ಇಂದಿನಿಂದ ಶುರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಫಾರ್ಮ್​ ಭರ್ತಿ ಮಾಡದ ಜನತೆಯ ಮತದಾನದ ಹಕ್ಕಿಗೆ ಕುತ್ತು

ರಾಜ್ಯದಲ್ಲಿ ಇಂದಿನಿಂದ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಅತ್ಯಂತ ಮಹತ್ವದ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ' ಕಾರ್ಯಕ್ರಮ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ.

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಅತ್ಯಂತ ಮಹತ್ವದ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ ಕಾರ್ಯಕ್ರಮ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಮತದಾನ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ದೋಷಮುಕ್ತಗೊಳಿಸುವ ಉದ್ದೇಶದಿಂದ ಈ ಬೃಹತ್ ಮನೆಮನೆ ಸಮೀಕ್ಷೆ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಪ್ರತಿಯೊಬ್ಬ ಅರ್ಹ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇಂದಿನಿಂದ ಆರಂಭವಾಗಿರುವ ಈ ವಿಶೇಷ ಜಾಗೃತಿ ಮತ್ತು ಪರಿಶೀಲನಾ ಪ್ರಕ್ರಿಯೆಯು ಮುಂದಿನ ಜುಲೈ 29ರವರೆಗೆ ಅತ್ಯಂತ ಬಿರುಸಿನಿಂದ ರಾಜ್ಯಾದ್ಯಂತ ನಡೆಯಲಿದೆ.

ಈ ಅಭಿಯಾನದ ಭಾಗವಾಗಿ ಬಿಎಲ್​ಓಗಳು ಪ್ರತಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಮನೆಯ ಪ್ರತಿ ಸದಸ್ಯರಿಗೂ ಎಸ್​ಐಆರ್ ಎನುಮರೇಷನ್​ ಫಾರ್ಮ್​ ವಿತರಣೆ ಮಾಡಲಿದ್ದಾರೆ. 2 ಅರ್ಜಿ ಪ್ರತಿಗಳು ನಾಗರಿಕರ ಕೈ ಸೇರಲಿದ್ದು, ಅದರಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಬಳಿಕ ಒಂದು ಅರ್ಜಿ ನಮೂನೆಯನ್ನು ನಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಅರ್ಜಿಗೆ ಸಹಿ ಹಾಕಿ ಬಿಎಲ್​ಓ ಅಧಿಕಾರಿಗಳಿಗೆ ಹಿಂದುರಿಗಿಸಬೇಕು.

Also Read: ಕರಾವಳಿಗೆ ಆರೆಂಜ್ ಅಲರ್ಟ್! ಜುಲೈ 3ರಿಂದ ಮಲೆನಾಡಿನಲ್ಲಿ ಭಾರಿ ಮಳೆ

ಒಂದು ವೇಳೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮನೆಗೆ ಬಾಗಿಲು ಹಾಕಿದ್ದರೆ , ನಿಮ್ಮ ಮನೆಗೆ ಭೇಟಿ ನೀಡುವ ಮತ್ತೊಂದು ದಿನಾಂಕವನ್ನು ನಮೂದಿಸಿ ಮನೆ ಬಾಗಿಲಿಗೆ ಬಿಎಲ್​ಓಗಳು ಸ್ಟಿಕ್ಕರ್​ ಅಂಟಿಸಿ ತೆರಳುತ್ತಾರೆ. ಅಲ್ಲಿರುವ ದಿನಾಂಕದಂದು ಮನೆಯ ಸದಸ್ಯರು ಮನೆಯಲ್ಲಿ ಹಾಜರಿದ್ದು ಕಡ್ಡಾಯವಾಗಿ ಎಸ್​ಐಆರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಒಂದು ವೇಳೆ ನಾಗರಿಕರು ಈ ಗಣತಿ ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ಸಲ್ಲಿಸಲು ವಿಫಲರಾದರೆ, ಮುಂಬರುವ ದಿನಗಳಲ್ಲಿ ಅವರ ಮತದಾನದ ಹಕ್ಕಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಮತದಾರರ ಪಟ್ಟಿಯಿಂದ ಹೆಸರು ತಂತಾನೇ ಕೈಬಿಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಮಾತ್ರವಲ್ಲದೇ ರಾಜ್ಯದ ಗ್ಯಾರಂಟಿ ಯೋಜನೆಗಳ ಲಾಭ ಕೂಡ ಕೈತಪ್ಪಿ ಹೋಗಲಿದೆ.

Special revision of voter list begins today Voter registration rights of people who have not filled out the form will be affected

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »