ಜಮೀನು ಸರ್ವೇಗೆ ಬಂದ ಅಧಿಕಾರಿಗಳ ಎದುರು ಕಾಂತಾರ ದೈವ ಬಂದಂತೆ ಹೈಡ್ರಾಮಾ ಮಾಡಿದ ವ್ಯಕ್ತಿ

ಚಿಕ್ಕಮಗಳೂರು (Chikkamagaluru News): ಭೂತ ಕಟ್ಟುವುದು, ದೈವಾರಾಧನೆ, ಕೋಲ, ನೇಮ ಇವೆಲ್ಲವೂ ಇದೀಗ ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಲಿ ಉಳಿದಿಲ್ಲ. ಕಾಂತಾರ ಸಿನಿಮಾಗಳ ಮೂಲಕ ಈ ಪವಿತ್ರ ಆಚರಣೆಯ ಬಗ್ಗೆ ಅನೇಕರಿಗೆ ತಿಳುವಳಿಕೆ ಮೂಡಿದೆ.
ಕೆಲವರಲ್ಲಿ ಭಕ್ತಿ ಭಾವ ಹೆಚ್ಚಾದರೆ ಅನೇಕರು ದೈವದ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಈ ಸಾಲಿಗೆ ಇದೀಗ ಚಿಕ್ಕಮಗಳೂರಿನ ಘಟನೆಯೊಂದು ಸೇರ್ಪಡೆಯಾಗಿದೆ.
ಜಮೀನು ಸರ್ವೇಗೆ ಬಂದ ಅಧಿಕಾರಿಗಳ ಎದುರು ನಾಟಕವಾಡಿದ ವ್ಯಕ್ತಿಯೊಬ್ಬಕೈಯಲ್ಲಿ ಬೆಂಕಿಯ ಪಂಜನ್ನು ಹಿಡಿದು ದೈವ ಬಂದವರಂತೆ ವರ್ತಿಸಿ ಬಳಿಕ ತನ್ನ ಅತ್ತಿಗೆಗೆ ಪೊಲೀಸರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಥಳಿಸಿದ್ದಾನೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆ ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈ ಗ್ರಾಮದ ನಿವಾಸಿ ಸುರೇಶ್ ಎಂಬಾತ ಈ ರೀತಿಯ ಹೈಡ್ರಾಮಾ ಮಾಡಿದ ವ್ಯಕ್ತಿ. ಸುರೇಶ್ ಹಾಗೂ ಸಹೋದರ ಹರೀಶ್ ನಡುವೆ ಪಿರ್ತಾಜಿತ ಆಸ್ತಿ ಸಂಬಂಧ ಕಳೆದ ಅನೇಕ ವರ್ಷಗಳಿಂದ ವಿವಾದವಿತ್ತು.
ಈ ಸಂಬಂಧ ಕಾನೂನು ಹೋರಾಟ ಕೂಡ ಎರಡೂ ಕುಟುಂಬಗಳ ನಡುವೆ ನಡೆಯುತ್ತಿತ್ತು. ಈ ಸಂಬಂಧ ವಿಚಾರಣೆ ನಡೆಸುತ್ತಿದ್ದ ಕೊಪ್ಪ ಜೆಎಂಎಫ್ಸಿ ಕೋರ್ಟ್ ಜಮೀನಿನ ಸರ್ವೇ ನಡೆಸಿ ಎಂದು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಜಮೀನಿಗೆ ಆಗಮಿಸಿದ ಅಧಿಕಾರಿಗಳು ಹಾಗೂ ಪೊಲೀಸರು ಸರ್ವೇಗೆ ಮುಂದಾಗಿದ್ದರು . ಈ ಸಂದರ್ಭದಲ್ಲಿ ದೈವ ಬಂದಂತೆ ನಾಟಕವಾಡಿದ ಸುರೇಶ್ ಬಳಿಕ ತಮ್ಮನ ಪತ್ನಿ ರಮ್ಯಾ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: ಬಹುಕೋಟಿ ವಂಚನೆ ಪ್ರಕರಣ : ಮಂಗಳೂರಿನ ರೋಷನ್ ಸಲ್ಮಾನರ ₹2.85 ಕೋಟಿ ಆಸ್ತಿ ಮುಟ್ಟುಗೋಲು
ಈ ವಿಚಾರವಾಗಿ ಸುರೇಶ್ ಸಹೋದರ ಹರೀಶ್ ಮಾತನಾಡಿದ್ದು, ಈ ಸರ್ವೇ ನಡೆಯುವುದನ್ನು ತಪ್ಪಿಸುವ ಸಲುವಾಗಿ ಸುರೇಶ್ ಈ ರೀತಿ ನಾಟಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ರಮ್ಯಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ನಮ್ಮ ಆಸ್ತಿಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಸುರೇಶ್ ಈ ರೀತಿ ವರ್ತನೆಯ ಮೂಲಕ ತನಿಖೆಗೆ ಅಡ್ಡಿಪಡಿಸುವ ಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.
Chikkamagaluru News koppa man intimated Officials in Kantara Style



