ತಾಯಿಯ ಎದೆಹಾಲು ಕುಡಿಯುವಾಗ 41 ದಿನದ ಹಸುಗೂಸು ಸಾವು
ಈರೋಡ್: ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿಸಾಗರ ಸಮೀಪ ಮಂಗಳವಾರ ತಡರಾತ್ರಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಎದೆಹಾಲು ಸೇವಿಸುವಾಗ ಉಸಿರುಗಟ್ಟಿ 41 ದಿನದ ಹಸುಗೂಸು ಮೃತಪಟ್ಟಿದೆ.
ಪಗುತಂಪಾಳ್ಯಂ ನಿವಾಸಿಗಳಾದ ಡಿ. ನಾಗರಾಜ್ ಮತ್ತು ಶರಣ್ಯ ದಂಪತಿಯ ಪುತ್ರಿ ಕೃಷ್ಣಿತಾ (41 ದಿನ) ಮೃತಪಟ್ಟ ಮಗು. ಈ ದಂಪತಿಗೆ ಎರಡು ವರ್ಷದ ಕೃಷ್ಣಿಕಾ ಎಂಬ ಮತ್ತೊಬ್ಬ ಮಗಳಿದ್ದಾಳೆ. ಕೃಷ್ಣಿತಾ ನವೆಂಬರ್ 27, 2025 ರಂದು ಜನಿಸಿದ್ದು, ಕಳೆದ ಎರಡು ವಾರಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಳು. ಇದಕ್ಕಾಗಿ ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸುತ್ತಿದ್ದರು.
ನಡೆದಿದ್ದೇನು?
ಮಂಗಳವಾರ ರಾತ್ರಿ ಸುಮಾರು 8:30ರ ವೇಳೆಗೆ ತಾಯಿ ಶರಣ್ಯ ಮಗುವಿಗೆ ಎದೆಹಾಲು ಕುಡಿಸಿ ತನ್ನ ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ರಾತ್ರಿ 11:30ರ ಸುಮಾರಿಗೆ ಎಚ್ಚರಗೊಂಡು ನೋಡಿದಾಗ ಮಗು ಉಸಿರಾಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.
ಐಒಸಿಎಲ್ ನಲ್ಲಿ 501 ಅಪ್ರೈಂಟಿಸ್ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಈ ದಿನದ ಒಳಗೆ ಅರ್ಜಿ ಸಲ್ಲಿಸಿ
ಗಾಬರಿಗೊಂಡ ದಂಪತಿ ತಕ್ಷಣವೇ ಸತ್ಯಮಂಗಲಂನ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಭವಾನಿಸಾಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.



