ಕೋಟ : ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ಖಂಡನೆ : ಸಾರ್ವಜನಿಕರಿಂದ ಕಾಲ್ನಡಿಗೆ ಮೌನ ಪ್ರತಿಭಟನೆ

ಕೋಟ : ಪೊಲೀಸ್ ಸಿಬ್ಬಂದಿಗಳ ದೌರ್ಜನ್ಯವನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ನೇತೃತ್ವದಲ್ಲಿ ಸಾರ್ವಜಕರು ಮೌನ ಪ್ರತಿಭಟನೆ ನಡೆಸಿದ್ದಾರೆ. ಒಂದು ವಾರದೊಳಗೆ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಂಡು ತಾಯಿ ಮಗನಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.

ಕಳೆದ ತನ್ನ ತಾಯಿಯನ್ನು ಕರೆದುಕೊಂಡು ಮನೆಗೆ ತೆರಳುತ್ತಿರುವ ವೇಳೆಯಲ್ಲಿ ಪ್ರಶಾಂತ್ ಎಂಬಾತನ ಮೇಲೆ ಕೋಟ ಠಾಣೆಯ ಪೊಲೀಸರು ವಾಹನ ತಪಾಸಣೆಯ ನೆಪದಲ್ಲಿ ದೌರ್ಜನ್ಯ ನಡೆಸಿದ್ದರು. ಅಲ್ಲದೇ ಮಗನ ರಕ್ಷಣೆಗೆ ನಿಂತ ತಾಯಿಯ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆಂದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಂದು ಸಾರ್ವಜನಿಕರು ಸಾಲಿಗ್ರಾಮದಿಂದ ಕೋಟ ಹೈಸ್ಕೂಲು ವರೆಗೆ ಕಾಲ್ನಡಿಗೆಯಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಪೋಲಿಸ್ ಇಲಾಖೆ ಜನರ ಜೊತೆಗೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕೇ ವಿನಹ ಮನಬಂದಂತೆ ಕಾರ್ಯನಿರ್ವಹಿಸುವುದಕ್ಕೆ ಅಲ್ಲ. ವಾಹನ ಸವಾರರನ್ನು ಕಂಡಕಂಡಲ್ಲಿ ಅಡ್ಡಗಟ್ಟಿ ದಂಡ ವಿಧಿಸುವ ಪರಿ, ದೌರ್ಜನ್ಯ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ ಒಂದು ವಾರದೊಳಗೆ ಅಂತಹ ಪೋಲಿಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ತಾಯಿ ಮಗನಿಗೆ ನ್ಯಾಯ ದೊರಕಬೇಕು. ಇಲ್ಲವಾದಲ್ಲಿ ಇಂದಿನ ಸಾಂಕೇತಿಕ ಮೌನ ಪ್ರತಿಭಟನೆ ದೊಡ್ಡಮಟ್ಟದಲ್ಲಿ ಹಮ್ಮಿಕೊಂಡು ಠಾಣೆ ಎದುರು ಆಮರಣಾಂತಿಕ ಉಪವಾಸ ಕೈಗೊಳ್ಳುತ್ತೇವೆ ಎಚ್ಚರಿಸಿದ್ದಾರೆ.

ಕೋಟ ಹೈಸ್ಕೂಲು ಬಳಿಯಲ್ಲಿ ಉಡುಪಿ ಜಿಲ್ಲಾ ಡಿವೈಎಸ್ ಪಿ ಸುಧಾರಕ್ ನಾಯ್ಕ್ ಅವರಿಗೆ ಮನವಿಯನ್ನು ಸಲ್ಲಿಸುವ ಮೂಲಕ ತಾಯಿ ಮಗನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಪ್ರಶಾಂತ್ ತಾಯಿ ಶಾರದ, ಸುಧೀರ, ಗಿರೀಶ್ , ಸಂದೀಪ್ ಕುಂದರ್ ಕೋಡಿ, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.