ಕೋಟಿ-ಚೆನ್ನಯ್ಯರಿಗೆ ಅವಹೇಳನ : ಜಗದೀಶ್ ಅಧಿಕಾರಿ ವಿರುದ್ದ ಪ್ರಕರಣ ದಾಖಲಿಸಿದ ಬಿಲ್ಲವ ಸಂಘ

ಮೂಡಬಿದಿರೆ : ತುಳುನಾಡಿನ ವೀರಪುರುಷರೆನಿಸಿಕೊಂಡಿರುವ ಕೋಟಿ -ಚೆನ್ನಯ್ಯ ಹಾಗೂ ಹಿರಿಯ ರಾಜಕಾರಣಿ, ಪ್ರಭಾವಿ ಬಿಲ್ಲವ ಮುಖಂಡ ಜನಾರ್ಧನ ಪೂಜಾರಿ ಅವರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಬಿಲ್ಲವ ಸಂಘ ಮುಖಂಡರು ಮೂಡಬಿದಿದರೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿನ ಭಾಷಣದ ವೇಳೆಯಲ್ಲಿ ಜಗದೀಶ್ ಅಧಿಕಾರಿ ಅವರು, ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂದಿದ್ದರು. ಈ ಕುರಿತು ಆಡಿಯೋ ವೈರಲ್ ಆಗಿದ್ದು, ಸ್ಪಷ್ಟನೆ ಕೇಳಲು ಕರೆ ಮಾಡಿದ್ದ ವೇಳೆಯಲ್ಲಿ ಜಗದೀಶ್ ಅಧಿಕಾರಿಯವರು ತನ್ನ ಜೊತೆಗಿದ್ದವರ ಬಳಿ ಬಿಲ್ಲವ ಸಮುದಾಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅಲ್ಲದೇ ಕೋಟಿ – ಚೆನ್ನಯ್ಯರ ಕಥೆಯನ್ನು ಬೇರೆ ರೀತಿಯಲ್ಲಿ ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರ ಅವಹೇಳನಕಾರಿ ಮಾತುಗಳು ಬಿಲ್ಲವ ಸಮುದಾಯವನ್ನು ಕೆರಳಿಸಿದ್ದು, ಮೂಡಬಿದಿರೆಯ ಬಿಲ್ಲವ ಮುಖಂಡರು ಪೊಲೀಸರಿಗೆ ದೂರು ನೀಡಿದ್ದು, ಜಗದೀಶ್ ಅಧಿಕಾರಿಯವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ಸಂಘದ ಪದಾಧಿಕಾರಿಗಳು, ಬಿಲ್ಲವ ಸಂಘದ ಮಹಿಳಾ ಘಟಕ, ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.