ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಿಬಿಎಂಪಿ ಹಣಕ್ಕಾಗಿ ಹಾಸಿಗೆ ಬ್ಲಾಕಿಂಗ್ ದಂಧೆಯ ವಿರುದ್ಧ ಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಶಾಸರಕಾರ ಸತೀಶ್ ರೆಡ್ಡಿ, ಉದಯ ಗರುಡಾಚಾರಾ ಹಾಗೂ ರವಿ ಸುಬ್ರಹ್ಮಣ್ಯ ಮಂಗಳವಾರ ವಿವಿಧ ವಾರ್ ರೂಂಗೆ ಭೇಟಿ ನೀಡಿ ಹಾಸಿಗೆಯನ್ನು ಹಣಕ್ಕಾಗಿ ಬ್ಲಾಕ್ ಮಾಡಿಡುವ ದಂಧೆಯನ್ನು ಬೆಳಕಿಗೆ ತಂದಿದ್ದರು. ಈ ಬಗ್ಗೆ ವಿವಿಧ ಪತ್ರಿಕೆಗಳು ವರದಿ ಪ್ರಕಟಿಸಿದ್ದು, ಪತ್ರಿಕಾ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದು, ಇದರೊಂದಿಗೆ ಲೋಕಾಯುಕ್ತ ಪೊಲೀಸರು ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಿದ್ದಾರೆ ಎಂದು ನ್ಯಾಯಮೂರ್ತಿಗಳು ವಿವರಣೆ ನೀಡಿದ್ದಾರೆ. ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಆಯುಕ್ತರು, ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯಾಯುಕ್ತರು, ವಲಯ ಆಯುಕ್ತರು ಸೇರಿದಂತೆ ಒಟ್ಟು 31 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳು ಲಭ್ಯವಿದ್ದ ಹಾಸಿಗೆ ರೋಗಿಗಳಿಗೆ ಒದಗಿಸಲಾದ ಹಾಸಿಗೆ ಚಿಕಿತ್ಸೆ ಪಡೆದವರ ವಿವರ ಸೇರಿದಂತೆ ಎಲ್ಲ ಮಾಹಿತಿಯನ್ನು ಈ ಪ್ರತಿವಾದಿ ಅಧಿಕಾರಿಗಳು ಮೂರು ವಾರದ ಒಳಗಾಗಿ ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆ ಸೂಚಿಸಿದೆ.
ಸಿಸಿಬಿಯೊಂದಿಗೆ ಪರಸ್ಪರ ಸಹಕಾರದೊಂದಿಗೆ ತನಿಖೆ ನಡೆಸಿ ಎಂದಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಮೂರು ವಾರದಲ್ಲಿ ಲೋಕಾಯುಕ್ತ ಎಡಿಜಿಪಿಗಳು ತನಿಖಾ ವರದಿ ಸಲ್ಲಿಸಬೇಕು ಎಂದಿದ್ದಾರೆ.
Comments are closed.