಕೆಟಿಗರು ಕೋಚ್ ಹುದ್ದೆಗೆ ಆಸಕ್ತಿ ತೋರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಈ ನಡುವಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಕೂಡ ಅದ್ಬುತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿರುವ ಯುವ ಆಟಗಾರರಾದ ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ ಹಾಗೂ ಶುಭಮನ್ ಗಿಲ್ ಎನ್ಸಿಎನಲ್ಲಿ ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದು, ತರಬೇತಿಯನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಸರಣಿ ಗೆಲುವಿನ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದೇನು : ವೈರಲ್ ಆಯ್ತು ವಿಡಿಯೋ
ಇದನ್ನೂ ಓದಿ : ಲಾರ್ಡ್ಸ್ ಅಂಗಳದಲ್ಲಿ ಕನ್ನಡಿಗನ ಪರಾಕ್ರಮ : ಐತಿಹಾಸಿಕ ದಾಖಲೆ ಬರೆದ ಕೆ.ಎಲ್.ರಾಹುಲ್