ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ : ಶಾಲಾ ಮಕ್ಕಳಿಗೆ ಪಾಠವಾಗಲಿದೆ ಪುನೀತ್ ಜೀವನಗಾಥೆ
ಅಭಿಮಾನಿಗಳ ಪಾಲಿನ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ನಿಧನರಾಗಿ 4 ವರ್ಷಗಳು ಕಳೆದಿದೆ. ಪುನೀತ್ ರಾಜ್ಕುಮಾರ್ ಅವರ ಬದುಕನ್ನು ಆದರ್ಶ ಮಾಡಿಕೊಳ್ಳಬೇಕು ಎಂದು ಹೇಳುವವರಿಗೆ ಇದೀಗ ಸಿಹಿಸುದ್ದಿಯೊಂದು ದೊರಕಿದೆ. ಇನ್ಮುಂದೆ ಪುನೀತ್ ಜೀವನಗಾಥೆ ಶಾಲಾ ಪಾಠವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಗೆ ಅಪ್ಪು ಪಾಠ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
4 ವರ್ಷಗಳಿಂದ ರಾಜ್ಯಾದಂತ ಪ್ರವಾಸ ಮಾಡಿ ಈ ಬಗ್ಗೆ ಜನಜಾಗೃತಿ ಮೂಡಿಸಿದ್ದ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರಾಜ ಅರಸು ಹೋರಾಟಕ್ಕೆ ಫಲ ಸಿಕ್ಕಿದೆ. ಕನ್ನಡ ಪಠ್ಯ ಪರಿಷ್ಕರಣಾ ಸಮಿತಿಯಿಂದ ಈ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮುಡುಕೊತೊರೆ ಗ್ರಾಮದ ದೇವರಾಜ ಅರಸು ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ ಸೇರಿದಂತೆ ಹಲವರನ್ನ ಭೇಟಿಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಅಪ್ಪುವಿನ ಜೀವನಗಾಥೆ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ಹೃದಯಾಘಾತದ ಬಗ್ಗೆ ಅರಿವು ಮೂಡಿಸಲು ಪಠ್ಯ ಕ್ರಮ ಬದಲಿಸಬೇಕು ಎಂಬುದು ಇವರ ಕಳಕಳಿಯಾಗಿತ್ತು. ಅಂತೆಯೇ 2025-2026ನೇ ಶೈಕ್ಷಣಿಕ ವರ್ಷಕ್ಕೆ ಡಾ.ಪುನೀತ್ ರಾಜಕುಮಾರ್ ರವರ ಜೀವನ ಕಥೆಯನ್ನು ಪಠ್ಯಪುಸ್ತಕಕ್ಕೆ ಸೇರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಅತೀವ ಸಂತಸವನ್ನುಂಟು ಮಾಡಿದೆ.



