ಮಂಗಳೂರು : ಕರಾವಳಿ ಭಾಗಗಳಲ್ಲಿ ಕಳೆದೊಂದು ವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯಾಧ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗಸ್ಟ್ ಮೊದಲನೇ ವಾರದಲ್ಲೇ ಸರಿ ಸುಮಾರು 23.8 ಸೆಂ.ಮೀ ಮಳೆಯಾಗಿದ್ದು, ದಕ್ಷಿಣ ಕನ್ನಡ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಇಂದು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಸರಿ ಸುಮಾರು 20.04 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ಆಗಸ್ಟ್ 11 ವರೆಗೆ ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಮಂಗಳೂರು ತಾಲೂಕುಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ನೂರಾರು ಮನೆ, ತೋಟಗಳು ಜಲಾವೃತವಾಗಿವೆ.
102 ಅತಿಸೂಕ್ಷ್ಮ ಗ್ರಾಮಗಳ ಆಯ್ಕೆ
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಹಿನ್ನೆಲೆ 102 ಅತಿಸೂಕ್ಷ್ಮ ಗ್ರಾಮಗಳನ್ನ ಗುರುತಿಸಲಾಗಿದೆ. ಭಾರಿ ಮಳೆಯಿಂದ ಹಾನಿಯಾಗಬಹುದಾದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯತ್ ಸದಸ್ಯರಿಗೆ ಸೂಚನೆ ನೀಡಲಾಗಿದೆ.
ಬೆಳ್ತಂಗಡಿಯಲ್ಲಿ 35 ಗ್ರಾಮ, ಮೂಲ್ಕಿಯಲ್ಲಿ 17 ಗ್ರಾಮ, ಬಂಟ್ವಾಳ 15 ಗ್ರಾಮ, ಮಂಗಳೂರು 13 ಗ್ರಾಮ, ಕಡಬ 09 ಗ್ರಾಮ, ಸುಳ್ಯ 07 ಗ್ರಾಮ ಹಾಗೂ ಪುತ್ತೂರಿನಲ್ಲಿ 06 ಗ್ರಾಮಗಳನ್ಜು ಗುರುತಿಸಲಾಗಿದೆ.