Ayodhya Karnataka Bhavan : ಕೋಟ್ಯಾಂತರ ಕನ್ನಡಿಗರು ಸೇರಿದಂತೆ ಈ ದೇಶದ ನೂರಾರು ಕೋಟಿ ಜನರ ಕನಸು ಅಯೋಧ್ಯೆಯಲ್ಲಿ ರಾಮಮಂದಿರ ( Ayodhya Ramamandir) . ಇನ್ನೇನು ಕೆಲ ದಿನಗಳಲ್ಲಿ ನನಸಾಗುತ್ತಿರುವ ಕನಸಿನ ಮಂದಿರವನ್ನು ನೋಡೋಕೆ ಜನರು ಕಾತರರಾಗಿದ್ದಾರೆ. ಈ ಮಧ್ಯೆ ಇನ್ಮುಂದೆ ಕಾಶಿಯಂತೆ ಪುಣ್ಯ ಕ್ಷೇತ್ರವಾಗಲಿರುವ ಅಯೋಧ್ಯೆ (Ayodhya ) ಯಲ್ಲಿ ಕನ್ನಡದ ಪ್ರವಾಸಿಗರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ಮುತುವರ್ಜಿ ವಹಿಸಿದ್ದು, ಕನ್ನಡಿಗರಿಗೆ ಸಿಹಿಸುದ್ದಿ ನೀಡಿದೆ.

ಸಾವಿರಾರು ಮೈಲು ದೂರವಿದ್ದರೂ ಅಯೋಧ್ಯೆ ಕನ್ನಡಿಗರ ಮನೆ-ಮನದೊಂದಿಗೆ ಬೆಸೆದುಕೊಂಡಿದೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಕೋಟ್ಯಾಂತರ ಕನ್ನಡಿಗರು ಕಾಶಿ ಯಾತ್ರೆಯಂತೆ ಜೀವನದಲ್ಲೊಮ್ಮೆ ಅಯೋಧ್ಯೆ ಯಾತ್ರೆ ಮಾಡಿಬರಬೇಕೆಂಬ ಕನಸು ಕಾಣುತ್ತಿದ್ದಾರೆ. ಹೀಗೆ ಅಯೋಧ್ಯೆ ಯಾತ್ರೆಗೆ ತೆರಳುವ ಕನ್ನಡಿಗರಿಗಾಗಿ ಕರ್ನಾಟಕ ಸರ್ಕಾರ ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸಜ್ಜಾಗಿದೆ.
ಈಗಾಗಲೇ ಕರ್ನಾಟಕ ಭವನ ನಿರ್ಮಾಣದ ಪ್ರಸ್ತಾವನೆಯನ್ನು ಅಯೋಧ್ಯೆಯ ಅಂದ್ರೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ ಸಲ್ಲಿಸಿದೆ. ಈ ಹಿಂದೆ ಮಾಜಿಸಿಎಂ ಬಿಎಸ್ವೈ ಕೂಡ ಮನವಿ ಸಲ್ಲಿಸಿದ್ದು, ಇದೀಗ ಮತ್ತೊಮ್ಮೆ ಸಿಎಂ ಸಿದ್ಧರಾಮಯ್ಯನವರು ಸುದೀರ್ಘವಾಗಿ ಪತ್ರ ಬರೆದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.
ಇದನ್ನೂ ಓದಿ : ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ
ಕರ್ನಾಟಕದ ಮುಜರಾಯಿ ಇಲಾಖೆಯಿಂದ ಅಧಿಕೃತವಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕರ್ನಾಟಕದಿಂದ ಲಕ್ಷಾಂತರ ಭಕ್ತರು ರಾಮಜನ್ಮಭೂಮಿ ನೋಡಲು ಆಗಮಿಸಲಿದ್ದಾರೆ. ಅವರ ಊಟ-ವಸತಿ-ಆರೋಗ್ಯ ಸೇರಿದಂತೆ ಯಾತ್ರಿಕರ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಅವಕಾಶ ಕೋರಲಾಗಿದೆ.
ಪವಿತ್ರ ಸರಯೂ ನದಿ ತೀರದಲ್ಲಿ ಐದು ಎಕರೆ ಜಾಗದಲ್ಲಿ ಬರೋಬ್ಬರಿ 10 ಕೋಟಿ ವೆಚ್ಚದಲ್ಲಿ ಯಾತ್ರಿಭವನ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ ಸರ್ಕಾರಕ್ಕೆ ಯುಪಿ ಸರ್ಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯ ಸರ್ಕಾರದ ಪತ್ರಕ್ಕೆ ಯುಪಿಯ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು ಯಾತ್ರಿ ಭವನ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಹೀಗಾಗಿ ಮುಂದಿನ ವರ್ಷದ ವೇಳೆಗೆ ಕರ್ನಾಟಕದ ಪ್ರವಾಸಿಗರಿಗೆ ಅಯೋಧ್ಯೆಯಲ್ಲಿ ಸುಸಜ್ಜಿತ ಕರ್ನಾಟಕ ಭವನ ವಾಸ್ತವ್ಯ ಸೇರಿದಂತೆ ವಿವಿಧ ರೀತಿಯ ಬಳಕೆಗೆ ಲಭ್ಯವಾಗಲಿದೆ. ಈ ಹಿಂದೆ 2020 ರಲ್ಲಿ ಸಿಎಂ ಬಿಎಸ್ವೈ ಕೂಡ ಪತ್ರ ಬರೆದು ಮನವಿ ಮಾಡಿದ್ದರು. ಈಗ ರಾಮಮಂದಿರ ಉದ್ಘಾಟನೆಗೆ ದಿನಗಣನೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಕನ್ನಡದ ಯಾತ್ರಿಕರಿಗಾಗಿ ಯಾತ್ರಿ ಭವನ ನಿರ್ಮಾಣಕ್ಕೆ ಮುಂದಾಗಿರೋದು ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಗಂಡನ ದೀರ್ಘಾಯುಷ್ಯಕ್ಕಾಗಿ ಪತ್ನಿಯರ ಕೈಗೆ ಮೆಹಂದಿ
ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳುವ ಮೂರ್ತಿಯೂ ಕನ್ನಡದ ಶಿಲ್ಪಿಯಿಂದಲೇ ನಿರ್ಮಾಣಗೊಂಡಿದ್ದು ಅನ್ನೋದು ಕನ್ನಡಿಗರಿಗೆ ಇನ್ನೊಂದು ಹೆಮ್ಮೆಯ ಸಂಗತಿಯಾಗಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ರಾಮಮಂದಿರ ಉದ್ಘಾಟನೆಯ ಸಂಭ್ರಮಕ್ಕೆ ಸ್ಪಂದಿಸಿದ್ದು, ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಹೊತ್ತಿನಲ್ಲೇ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚಿಸಿದೆ.
ಒಟ್ಟಿನಲ್ಲಿ ಶ್ರೀರಾಮ ಮಂದಿರ ಸ್ಥಾಪನೆಯ ಕನಸು ನನಸಾಗುತ್ತಿರುವ ಹೊತ್ತಿನಲ್ಲಿ ಕನ್ನಡಿಗರ ಅಯೋಧ್ಯೆ ಭೇಟಿಗೂ ಅನುಕೂಲಗಳು ಸೃಷ್ಟಿಯಾಗುತ್ತಿದ್ದು, ಏರ್ ಇಂಡಿಯಾ ಜನವರಿ 16 ರಿಂದಲೇ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಯಾನ ಸೌಲಭ್ಯ ಕಲ್ಪಿಸಿದೆ.
Karnataka Bhavan in Ayodhya Good news for Karnataka pilgrims