ಬೆಳ್ಳಿ ತೆರೆಗೆ ಸಕ್ಕರೆ ನಾಡಿನ ರಾಜಕೀಯ….! ಸಿನಿಮಾ ರೂಪದಲ್ಲಿ ಬರಲಿದ್ಯಾ ಸುಮಲತಾ ಬದುಕು…!?

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ, ಪ್ರಚಾರ ಹಾಗೂ ರಾಜಕೀಯ ಮೇಲಾಟ ಯಾವ ಸಿನಿಮಾ ಕತೆಗೂ ಕಡಿಮೆ ಇರಲಿಲ್ಲ.  ದಿ.ನಟ ಅಂಬರೀಶ್ ಕೊನೆಯಾಸೆಯಂತೆ ಚುನಾವಣೆಗೆ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ ಹೋರಾಟದ ಕತೆ ಸಿನಿಮಾ ಆಗ್ತಿದ್ಯಾ? ಹೌದು ಅಂತಿದೆ ಸ್ಯಾಂಡಲ್ ವುಡ್.

ಸ್ಯಾಂಡಲ್ ವುಡ್ ನಂಟಿನ ಸುಮಲತಾ ಹಾಗೂ ಅಂಬರೀಶ್ ಮಂಡ್ಯದ ನಂಟು ಇಟ್ಟುಕೊಂಡೇ ಬೆಳೆದುಬಂದವರು. ಆದರೆ ಅಂಬರೀಶ್ ನಿಧನದ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್ ಆಡಳಿತದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಎದುರು ಹಾಕಿಕೊಂಡು ಗೆಲುವು ಸಾಧಿಸಿದ್ದರು.

ಸುಮಲತಾ ಅಂಬರೀಶ್ ವಿರುದ್ಧ ಆಗಿನ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಕತೆ ಇದೀಗ ಸಿನಿಮಾ ಅಥವಾ ವೆಬ್ ಸೀರಿಸ್ ರೂಪದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಇಂತಹದೊಂದು ಸುದ್ದಿ ಹರಿದಾಡುತ್ತಿರೋದಿಕ್ಕೆ ಪ್ರಮುಖ ಕಾರಣ ನಿರ್ದೇಶಕ ಗುರುದೇಶಪಾಂಡೆ ಇತ್ತೀಚಿಗೆ ಸಂಸದೆ ಸುಮಲತಾರನ್ನು ಭೇಟಿ ಮಾಡಿದ್ದು. ಹೌದು ನಿರ್ದೇಶಕ ಗುರುದೇಶಪಾಂಡೆ ಇತ್ತೀಚಿಗಷ್ಟೇ ಸಂಸದೆ ಸುಮಲತಾರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸಂಸದೆ ಸುಮಲತಾ ಆಪ್ತ ರಾಕ್ ಲೈನ್ ವೆಂಕಟೇಶ್ ಕೂಡ ಹಾಜರಿದ್ದರು.

ಮೂಲಗಳ ಮಾಹಿತಿ ಪ್ರಕಾರ, ಸುಮಲತಾ ರಾಜಕೀಯ ಹಾಗೂ ಸಿನಿಮಾ ಕೆರಿಯರ್ ರನ್ನು ಸಿನಿಮಾ ಅಥವಾ ವೆಬ್ ಸೀರಿಸ್ ರೂಪದಲ್ಲಿ ಹೊರತರಲು ಮಾತುಕತೆ ನಡೆದಿದೆ.

ಇದಕ್ಕೆ ಸಂಸದೆ ಹಾಗೂ ನಟಿ ಸುಮಲತಾ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.

ಆದರೆ ಅಧಿಕೃತವಾಗಿ ಈ ವಿಚಾರವನ್ನು ಸುಮಲತಾ ಅಂಬರೀಶ್ ಅಥವಾ ನಿರ್ದೇಶಕ ಗುರುದೇಶಪಾಂಡೆ ಯಾರೂ ಖಚಿತಪಡಿಸಿಲ್ಲ. ಇನ್ನು ಒಂದೊಮ್ಮೆ ಈ ವೆಬ್ ಸೀರಿಸ್ ಹೊರಬಂದ್ರೆ ಅದರಲ್ಲಿ ರಾಜಕೀಯ ಜಿದ್ದಾಜಿದ್ದಿ ಹೋರಾಟದ ಚಿತ್ರಣ ಇರಲೇ ಬೇಕು. ಅಂದ ಮೇಲೆ ಅದರಲ್ಲಿ ನಿಖಿಲ್ ಕುಮಾರಸ್ವಾಮಿ ಪಾತ್ರ ಇರುತ್ತಾ? ಇದ್ದರೇ ಯಾರು ನಿಭಾಯಿಸುತ್ತಾರೆ ಎಂಬ ಕುತೂಹಲವೂ ಸೃಷ್ಟಿಯಾಗಿದ್ದು, ಇದಕ್ಕೆಲ್ಲ ನಿರ್ದೇಶಕರೇ ಉತ್ತರಿಸಬೇಕಿದೆ.  

Comments are closed.