ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ ಸರಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ ಸರಕಾರಿ ನೌಕರರ ಕೆಲಸದ ಅವಧಿ, ಸಾಮಾಜಿಕ ಅಂತರ, ಮಾರ್ಗಸೂಚಿಗಳ ಪಾಲನೆ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ಮುಂದೆ ಸರಕಾರಿ ಕಚೇರಿಗಳು ಕೇವಲ 5 ದಿನ ಮಾತ್ರವೇ ಓಪನ್ ಆಗಿರಲಿದ್ದು, ಶನಿವಾರ ಹಾಗೂ ಭಾನುವಾರ ರಜೆ ಘೋಷಿಸಲಾಗಿದೆ. ಅಲ್ಲದೇ ನೌಕರರು ಕೂಡ ಪಾಳಿಯಲ್ಲಿ ಕೆಲಸ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ತಜ್ಞರ ಸಲಹೆಯ ಆಧಾರದ ಮೇಲೆ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಾರದಲ್ಲಿ ಕೇವಲ 5 ದಿನಗಳ ಮಾತ್ರವೇ ಕಚೇರಿಗಳನ್ನು ತೆರೆಯಲು ಮುಂದಾಗಿದೆ. ಹೀಗಾಗಿ ಭಾನುವಾರದ ಜೊತೆಗೆ ಶನಿವಾರವೂ ಕೂಡ ಸರಕಾರಿ ನೌಕರರಿಗೆ ರಜೆ ಘೋಷಿಸಲಾಗಿದೆ. ಸದ್ಯಕ್ಕೆ ಈ ನಿಯಮಗಳು ಜುಲೈ ತಿಂಗಳ ಅಂತ್ಯದ ವರೆಗೆ ಜಾರಿಯಲ್ಲಿರಲಿದೆ. ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ರೆ ನಿಯಮ ಇನ್ನಷ್ಟು ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯೂ ಇದೆ.
ಸರಕಾರಿ ಕಚೇರಿಗಳು ವಾರದಲ್ಲಿ 5 ದಿನಗಳ ಕಾಲ ಕಾರ್ಯನಿರ್ವಹಿಸಿದ್ರೂ ಕೂಡ ಸರಕಾರಿ ನೌಕರರು ವಾರದಲ್ಲಿ 5 ದಿನಗಳ ಕಾರ್ಯ ಕೆಲಸ ಮಾಡುವಂತಿಲ್ಲ. ಸರಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರು ಪಾಳಿಯಲ್ಲಿ ಕೆಲಸವನ್ನು ನಿರ್ವಹಿಸಲು ಸೂಚನೆಯನ್ನು ನೀಡಲಾಗಿದೆ. ಒಂದು ದಿನ ಕೆಲಸಕ್ಕೆ ಬಂದವರು, ಮರುದಿನ ಕೆಲಸಕ್ಕೆ ಬರುವಂತಿಲ್ಲ. ದಿನ ಬಿಟ್ಟು ದಿನ ಕೆಲಸಕ್ಕೆ ಹಾಜರಾಗಬೇಕು.
ಕೊರೊನಾ ಸೋಂಕು ಹೆಚ್ಚಳವಾಗಿರುವ ಪ್ರದೇಶಗಳಲ್ಲಿ ಆಯಾಯಾ ಸಂಸ್ಥೆಯ ಮುಖ್ಯಸ್ಥರೇ ಈ ಕುರಿತು ನಿರ್ಧಾರವನ್ನು ಕೈಗೊಳ್ಳಲು ಸರಕಾರ ಸೂಚನೆಯನ್ನು ನೀಡಿದ್ದು, ನಿತ್ಯವೂ ಶೇ.50 ರಷ್ಟು ನೌಕರರು ಮಾತ್ರವೇ ಕಾರ್ಯನಿರ್ವಹಿಸಬೇಕಾಗಿದೆ.