ಬೆಂಗಳೂರು: ಕರ್ನಾಟಕದ ಮರಾಠಿ ಭಾಷಿಕರ ಪ್ರಾಂತ್ಯಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ರಾಜ್ಯದಾದ್ಯಂತ ಕನ್ನಡಪರ ಸಂಘಟನೆಗಳು ಬೀದಿಗಿಳಿದಿವೆ. ಈ ಮಧ್ಯೆ ಸಿಎಂ ಬಿಎಸ್ವೈ ಉದ್ಧವ್ ಠಾಕ್ರೆ ಉದ್ಧಟತನ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಉದ್ಧವ್ ಠಾಕ್ರೆ ಮರಾಠಿ ಭಾಷಿಕರ ಪ್ರಾಂತ್ಯಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡುತ್ತಿದ್ದಂತೆ ಸಿಎಂ ಬಿಎಸ್ವೈ ಸರಣಿ ಟ್ವೀಟ್ ಮಾಡಿದ್ದು, ಮಹಾಜನ್ ವರದಿಯೇ ಅಂತಿಮವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಉದ್ಧವ್ ಠಾಕ್ರೆ ಉದ್ಧಟತನ ಮೆರೆದಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲ, ಭಾಷಾಂಧತೆ ಹಾಗೂ ಪ್ರಾದೇಶಿಕತೆಯ ಅತಿಯಾದ ಒಲವು ದೇಶದ ಏಕತೆಗೆ ಮಾರಕ. ಕರ್ನಾಟಕದಲ್ಲಿ ಮರಾಠಿಗಳು ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡಿಗರು ಒಂದಾಗಿ ಬೆರೆತು ಹೋಗಿದ್ದಾರೆ.
ಈ ಅನ್ಯೋನ್ಯತೆಯನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಂದಲೇ ಆಗುತ್ತಿರುವುದು ನೋವಿನ ಸಂಗತಿ ಎಂದು ಬಿಎಸ್ವೈ ಅಭಿಪ್ರಾಯಿಸಿದ್ದಾರೆ.
ಬಿಎಸ್ವೈ ಮಾತ್ರವಲ್ಲದೇ ಮಾಜಿಸಿಎಂ ಸಿದ್ಧರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ನಾಯಕರು ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿದ್ದು, ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಗಡಿ ಭಾಗದಲ್ಲಿ ಮುಂಜಾಗ್ರತ ಕ್ರಮವಾಗಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
Comments are closed.