ತಮಿಳುನಾಡು: ತಮಿಳುನಾಡಿನ ರಾಜಕೀಯದಲ್ಲಿ ಹೊಸ ವರ್ಷದಿಂದ ಸೂಪರ್ ಸ್ಟಾರ್ ಯುಗ ಪ್ರಾರಂಭವಾಗಲಿದ್ದು, ಡಿಸೆಂಬರ್ ೩೧ ರಂದು ರಜನಿಕಾಂತ್ ರಾಜಕೀಯ ಪಕ್ಷ ಘೋಷಿಸಲಿದ್ದಾರೆ.

2021 ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಲೈವಾ ರಾಜಕೀಯಕ್ಕೆ ಧುಮುಕಲು ಸಿದ್ಧವಾಗಿದ್ದು ಡಿಸೆಂಬರ್ 31 ರಂದು ಪಕ್ಷ ಘೋಷಿಸಿ ಜನವರಿಯಿಂದ ಕಾರ್ಯಾರಂಭ ಮಾಡುವುದಾಗಿ ತಲೈವಾ ಟ್ವೀಟ್ ಮೂಲಕ ಹೇಳಿದ್ದಾರೆ.

ಈ ಮಧ್ಯೆ ರಾಜಕೀಯ ಎಂಟ್ರಿ ಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಬೆಂಗಳೂರಿಗೆ ಧಾವಿಸಿದ ಸೂಪರ್ ಸ್ಟಾರ್ ಬೆಂಗಳೂರು ನಿವಾಸಿಯಾಗಿರುವ ಸಹೋದರನ ನಿವಾಸಕ್ಕೆ ಆಗಮಿಸಿದ್ದಾರೆ.
ರಾತ್ರಿ ಆಗಮಿಸಿ ವಾಸ್ತವ್ಯ ಹೂಡಿದ ರಜನಿಕಾಂತ್, ಸಹೋದರ ಸತ್ಯನಾರಾಯಣ ಅವರೊಂದಿಗೆ ತಮ್ಮ ಅನಾರೋಗ್ಯ ಸಮಸ್ಯೆ, ರಾಜಕೀಯ ಪ್ರವೇಶದ ನಿರ್ಧಾರ, ಪಕ್ಷ ಘೋಷಣೆ ಸೇರಿದಂತೆ ಎಲ್ಲ ವಿಚಾರವನ್ನು ಹೇಳಿಕೊಂಡು ಆಶೀರ್ವಾದ ಪಡೆದಿದ್ದಾರೆ.

ಲಾಕ್ ಡೌನ್ ನಿಂದಾಗಿ ಕಳೆದ 7-8 ತಿಂಗಳಿನಿಂದ ರಜನಿಕಾಂತ್ ಸಹೋದರನ ಭೇಟಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಸಂಪೂರ್ಣ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ಬಂದಿದ್ದು ಆಶೀರ್ವಾದ ಪಡೆದು ಮರಳಿದ್ದಾರೆ.

ಈ ವಿಚಾರವನ್ನು ಅವರ ಸಹೋದರ ಸತ್ಯನಾರಾಯಣ ಖಚಿತಪಡಿಸಿದ್ದು, ತಮ್ಮ ತಮಿಳುನಾಡು ರಾಜಕೀಯಕ್ಕೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿಚಾರ ತಿಳಿದು ನನಗೆ ಖುಷಿಯಾಗಿದೆ ಎಂದಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ಘೋಷಣೆಯಾಗುವ ರಜನಿಕಾಂತ್ ಪಕ್ಷ ಮುಂಬರುವ ತಮಿಳುನಾಡು ಚುನಾವಣೆಯ ೨೩೪ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎನ್ನಲಾಗಿದ್ದು, ರಾಜಕೀಯಕ್ಕೂ ಮುನ್ನ ರಜನಿಕಾಂತ್ ಸಹೋದರನ ಆಶೀರ್ವಾದ ಪಡೆಯುವ ಮೂಲಕ ಮತ್ತ ಷ್ಟು ಬಲತುಂಬಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