ಒಂದು ದೇಶ, ಒಂದೇ ವೇತನ : ರೈತರು, ಬಡವರು, ಬೀದಿ ವ್ಯಾಪಾರಿಗಳಿಗೆ ಭರ್ಜರಿ ಗಿಫ್ಟ್

0

ನವದೆಹಲಿ : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭರ್ಜರಿ ಗಿಫ್ಟ್ ನೀಡಿದೆ. ದೇಶದಾದ್ಯಂತ ಕೇಳಿಬರುತ್ತಿದ್ದ ವೇತನ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಕನಿಷ್ಠ ವೇತನ ಪದ್ಧತಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ವೆಚ್ಚದ ವಿಶೇಷ ಪ್ಯಾಕೇಜ್ ನಡಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ. ನ್ಯಾಷನಲ್ ಫ್ಲೋರ್ ವೇಜ್ ಯೋಜನೆಯ ಚಿಂತನೆ ಸರ್ಕಾರಕ್ಕಿದೆ. ದೇಶಾದ್ಯಂತ ವಿವಿಧ ರೀತಿಯ ವೇತನ ಕ್ರಮ ಇದೆ. ಒಂದೇ ಪ್ರದೇಶದಲ್ಲೇ ವೈಭಿನ್ಯತೆ ಇದೆ. ಇದನ್ನು ನೀಗಿಸಿ ಎಲ್ಲರಿಗೂ ಸಮಾನ ಕನಿಷ್ಠ ವೇತನ ಪದ್ಧತಿಯನ್ನು ಜಾರಿಗೆ ತರಲಾಗುತ್ತದೆ. ಕನಿಷ್ಠ ವೇತನ ರೂಪಿಸಲು ಸರಳ ವಿಧಾನ ಅಳವಡಿಸಲಾಗುತ್ತದೆ. ಮುಂದಿನ ಎರಡು ತಿಂಗಳವರೆಗೆ ವಲಸಿಗರಿಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು. ಕಾರ್ಡ್ ರಹಿತರಿಗೆ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಥವಾ ರಾಜ್ಯಮಟ್ಟದ ಕಾರ್ಡ್‌ಗಳು) 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ಮಸಾಲೆ ಸಿಗಲಿದೆ.

ವಲಸಿಗರನ್ನು ಉತ್ತೇಜಿಸಲು ಮತ್ತು ಗುರುತಿಸಲು ರಾಜ್ಯ ಸರ್ಕಾರಗಳೊಂದಿಗೆ ನಾವು ನಿರತರಾಗಿದ್ದೇವೆ. ಸುಮಾರು 8 ಕೋಟಿ ವಲಸಿಗರು ಇದರ ಲಾಭ ಪಡೆಯಲಿದ್ದಾರೆ. ಮತ್ತು ಕೇಂದ್ರವು ಇದರ ವೆಚ್ಚವನ್ನು ಭರಿಸಲಿದೆ. ಇದಕ್ಕೆ 3,500 ಕೋಟಿ ರೂ. ಖರ್ಚು ಮಾಡಲಾಗುವುದು. 2021ರ ಮಾರ್ಚ್ ವೇಳೆಗೆ ದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಡಿಜಿಟಲೀಕರಣಗೊಳ್ಳಲಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಡಿ ಯಾವುದೇ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಆಹಾರ ಧಾನ್ಯ ಪಡೆಯಬಹುದಾಗಿದೆ. 23 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳು ಇದರ ಅನುಕೂಲ ಪಡೆಯಲಿದ್ದಾರೆ ಎಂದರು.

