ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕನಿಗೆ ರಿಷಬ್ ಶೆಟ್ಟಿ ಸನ್ಮಾನ : ಕಾಂತಾರ ಸಿನಿಮಾಗೂ ಈ ದೈವ ನರ್ತಕನಿಗೂ ಇದೆ ವಿಶೇಷ ನಂಟು
ಕಾಂತಾರ ಚಾಪ್ಟರ್1 ಸಿನಿಮಾ ಜಗತ್ತಿನಾದ್ಯಂತ ಹೊಸ ಇತಿಹಾಸವನ್ನೇ ಬರೆದಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿರುವ ಕಾಂತಾರ ಚಾಪ್ಟರ್ 1 ಸಿನಿಮಾ ರಿಷಬ್ ಶೆಟ್ಟಿಯವರ ಗರಿಮೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ದೈವನರ್ತಕನ ಪಾತ್ರದ ಮೂಲಕ ಜಗದ್ವಿಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾದ ಯಶಸ್ಸಿನ ಬಳಿಕ ಇದೇ ಮೊದಲ ಬಾರಿಗೆ ಕಡಲನಗರಿ ಮಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯೋತ್ಸವ ಪುರಸ್ಕೃತ ದೈವ ನರ್ತಕ ಉಮೇಶ್ ಪಂಬದರಿಗೆ ರಿಷಬ್ ಗೌರವ ಸನ್ಮಾನ ಅರ್ಪಿಸಿದ್ದಾರೆ.
ಮಂಗಳೂರು ನಗರದ ಉರ್ವ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಸೇರಿದಂತೆ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಂಗಳೂರಿಗೆ ಆಗಮಿಸಿದ ರಿಷಬ್ ಶೆಟ್ಟಿಗೆ ಹಾರ ಹಾಕಿ ಬ್ಯಾಂಡ್ ವಾದ್ಯಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯ್ತು. ಉಮೇಶ್ ಪಂಬಂದ ದಂಪತಿಯನ್ನು ಸನ್ಮಾನಿಸಿದ ನಟ ರಿಷಬ್ ಬಳಿಕ ಜಾನಪದ ಪಾಡ್ದನ ಕಲಾವಿದೆ ಸಿಂಧೂ ಗುಜರನ್ ಎಂಬವರನ್ನೂ ಸನ್ಮಾನಿಸಿದರು.

ಪ್ರಸಕ್ತ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಉಮೇಶ್ ಪಂಬದರಿಗೂ ಕಾಂತಾರ ಚಾಪ್ಟರ್ 1 ಸಿನಿಮಾಗೂ ಒಂದು ನಂಟಿದೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ಪಂಜುರ್ಲಿ ದೈವಕ್ಕೆ ಚಿತ್ರತಂಡ ಕೋಲ ಸೇವೆ ನೀಡಿದ್ದು ನೆನಪಿದ್ದಿರಬಹುದು. ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ಮನೆಯಲ್ಲಿ ನಡೆದಿದ್ದ ಕೋಲ ಸೇವೆಯಲ್ಲಿ ಇದೇ ಉಮೇಶ್ ಪಂಬದ ಅಣ್ಣಪ್ಪ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು.ಇದೇ ಕೋಲ ಸೇವೆಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಮಾಡಲು ದೈವ ಸಮ್ಮತಿ ನೀಡಿತ್ತು.
ಇದನ್ನೂ ಓದಿ: ವುಮೆನ್ ಕಾರ್ಡ್ ಇಲ್ಲಿ ವರ್ಕ್ ಆಗಲ್ಲ, ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್ ಪಂಬದ ಮೂಲತಃ ಮಂಗಳೂರು ತಾಲೂಕಿನ ಯೆಯ್ಯಾಡಿ ಒಳಗುಡ್ಡೆ ನಿವಾಸಿಯಾಗಿದ್ದಾರೆ. ಅನೇಕ ವರ್ಷಗಳಿಂದ ಉಮೇಶ ಪಂಬಂದರು ದೈವ ನರ್ತನ ಸೇವೆ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗಮನಿಸಿದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.



