ಕೊರೋನಾ ಸಂಕಷ್ಟದಲ್ಲಿ ಜನರ ಸಹಾಯಕ್ಕೆ ಧಾವಿಸಿ ಉಚಿತವಾಗಿ ಲಸಿಕೆ ಕೊಡಿಸಬೇಕಿದ್ದ ಸಂಸದರು, ಖಾಸಗಿ ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇಂತಹದೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಕ್ಷೇತ್ರದ ಜನತೆಗೆ ಲಸಿಕೆ ಕೊಡಿಸಲು ಅಭಿಯಾನ ನಡೆಸುತ್ತಿರುವುದಾಗಿ ಹೇಳಿದ್ದು, 18 ವರ್ಷ ಮೇಲ್ಪಟ್ಟವರಿಗಾಗಿ ಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮೊದಲ ಹಂತದಲ್ಲಿ ರಜಿಸ್ಟ್ರೇಶನ್ ಮಾಡಿಸಿಕೊಂಡ 15 ಸಾವಿರ ಜನರಿಗೆ ಲಸಿಕೆ ದೊರೆಯಲಿದೆ. ಲಸಿಕೆಗಾಗಿ ರಜಿಸ್ಟರ್ ಮಾಡಿಕೊಂಡರೇ, ಯಾವ ದಿನಾಂಕ ಯಾವ ಸಮಯಕ್ಕೆ ಆಸ್ಪತ್ರೆಗೆ ಬರಬೇಕೆಂದು ಸೂಚಿಸಲಾಗುತ್ತದೆ ಎಂಬ ಮೆಸೆಜ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅಭಿಯಾನದ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗೆ ಹಣ ಮಾಡಿಕೊಡಲು ಸಂಸದರು ನೆರವಾಗುತ್ತಿದ್ದಾರೆ ಎಂಬ ಆರೋಪ ಜನರದ್ದು.
ವಾಸವಿ ಆಸ್ಪತ್ರೆ ಸಹಯೋಗದಲ್ಲಿ ಸಂಸದ ತೇಜಸ್ವಿ ಸೂರ್ಯ ಈ ಅಭಿಯಾನಕ್ಕೆ ಮುಂದಾಗಿದ್ದಾರೆ. ಕೊರೋನಾದಂತಹ ಸಂಕಷ್ಟದಲ್ಲಿ ಜನರು ಆರ್ಥಿಕವಾಗಿ ಸಮಸ್ಯೆಯಲ್ಲಿದ್ದಾರೆ. ಅಲ್ಲದೇ ಒಬ್ಬ ಸಂಸದರಾಗಿ ತಮ್ಮ ಕ್ಷೇತ್ರದ ಜನತೆಗೆ ಉಚಿತವಾಗಿ ಲಸಿಕೆ ಕೊಡಿಸುವುದು ಸಂಸದರ ಹೊಣೆ.
ಅದನ್ನೆಲ್ಲ ಬಿಟ್ಟು ಸಂಸದರು ಖಾಸಗಿ ಆಸ್ಪತ್ರೆಯೊಂದಿಗೆ ತಲಾ 900 ರೂಪಾಯಿಗೆ ಒಂದರಂತೆ ಲಸಿಕೆ ಮಾರಾಟಕ್ಕೆ ನಿಂತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಜನಸಾಮಾನ್ಯರದ್ದು. ಸಂಸದ ತೇಜಸ್ವಿ ಸೂರ್ಯ ನಡೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ತೀವ್ರ ಟೀಕೆಗೆ ಗುರಿಯಾಗಿದೆ.
ವಾಸವಿ ಆಸ್ಪತ್ರೆ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಈಗಾಗಲೇ 15 ಸಾವಿರ ಜನರು ಹೆಸರು ನೊಂದಾಯಿಸಿಕೊಂಡಿದ್ದು, ಮೊದಲ ಹಂತದಲ್ಲಿ ವಾಕ್ಸಿನ್ ಲಭ್ಯವಿಲ್ಲ. ಮತ್ತೊಂದು ಸೆಟ್ ನಲ್ಲಿ ಪ್ರಯತ್ನಿಸಿ ಎಂಬ ಮೆಸೆಜ್ ಖಾಸಗಿ ಆಸ್ಪತ್ರೆ ನೀಡುತ್ತಿದೆ.
ಒಟ್ಟಿನಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ ಕೊರೋನಾದಂತಹ ಸಂಘರ್ಷವನ್ನು ಎದುರಿಸಲು ಪ್ರೇರಣೆ, ಶಕ್ತಿ ತುಂಬಬೇಕಿದ್ದ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳ ಜೊತೆ ನಿಂತು ಸುಲಿಗೆಗೆ ಮುಂದಾಗಿದ್ದಾರೆ ಎಂಬ ಆರೋಪಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುರಿಯಾಗಿದ್ದಾರೆ.
Comments are closed.