ರೈತರಿಗೆ ನಬಾರ್ಡ್ ಮೂಲಕ 30,000 ಕೋಟಿ ರೂ. ಹೆಚ್ಚುವರಿ ತುರ್ತು ಬಂಡವಾಳ ನಿಧಿಯನ್ನು ಘೋಷಣೆ ಮಾಡಲಾಗಿದ್ದು, ಸುಮಾರು 3 ಕೋಟಿ ಸಾಮಾನ್ಯ ರೈತರು 4 ಲಕ್ಷ ಕೋಟಿ ರೂ.ಗಳ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದಿದ್ದಾರೆ. ಅವರಿಗೆ ಆರ್‌ಬಿಐ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ.ಗಳ ರಿಯಾಯಿತಿ ಸಾಲವನ್ನು ನೀಡಲಾಗುವುದು. ಪಿಎಂ ಕಿಸಾನ್ ಕ್ರೆಡಿಡ್ ಕಾರ್ಡ್​ಗಳಿಗೆ ಮೀನುಗಾರರು ಮತ್ತು ಪಶು ಸಂಗೋಪನೆ ನಡೆಸುವವರನ್ನು ಸೇರಿಸಲು ಸರಕಾರ ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಈವರೆಗೂ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 2020ರ ಮಾರ್ಚ್ 1 ಮತ್ತು ಏಪ್ರಿಲ್​ 30 ನಡುವಲ್ಲಿ ಕೃಷಿ ವಲಯಕ್ಕೆ 86,600 ಕೋಟಿ ಸಾಲ ಮಂಜೂರು ಮಾಡಿದೆ. 63 ಲಕ್ಷ ರೈತರ ಇದರ ಉಪಯೋಗ ಪಡೆದುಕೊಂಡಿದ್ದಾರೆ. ನಬಾರ್ಡ್​ನಿಂದ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಿಗೆ 2020ರ ಮಾರ್ಚ್​ನಲ್ಲಿ 29,500 ಕೋಟಿ ಹಣ ಒದಗಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ 2020 ರ ಮಾರ್ಚ್‌ನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 4,200 ಕೋಟಿ ರೂ. ನೀಡಲಾಗಿದೆ. ಹಾಗೂ 2020 ರ ಮಾರ್ಚ್‌ನಿಂದ ರಾಜ್ಯ ಸರಕಾರಿ ಸಂಸ್ಥೆಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು 6,700 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲು ಮತ್ತು ಅನ್ನಾಹಾರ ಒದಗಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್ 3 ರಂದು ಸುಮಾರು 11,002 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.ಮಾರ್ಚ್ 15ರ ಅವಧಿಯಲ್ಲಿ 7,200 ನಗರ ಬಡವರ ಹೊಸ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಮೇ 1 ರವರೆಗೆ ಕನಿಷ್ಠ 14.62 ಕೋಟಿ ಮನ್ರೇಗಾ ವ್ಯಕ್ತಿಗಳ ಕೆಲಸದ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷದ ನೆನ್ನೆಯವರೆಗೆ 14.6 ಕೋಟಿ ಮನ್ರೇಗಾ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.40-50 ರಷ್ಟು ಹೆಚ್ಚು. 1.87 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 2.33 ಕೋಟಿ ವೇತನ ಪಡೆಯುವವರಿಗೆ ಕೆಲಸ ನೀಡಲಾಗಿದೆ.

ಕಂಪನಿಗಳು ನೌಕರರನ್ನು ನೇಮಕ ಮಾಡುವಾಗ ನೇಮಕಾತಿ ಪತ್ರ ಕಡ್ಡಾಯಗೊಳಿಸುವುದು ಎಂದೂ ಅವರು ಹೇಳಿದರು. ಕಾರ್ಮಿಕರಿಗೆ ಅಗತ್ಯ ಇದ್ದೆಡೆ ಮರುಕೌಶಲ್ಯ ತರಬೇತಿ ನೀಡಲಾಗುತ್ತದೆ. ವಲಸಿಗ ಕಾರ್ಮಿಕರ ವೇತನ ಹೆಚ್ಚಳಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಮನೆಗಳಿಗೆ ವಾಪಸಾಗಿರುವ ವಲಸಿಗ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಮಾತ್ರವಲ್ಲ ಕಾರ್ಮಿಕರ ವೇತನವನ್ನೂ ಹೆಚ್ಚಳ ಮಾಡಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ ನೀಡುತ್ತದೆ. ಇಂದು 9 ಪ್ರಮುಖ ನಿರ್ಧಾರಗಳನ್ನು ಘೋಷಿಸಲಾಗುವುದು. ಅದರಲ್ಲಿ ಮೂರು ವಲಸೆ ಕಾರ್ಮಿಕರಿಗೆ, ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮತ್ತೊಂದು ಗೃಹ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.