ಬೆಂಗಳೂರು: ಅಪಘಾತ , ಆತ್ಮಹತ್ಯೆ ಯತ್ನ,ಕೊರೋನಾ ಹೀಗೆ ಸಂಕಷ್ಟ ಯಾವುದೇ ಇರಲಿ ತಕ್ಷಣ ನೆನಪಾಗೋದು 108. ಆದರೆ ಸರ್ಕಾರಕ್ಕೆ ಮಾತ್ರ ಮೂರು ತಿಂಗಳಿನಿಂದ 108 ಸಿಬ್ಬಂದಿ ಮರೆತಂತಿದ್ದು, ಸಂಬಳವಿಲ್ಲದೇ ಕಂಗಾಲಾಗಿರುವ ಚಾಲಕರು ಕೊರೋನಾದಂತ ಹೊತ್ತಿನಲ್ಲೂ ಹೀಗಾದ್ರೆ ಬದುಕೋದು ಹೇಗೆ ಎಂದು ಕಣ್ಣೀರಿಡುತ್ತಿದ್ದಾರೆ.
ರಾಜ್ಯದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ತಕ್ಷಣ ತುರ್ತು ಸೇವೆಗೆ ಲಭ್ಯವಾಗುವವರು 108 ಸಿಬ್ಬಂದಿ. ಸಾವಿರಾರು ಜನರ ಪ್ರಾಣ ಕಾಪಾಡಿದ 108 ಚಾಲಕರು ಮೂರು ತಿಂಗಳಿನಿಂದ ಸಂಬಳವಿಲ್ಲದೇ ತಮ್ಮ ಕುಟುಂಬವನ್ನೇ ನಿರ್ವಹಿಸಲಾರದೇ ಸೋಲುತ್ತಿದ್ದಾರೆ.
ತಿಂಗಳಿಗೆ 14,500 ರೂಪಾಯಿ ಸಂಬಳ ಪಡೆಯುವ ಸಿಬ್ಬಂದಿಗೆ ಕೊರೋನಾದಿಂದ ದಿನದ 24 ಗಂಟೆಯೂ ಮೈತುಂಬ ಕೆಲಸ. ಸರಿಯಾಗಿ ಸುರಕ್ಷತಾ ವಸ್ತುಗಳನ್ನು ನೀಡದ ಸರ್ಕಾರ, ಈಗ ಸಂಬಳವನ್ನು ನೀಡದೇ ಸತಾಯಿಸುತ್ತಿದೆ ಎಂದು ಆರೋಗ್ಯ ಕವಚ ಸಿಬ್ಬಂದಿ ಸಂಘದ ಅಧ್ಯಕ್ಷ ಚಂದ್ರು ಪುಣ್ಯಕೋಟಿ ಮಾಹಿತಿ ನೀಡಿದ್ದಾರೆ.
ಫೆಬ್ರವರಿ ತಿಂಗಳ ಸಂಬಳವನ್ನು ಮೇ 26 ರಂದು ಪಾವತಿಸಲಾಗಿದೆ. ಇನ್ನುಳಿದ ತಿಂಗಳ ಸಂಬಳ ಬಂದಿಲ್ಲ. ಕೊರೋನಾದಂತಹ ಹೊತ್ತಿನಲ್ಲಿ ಹೀಗಾದ್ರೆ ನಾವು ಕುಟುಂಬವನ್ನು ಸಲಹೋದು ಹೇಗೆ? ಕೊರೋನಾದಿಂದ ನಾವು ಅತಿಯಾದ ಕೆಲಸದ ಒತ್ತಡದಲ್ಲಿದ್ದೇವೆ. ಅದರೊಂದಿಗೆ ಸಂಬಳವಿಲ್ಲದೇ ಇದ್ದರೇ ನಮ್ಮ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು ಎಂದು ನೊಂದ ಚಾಲಕರು ಪ್ರಶ್ನೆ ಮಾಡಿದ್ದಾರೆ.
ಪಿಪಿಇ ಕಿಟ್, ಗ್ಲೌಸ್,ಸ್ಯಾನಿಟೈಸರ್ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಸಾಮಾನ್ಯ ರೋಗಿಗಳ ಜೊತೆಗೆ ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದೇವೆ. ಅಲ್ಲಿ ರೋಗಿಗಳ ಹಾಗೂ ಅವರ ಸಂಬಂಧಿಕರ ಆಕ್ರೋಶಕ್ಕೂ ನಾವೆ ಬಲಿಯಾಗುತ್ತಿದ್ದೇವೆ.
ಸರ್ಕಾರವೂ ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು 108 ಚಾಲಕರು ದೂರಿದ್ದಾರೆ. ರಾಜ್ಯದಾದ್ಯಂತ 3 ಸಾವಿರಕ್ಕೂ ಅಧಿಕ ಸಿಬ್ಬಂದಿ 108 ವಾಹನದಲ್ಲಿ ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಹಾಗೂ ರಿಸರ್ಚ್ ಇನ್ ಸ್ಟಿಟ್ಯೂಟ್ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
Comments are closed.