ವಿದೇಶಕ್ಕೆ ಪಲಾಯನ ಗೈಯ್ಯುವ ಶಂಕೆ….! ರಾಜ್ ಕುಂದ್ರಾಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ…!!

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಜೈಲು ಸೇರಿರುವ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾಗೆ ಸದ್ಯ ಜೈಲೇ ಗತಿ ಎಂಬಂತಾಗಿದೆ. ರಾಜ್ ಕುಂದ್ರಾ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ತಳ್ಳಿ ಹಾಕಿದೆ.

ರಾಜ್ ಕುಂದ್ರಾ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಇನ್ನೂ ಪ್ರಕರಣದ ಸಂತ್ರಸ್ಥರಿಂದ ಹೇಳಿಕೆ ಪಡೆಯಬೇಕಿದೆ. ಈ ಹಂತದಲ್ಲಿ ರಾಜ್ ಕುಂದ್ರಾಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಮುಂಬೈ ಸಿಸಿಬಿ ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಆದರೆ ರಾಜ್ ಕುಂದ್ರಾ ಪರ ವಾದ ಮಂಡಿಸಿದ ವಕೀಲರು, ರಾಜ್ ಕುಂದ್ರಾ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಲ್ಲದೇ ರಾಜ್ ಕುಂದ್ರಾ ಮುಂಬೈನಲ್ಲೇ ಕುಟುಂಬದ ಜೊತೆ ವಾಸವಾಗಿದ್ದಾರೆ. ಹೀಗಾಗಿ ತನಿಖೆಗೆ ಅಸಹಕಾರ ನೀಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ವಿನಾಕಾರಣ ಅವರನ್ನು ಜೈಲಿನಲ್ಲಿಡುವ ಬದಲು ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.

ಆದರೆ ಮುಂಬೈ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ ಕುಂದ್ರಾ ಬ್ರಿಟನ್ ನ ಪೌರತ್ವ ಹೊಂದಿದ್ದಾರೆ. ಅಲ್ಲದೇ ಪಾಸ್ ಪೋರ್ಟ್ ಗಳು ಅವರ ಬಳಿಯೇ ಇದೆ. ಹೀಗಾಗಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪ ಸಲ್ಲಿಸಿದರು.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ರಾಜ್ ಕುಂದ್ರಾ ಜಾಮೀನು ಅರ್ಜಿ ವಜಾಗೊಳಿಸಿದೆ. ನಿನ್ನೆಯಷ್ಟೇ ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನ್ಯಾಯಾಲಯದ ಈ ಆದೇಶದಿಂದ ರಾಜ್ ಕುಂದ್ರಾಗೆ ಜೈಲೇ ಗತಿಎಂಬಂತಾಗಿದ್ದು, ಕುಂದ್ರಾ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ.  

Comments are closed.