ದೆಹಲಿ ಹೋಟೆಲ್ ಮಾಲೀಕನ ಕರಾಳ ಕತೆ ಬಯಲು! ಅಕ್ರಮ ಬಾಂಗ್ಲಾದೇಶಿಗರಿಗೆ ನಕಲಿ ದಾಖಲೆ ಆರೋಪ

ದೆಹಲಿ ಅಗ್ನಿ ದುರಂತದ ಬಳಿಕ ಹೋಟೆಲ್ ಮಾಲೀಕನ ವಿರುದ್ಧದ ಹಳೆಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅಕ್ರಮ ಬಾಂಗ್ಲಾದೇಶಿಗರಿಗೆ ನಕಲಿ ಭಾರತೀಯ ದಾಖಲೆ ಒದಗಿಸಿದ ಆರೋಪ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ನವದೆಹಲಿ: 21 ಜನರ ಜೀವ ಬಲಿಯಾದ ದೆಹಲಿಯ ಮಾಳವೀಯ ನಗರದ ಭೀಕರ ಅಗ್ನಿ ಅವಘಡದ ತನಿಖೆ ಮುಂದುವರಿದಂತೆ, ಹೋಟೆಲ್ ಮಾಲೀಕನ ಕುರಿತ ಹಲವು ಆಘಾತಕಾರಿ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ. ದುರಂತದ ಕೇಂದ್ರಬಿಂದುವಾಗಿರುವ ಹೋಟೆಲ್ ಮಾಲೀಕ ಲವ್ಕೇಶ್ ಬಜಾಜ್ ಈ ಹಿಂದೆಯೇ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿದ್ದ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಬಾಂಗ್ಲಾದೇಶ ಮೂಲದ ಕೆಲವರಿಗೆ ನಕಲಿ ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ ಆರೋಪದ ಮೇಲೆ ಬಜಾಜ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ವಿಚಾರಣೆ ವೇಳೆ ತನ್ನ ವಿಳಾಸವನ್ನು ಬಳಸಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶ ನೀಡಿದ್ದಾನೆ ಎಂಬ ಆರೋಪವೂ ಎದುರಾಗಿದೆ.

ಈ ಪ್ರಕರಣ ಬೆಳಕಿಗೆ ಬಂದಿದ್ದು, ಪಹಾಡ್‌ಗಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶ ಮೂಲದ ಕುಟುಂಬದ ಮೇಲೆ ನಡೆದ ಪೊಲೀಸ್ ದಾಳಿಯ ವೇಳೆ. ಮನೆ ಪರಿಶೀಲನೆಯ ಸಮಯದಲ್ಲಿ ಹಲವು ಗುರುತಿನ ದಾಖಲೆಗಳು, ಪಾಸ್‌ಪೋರ್ಟ್‌ಗಳು ಮತ್ತು ಬ್ಯಾಂಕ್ ಸಂಬಂಧಿತ ದಾಖಲೆಗಳು ಪತ್ತೆಯಾಗಿದ್ದವು. ದಾಖಲೆಗಳಲ್ಲಿದ್ದ ಹೆಸರುಗಳು ಬೇರೆಬೇರೆ ಆಗಿದ್ದರೂ ಫೋಟೋಗಳು ಒಂದೇ ವ್ಯಕ್ತಿಗಳದ್ದಾಗಿದ್ದವು ಎಂದು ತನಿಖಾ ಮೂಲಗಳು ತಿಳಿಸಿವೆ.

ಇದೀಗ ಅಗ್ನಿ ದುರಂತದ ಪ್ರಕರಣದಲ್ಲಿಯೂ ಬಜಾಜ್ ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಕಿ ಕಾಣಿಸಿಕೊಂಡ ಬಳಿಕವೂ ಸ್ಥಳದಲ್ಲಿದ್ದ ಅತಿಥಿಗಳಿಗೆ ನೆರವಾಗದೆ ಅಲ್ಲಿಂದ ತೆರಳಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಮತ್ತಷ್ಟು ಕ್ರಮ ಕೈಗೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್‌ನಲ್ಲಿ ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಕೊರತೆ, ಅನುಮತಿಗಿಂತ ಹೆಚ್ಚಿನ ಕೊಠಡಿಗಳ ನಿರ್ಮಾಣ ಹಾಗೂ ತುರ್ತು ನಿರ್ಗಮನ ವ್ಯವಸ್ಥೆಯ ಅಭಾವ ಪತ್ತೆಯಾಗಿದೆ. ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರ ಇದ್ದ ಕಾರಣ ಬೆಂಕಿ ಹೊತ್ತಿಕೊಂಡಾಗ ಹಲವರು ಹೊರಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಈ ದುರಂತ ದೇಶಾದ್ಯಂತ ಆತಂಕ ಮೂಡಿಸಿದ್ದು, ಅಕ್ರಮ ಕಟ್ಟಡಗಳು ಮತ್ತು ಅಗ್ನಿ ಸುರಕ್ಷತಾ ನಿಯಮ ಪಾಲನೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories