ಸಿಎಂ ಸಿದ್ದರಾಮಯ್ಯ ಕುರ್ಚಿಯಲ್ಲಿ ಕುಳಿತ ಡಿಸಿಎಂ ಡಿ.ಕೆ ಶಿವಕುಮಾರ್

D.K. Shivakumar : ಬೆಂಗಳೂರು : ರಾಜ್ಯದಲ್ಲಿ ಪವರ್ ಶೇರಿಂಗ್ ವಿಚಾರವಾಗಿ ಸಾಕಷ್ಟು ಏರಿಳಿತ ಸಂಭವಿಸುತ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಅಂತಾ ಡಿ.ಕೆ ಶಿವಕುಮಾರ್ ( D.K. Shivakumar) ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದರೆ, ಜನತೆಗೆ ಕೊಟ್ಟಿರುವ ಮಾತುಗಳನ್ನು ಉಳಿಸಿಕೊಂಡಿದ್ದೇನೆ ಅಂತಾ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡ್ತಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವಿನ ಕಾಳಗ ಕೇವಲ ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಸೀಮಿತವಾಗಿರದೇ ಸೋಶಿಯಲ್ ಮೀಡಿಯಾ ಪೋಸ್ಟ್ವರೆಗೂ ಹೋಗಿ ತಲುಪಿದೆ.
ಈ ನಡುವೆ ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಭಾಗಿಯಾಗಿದ್ದರು.
ಸಿಎಂ ಸಿದ್ದರಾಮಯ್ಯ ಕೆಲ ಕಾಲ ವೇದಿಕೆಯಿಂದ ವಿಶ್ರಮಿಸುತ್ತಿದ್ದಂತೆಯೇ ಅವರಿಗೆಂದು ಮೀಸಲಿದ್ದ ಆಸನದಲ್ಲಿ ಡಿ.ಕೆ ಶಿವಕುಮಾರ್ ಕುಳಿತುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಆಸನದಿಂದ ಎದ್ದು ಹೋಗುತ್ತಿದ್ದಂತೆಯೇ ಆ ಚೇರ್ ಬಂದು ಕುಳಿತ ಡಿಸಿಎಂ ಡಿ.ಕೆ ಶಿವಕುಮಾರ್ ಮಾರ್ಗರೇಟ್ ಆಳ್ವಾರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.
ಸುಮಾರು ಒಂದು ನಿಮಿಷಗಳ ಕಾಲ ಮಾತ್ರ ಸಿಎಂ ಸಿದ್ದರಾಮಯ್ಯರ ಕುರ್ಚಿಯಲ್ಲಿ ಕುಳಿತ ಡಿಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಬಳಿಕ ತಮ್ಮ ಆಸನಕ್ಕೆ ಮರಳಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಕೂಡ ವೇದಿಕೆಗೆ ಮರಳಿದ್ದು ತಮ್ಮ ಆಸನದಲ್ಲಿ ಕುಳಿತುಕೊಂಡಿದ್ದಾರೆ.
ಈ ದೃಶ್ಯ ನೋಡಿದ ಅನೇಕರು ಈ ರೀತಿಯಾದರೂ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನದ ಆಸೆ ಈಡೇರಿಸಿಕೊಳ್ಳಲಿ ಎಂದು ಮಾತನಾಡಿಕೊಂಡಿದ್ದಾರೆ.
DCM D.K. Shivakumar sitting in CM Siddaramaiah’s chair



