ಮನೆ ಮಾರಿ ಓದಿಸಿದ ತಂದೆ ವಿರುದ್ಧ ತಿರುಗಿ ಬಿದ್ಲಾ ಮಗಳು…?! ಬೀದಿಗೆ ಬಂತು ನಟ ಸತ್ಯಜೀತ್ ಕೌಟುಂಬಿಕ ಕಲಹ…!!


ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಸತ್ಯಜೀತ್ ವಿರುದ್ಧ ಹಣಕ್ಕೆ ಪೀಡಿಸುವ ಆರೋಪ ಕೇಳಿಬಂದಿದ್ದು, ಸ್ವತಃ ಅವರ ಪುತ್ರಿಯೇ ತಂದೆಯ ವಿರುದ್ಧ ದೂರು ನೀಡಿದ್ದಾರೆ. ಸತ್ಯಜೀತ್ ಪುತ್ರಿ ಪೈಲಟ್ ಅಖ್ತರ್ ಸ್ವಲೇಹಾ ಬಾಣಸವಾಡಿ ಪೊಲೀಸರ ಮೊರೆ ಹೋಗಿದ್ದಾರೆ.

ನಟ ಸತ್ಯಜೀತ್ ತಾವು ಕಟ್ಟಿಸಿದ ಮನೆಯನ್ನು ಮಗಳ ಓದಿಗಾಗಿ ಮಾರಿದ್ದು, ಸದ್ಯ ಬಾಡಿಗೆ ಮನೆಯಲ್ಲೇ ಬದುಕುತ್ತಿದ್ದಾರೆ ಎನ್ನಲಾಗಿದೆ. ಗ್ರ್ಯಾಂಗೀನ್ ನಿಂದ ಒಂದು ಕಾಲು ಕಳೆದುಕೊಂಡಿರುವ ಸತ್ಯಜೀತ್ ಗೆ ಬದುಕಿನ ನಿರ್ವಹಣೆ ಗಾಗಿ ದುಡ್ಡಿನ ಅವಶ್ಯಕತೆ ಇದೆ. ಹೀಗಾಗಿ ಪುತ್ರಿಯಿಂದ ಮಾರಿದ ಮನೆಯನ್ನು ಬಿಡಿಸಿಕೊಡುವಂತೆ ಕೋರಿದ್ದರು ಎನ್ನಲಾಗಿದೆ.

ಆದರೆ ಪುತ್ರಿ ತಾನು ಪ್ರತಿತಿಂಗಳು ತಂದೆಯ ಬದುಕಿನ ನಿರ್ವಹಣೆಗಾಗಿ 1 ಲಕ್ಷ ರೂಪಾಯಿ ನೀಡುತ್ತಿದ್ದೆ. ಆದರೆ ಈಗ ನಾನು ಗರ್ಭಿಣಿ. ಕೆಲಸಕ್ಕೆ ಹೋಗುತ್ತಿಲ್ಲ. ಹೀಗಾಗಿ ತಂದೆಗೆ ದುಡ್ಡು ನೀಡಲಾಗುತ್ತಿಲ್ಲ. ಹೀಗಾಗಿ ತಂದೆ ದುಡ್ಡಿಗಾಗಿ ಪೀಡಿಸಿ ಯಾರ ಯಾರಿಂದಲೂ ಧಮಕಿ ಹಾಕಿಸಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೃತ್ತಿಯಲ್ಲಿ ಪೈಲಟ್ ಆಗಿರುವ ಪುತ್ರಿ ಅಖ್ತರ್ ಸ್ವಲೇಹಾರನ್ನು ಸತ್ಯಜೀತ್ ವಿದೇಶದಲ್ಲಿ ಓದಿಸಿದ್ದರು. ಮಗಳಿಗಾಗಿ ಕಟ್ಟಿದ ಮನೆ ಹಾಗೂ ಇದ್ದಬದ್ಧ ಹಣ ಖರ್ಚು ಮಾಡಿ ಓದಿಸಿದ್ದರು ಎನ್ನಲಾಗಿದೆ. ಆದರೆ ಪ್ರೀತಿಸಿ ಮದುವೆಯಾಗಿರುವ ಪುತ್ರಿ ಈಗ ನಮ್ಮನ್ನು ದೂರ ಇಟ್ಟಿದ್ದು, ನಾವು ಬದುಕಿಗೆ ಕಷ್ಟಪಡುವ ಸ್ಥಿತಿಯಲ್ಲಿದ್ದೇವೆ ಎಂದು ಸತ್ಯಜೀತ್ ಆರೋಪಿಸುತ್ತಿದ್ದಾರೆ.

ಇಷ್ಟೇ ಅಲ್ಲ ನಾನು ಮಗಳನ್ನು ಯಾವತ್ತು ಪೀಡಿಸಿಲ್ಲ. ವಿದೇಶದಲ್ಲಿ ಓದು ಮುಗಿಸಿದ ಮಗಳು ದೀಢೀರ್ ಬಂದು ಯಾರನ್ನೋ ಮದುವೆಯಾಗುತ್ತೇನೆ ಎಂದಳು ಮದುವೆ ಮಾಡಿಸಿದೆ. ಆದರೆ ಈಗ ನಮ್ಮ ವಿರುದ್ಧ ವೇ ಪೊಲೀಸರಿಗೆ ದೂರು ನೀಡಿ ಪೀಡಿಸುತ್ತಿದ್ದಾಳೆ ಎಂದು ಸತ್ಯಜೀತ್ ಕಣ್ಣೀರಿಟ್ಟಿದ್ದಾರೆ. ಮಗಳಿಗೆ ಯಾರೋ ನಮ್ಮ ವಿರುದ್ಧ ವರ್ತಿಸಲು ಪ್ರೇರೇಪಿಸುತ್ತಿದ್ದಾರೆ ಎಂದು ಸತ್ಯಜಿತ್ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಮನೆ ಮಾರಾಟ ಹಾಗೂ ಜೀವನ ನಿರ್ವಹಣೆಯ ಹಣಕ್ಕಾಗಿನ ತಂದೆ-ಮಗಳ ನಡುವಿನ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕನ್ನಡದ ನೂರಾರು ಚಿತ್ರಗಳಲ್ಲಿ ನಟಿಸಿರುವ ಪೋಷಕ ನಟ ಸತ್ಯಜೀತ್ ಕಂಗಾಲಾಗಿದ್ದಾರೆ.   

Comments are closed.