ಬೆಂಗಳೂರು : ಕೊರೊನಾ ಮಹಾಮಾರಿ ಇದೀಗ ಸಿಎಂ ಗೃಹ ಕಚೇರಿ ಕೃಷ್ಣಕ್ಕೆ ಎಂಟ್ರಿಕೊಟ್ಟಿದೆ. ಗೃಹ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲೀಗ ಆತಂಕ ಶುರುವಾಗಿದೆ.
ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಅಗ್ನಿಶಾಮಕ ಸಿಬ್ಬಂದಿಯ ಕೊರೊನಾ ತಪಸಣಾ ವರದಿ ಪಾಸಿಟಿವ್ ಬಂದಿದೆ. ಈ ಹಿಂದೆ ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾನ್ ಸ್ಟೇಬಲ್ ಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಪಾಳಿ ಮುಗಿಸಿಕೊಂಡು ಹೋಗಿದ್ದ ನಾಲ್ವರು ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದೆ.
ಕೃಷ್ಣಾದಲ್ಲಿ ಸಿಬ್ಬಂದಿಗಳು ಪಾಳಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಒಂದು ಪಾಳಿ ಮುಗಿದವರನ್ನು 25 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ. ಅಲ್ಲದೇ ಕೊರೊನಾ ತಪಾಸಣಾ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದವರನ್ನು ಮಾತ್ರವೇ ಮತ್ತೆ ಕೆಲಸಕ್ಕೆ ಕರೆಯಿಸಿಕೊಳ್ಳಲಾಗುತ್ತದೆ. ಇದೀಗ ನಾಲ್ವರಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕದಲ್ಲಿದವರ ಮಾಹಿತಿಯನ್ನು ಪಡೆಯಲಾಗುತ್ತಿದೆ.
ಸಿಎಂ ಗೃಹ ಕಚೇರಿಯಲ್ಲಿ ನಿತ್ಯವೂ ಸಭೆಗಳು ನಡೆಯುತ್ತಿದ್ದು, ಅಧಿಕಾರಿಗಳು ಕೂಡ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಗೃಹ ಕಚೇರಿಯ ಸಭಾಂಗಣವನ್ನು ಸಭೆ ಮುಗಿದ ಕೂಡಲೇ ಸ್ಯಾನಿಟೈಸ್ ಮಾಡಲಾಗುತ್ತದೆ. ಅಲ್ಲದೇ ಕಚೇರಿಗೆ ಬಂದು ಹೋಗುವವರನ್ನು ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ.