ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಸಿಹಿ ಸುದ್ದಿ! ಕೇಂದ್ರದ ಹೊಸ ಯೋಜನೆ ಜಾರಿ
ರೇಷನ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಸಾರ್ಥಕ್ ಪಿಡಿಎಸ್ ಯೋಜನೆ ಜಾರಿಗೆ ಮುಂದಾಗಿದೆ. ಧಾನ್ಯಗಳ ಸಂಗ್ರಹ, ಸಾಗಣೆ ಮತ್ತು ವಿತರಣೆಯ ಮೇಲೆ ಡಿಜಿಟಲ್ ನಿಗಾ ಇರಲಿದ್ದು ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲ ಸಿಗಲಿದೆ.

ರೇಷನ್ ಕಾರ್ಡ್ದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಲಭ್ಯವಾಗುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ‘ಸಾರ್ಥಕ್ ಪಿಡಿಎಸ್’ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ರೇಷನ್ ವಿತರಣೆಯ ಸಂಪೂರ್ಣ ಪ್ರಕ್ರಿಯೆ ತಂತ್ರಜ್ಞಾನ ಆಧಾರಿತವಾಗಲಿದೆ.
ಇದುವರೆಗೆ ಧಾನ್ಯ ಸಾಗಣೆ ಮತ್ತು ವಿತರಣೆಯ ಬಗ್ಗೆ ಮಾಹಿತಿ ಪಡೆಯುವುದು ಕಷ್ಟವಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಗೋದಾಮಿನಿಂದ ಹೊರಡುವ ಧಾನ್ಯ, ನ್ಯಾಯಬೆಲೆ ಅಂಗಡಿಗೆ ತಲುಪುವ ಪ್ರಮಾಣ ಮತ್ತು ಜನರಿಗೆ ವಿತರಣೆಗೊಳ್ಳುವ ಪ್ರಮಾಣದ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಇದರಿಂದ ಅಕ್ರಮಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ಈ ಯೋಜನೆಗಾಗಿ ₹25,530 ಕೋಟಿ ಅನುದಾನ ಮೀಸಲಿಟ್ಟಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಧಾನ್ಯ ಪಡೆಯುತ್ತಿರುವ ಕೋಟ್ಯಂತರ ಜನರಿಗೆ ಇದರ ಪ್ರಯೋಜನ ದೊರೆಯಲಿದೆ. ಯೋಜನೆ ಮುಂದಿನ ಐದು ವರ್ಷಗಳ ಕಾಲ ಜಾರಿಯಲ್ಲಿರಲಿದೆ.
ಬಯೋಮೆಟ್ರಿಕ್ ಮತ್ತು ಆಧಾರ್ ಆಧಾರಿತ ದೃಢೀಕರಣದ ಮೂಲಕ ನಿಜವಾದ ಫಲಾನುಭವಿಗಳಿಗೆ ಮಾತ್ರ ರೇಷನ್ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿ ಮತ್ತು ನಿರ್ವಹಣೆ ಸೇರಿದಂತೆ ಹಲವು ಸೇವೆಗಳು ಡಿಜಿಟಲ್ ಆಗಲಿದ್ದು, ಸಾರ್ವಜನಿಕರಿಗೆ ಸಮಯ ಉಳಿತಾಯವಾಗಲಿದೆ.
ರೇಷನ್ ಅಂಗಡಿಗಳ ಕಾರ್ಯವೈಖರಿಯ ಮೇಲೂ ನಿಗಾ ಹೆಚ್ಚಲಿದ್ದು, ಸರಬರಾಜು ಸರಪಳಿಯಲ್ಲಿ ಪಾರದರ್ಶಕತೆ ತರಲು ಈ ಯೋಜನೆ ಪ್ರಮುಖ ಹೆಜ್ಜೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಗಣೆ ಹಾಗೂ ನಿರ್ವಹಣಾ ವೆಚ್ಚದಲ್ಲಿ ಸಹಾಯ ನೀಡುವ ವ್ಯವಸ್ಥೆಯೂ ಇದರಲ್ಲಿದೆ.



