ಲೋನ್‌ ವಸೂಲಿ ಹೆಸರಿನಲ್ಲಿ ಗ್ರಾಹಕರಿಗೆ ಕಿರುಕುಳ! ರಿಕವರಿ ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ

ಲೋನ್‌ ವಸೂಲಿ ಹೆಸರಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವ ರಿಕವರಿ ಏಜೆಂಟ್‌ಗಳ ವಿರುದ್ಧ RBI ಕಠಿಣ ಕ್ರಮಕ್ಕೆ ಮುಂದಾಗಿದೆ. ಹೊಸ ಕರಡು ನಿಯಮಗಳಿಂದ ಬ್ಯಾಂಕ್‌ ಗ್ರಾಹಕರಿಗೆ ದೊಡ್ಡ ಮಟ್ಟದ ರಕ್ಷಣೆ ಸಿಗುವ ಸಾಧ್ಯತೆ ಇದೆ.

ಬ್ಯಾಂಕ್‌ ಸಾಲ ವಸೂಲಿ ಹೆಸರಿನಲ್ಲಿ ನಡೆಯುತ್ತಿದ್ದ ಕಿರುಕುಳಗಳಿಗೆ ಈಗ ಕಡಿವಾಣ ಬೀಳುವ ಸಾಧ್ಯತೆ ಕಾಣಿಸಿದೆ. ಲೋನ್‌ ರಿಕವರಿ ಏಜೆಂಟ್‌ಗಳ ಅತಿರೇಕದ ವರ್ತನೆಗೆ ತಡೆ ಹಾಕಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊಸ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿಯಮ ಉಲ್ಲಂಘಿಸಿದ ಬ್ಯಾಂಕ್‌ಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು RBI ಎಚ್ಚರಿಕೆ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ಸಾಲ ಮರುಪಾವತಿ ವಿಳಂಬವಾದ ಸಂದರ್ಭಗಳಲ್ಲಿ ಗ್ರಾಹಕರಿಗೆ ಬೆದರಿಕೆ ಹಾಕುವುದು, ಅವಮಾನಿಸುವ ರೀತಿಯಲ್ಲಿ ಮಾತನಾಡುವುದು ಹಾಗೂ ಕುಟುಂಬ ಸದಸ್ಯರಿಗೂ ಕಿರುಕುಳ ನೀಡುವ ಘಟನೆಗಳು ಹೆಚ್ಚಾಗಿದ್ದವು. ಈ ಬಗ್ಗೆ RBIಗೆ ದೇಶದ ವಿವಿಧ ಭಾಗಗಳಿಂದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್‌ ಈಗ ಗಂಭೀರ ಕ್ರಮಕ್ಕೆ ಮುಂದಾಗಿದೆ.

ಹೊಸ ನಿಯಮಗಳು ಅಕ್ಟೋಬರ್‌ 1, 2026ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಾರ್ಗಸೂಚಿಗಳು ಎಲ್ಲಾ ಕಮರ್ಷಿಯಲ್‌ ಬ್ಯಾಂಕ್‌ಗಳಿಗೆ ಅನ್ವಯವಾಗಲಿವೆ. ಆದರೆ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಪೇಮೆಂಟ್‌ ಬ್ಯಾಂಕ್‌ ಹಾಗೂ ಲೋಕಲ್‌ ಏರಿಯಾ ಬ್ಯಾಂಕ್‌ಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.

RBI ಪ್ರಕಾರ, ಸಾಲ ವಸೂಲಿ ಪ್ರಕ್ರಿಯೆಯಲ್ಲಿ ಗ್ರಾಹಕರ ಗೌರವ ಮತ್ತು ಗೌಪ್ಯತೆ ಕಾಪಾಡುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಸಾಲ ಮರುಪಾವತಿ ಮಾಡದಿದ್ದರೂ ಕಾನೂನುಬಾಹಿರ ರೀತಿಯಲ್ಲಿ ಒತ್ತಡ ಹೇರುವುದು ಅಥವಾ ಮಾನಸಿಕ ಕಿರುಕುಳ ನೀಡುವುದು ಅನುಮತಿಸದು ಎಂದು ಸ್ಪಷ್ಟಪಡಿಸಿದೆ.

ಹೊಸ ಮಾರ್ಗಸೂಚಿಗಳ ಅನ್ವಯ, ರಿಕವರಿ ಏಜೆಂಟ್‌ಗಳು ನಿಗದಿತ ಸಮಯದೊಳಗೆ ಮಾತ್ರ ಗ್ರಾಹಕರನ್ನು ಸಂಪರ್ಕಿಸಬೇಕು. ಅಸಭ್ಯ ಭಾಷೆ ಬಳಕೆ, ಬೆದರಿಕೆ, ಸಾಮಾಜಿಕ ಅವಮಾನ ಅಥವಾ ಕುಟುಂಬದವರನ್ನು ಒಳಗೊಂಡು ಒತ್ತಡ ತರುವುದು ಸಂಪೂರ್ಣ ನಿಷೇಧಿಸಲಾಗಿದೆ.

ಸಾಲ ಮರುಪಾವತಿ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರಬೇಕು ಮತ್ತು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು RBI ಸೂಚಿಸಿದೆ. ಇದರಿಂದ ಬ್ಯಾಂಕ್‌ಗಳ ಮೇಲಿನ ವಿಶ್ವಾಸವೂ ಹೆಚ್ಚುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ವೈಯಕ್ತಿಕ ಸಾಲ, ಮೊಬೈಲ್‌ ಲೋನ್‌, ಕ್ರೆಡಿಟ್‌ ಕಾರ್ಡ್‌ ಬಾಕಿ ಸೇರಿದಂತೆ ವಿವಿಧ ಸಾಲಗಳ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ RBI ತೆಗೆದುಕೊಂಡಿರುವ ಈ ನಿರ್ಧಾರ ಲಕ್ಷಾಂತರ ಗ್ರಾಹಕರಿಗೆ ನೆಮ್ಮದಿ ತರಬಹುದು ಎಂಬ ಮಾತು ಕೇಳಿಬರುತ್ತಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories