Puneeth Rajkumar : ಸಿನಿಮಾ ಹೇಗಿತ್ತು ಅಂತ ಕೇಳೋಕೆ ಪುನೀತ್ ಪೋನ್ ಮಾಡಲ್ಲ: ಭಾವುಕರಾದ ಶಿವಣ್ಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಕಳೆದುಕೊಂಡು ನಾಡಿನ ಜನರೆಷ್ಟು ನೊಂದಿದ್ದಾರೋ ಅಷ್ಟೇ ನೋವಿನಲ್ಲಿದೆ ಡಾ.ರಾಜ್ ಕುಟುಂಬ. ಇಂದು ನಾಡಿನ ಜನರು, ದೇಶದ ಜನರು ಪುನೀತ್ (Puneeth Rajkumar) ಜೇಮ್ಸ್ (James) ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದರೇ, ಕಣ್ಣೀರಿಡುತ್ತಿದ್ದರೇ ಅತ್ತ ಅಪ್ಪು ಕುಟುಂಬಸ್ಥರ ಸ್ಥಿತಿಯೂ ಹಾಗೇ ಇದೆ. ತಮ್ಮನ ಕೊನೆ ಸಿನಿಮಾ ನೋಡಿದ ಶಿವಣ್ಣ (Shiva Rajkumar ) ಪುನೀತ್ ಹಾಗೂ ತಮ್ಮ ಒಡನಾಟವನ್ನು ಸ್ಮರಿಸಿ ಕಣ್ಣಿರಿಟ್ಟಿದ್ದಾರೆ. ಪ್ರತಿಯೊಂದು ಸಿನಿಮಾ ಬಿಡುಗಡೆಯಾದಾಗಲೂ ಅಪ್ಪು ಕರೆ ಮಾಡಿ ಸಿನಿಮಾ ಹೇಗಿತ್ತು ಎಂದು ಕೇಳುತ್ತಿದ್ದ. ಆದರೆ ಈ ಬಾರಿ ಜೇಮ್ಸ್ ಚಿತ್ರ ವೀಕ್ಷಿಸಿದ ಬಳಿಕ ಚಿತ್ರ ಹೇಗಿತ್ತು ಎಂದು ಕೇಳಲು ಅಪ್ಪುವಿನ ಕಾಲ್ ಬರಲ್ಲ. ಈ ವಿಚಾರವನ್ನು ಜೀರ್ಣಿಸಿಕೊಳ್ಳೋದೇ ನನಗೆ ಕಷ್ಟವಾಗುತ್ತಿದೆ ಎಂದು ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಕಣ್ಣೀರಿಟ್ಟಿದ್ದಾರೆ.

ಪುನೀತ್ ಅಭಿನಯದ ಸಿನಿಮಾ ಜೇಮ್ಸ್ (James)ಬಿಡುಗಡೆ ಬಳಿಕ ಶಿವಣ್ಣ ನಿರ್ದೇಶಕ ಚೇತನ್ ಜೊತೆ ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಿವಣ್ಣ, ಅವನ ಪ್ರತಿಯೊಂದು ಸಿನಿಮಾವನ್ನೂ ನಾನು ಎಂಜಾಯ್ ಮಾಡಿಕೊಂಡು ನೋಡುತ್ತಿದ್ದೆ. ಆಕ್ಷನ್, ಆಕ್ಟಿಂಗ್ ಎಲ್ಲವನ್ನೂ ಆತ ಚಿಕ್ಕ ವಯಸ್ಸಿನಲ್ಲೇ ಮೀರಿ ಬೆಳೆದಿದ್ದ. ಈ ಮೂಲಕ ಎಲ್ಲರಿಗೂ ಹತ್ತಿರವಾದಾತ ನಮ್ಮೊಂದಿಗೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ತಮ್ಮ ಇಲ್ಲೇ ಎಲ್ಲೋ ಹೋಗಿದ್ದಾನೆ ಎಂಬ ಭಾವವೇ ಕಾಡುತ್ತಿದೆ ಎಂದು ಶಿವಣ್ಣ ಗದ್ಗದಿತರಾದರು.

ಪುನೀತ್ ಬಾಲ್ಯವನ್ನು ನೆನಪಿಸಿಕೊಂಡ ಶಿವಣ್ಣ,ಪುನೀತ್ ಪುಟ್ಟ ಮಗುವಿದ್ದಾಗನಿಂದ ಹಿಡಿದು ದೊಡ್ಡವನಾಗುವವರೆಗೂ ನೋಡಿದ್ದೇನೆ. ಕೇವಲ ನಟನೆಯಲ್ಲಿ ಮಾತ್ರವಲ್ಲ. ನಿಜ ಜೀವನದಲ್ಲೂ ಆತನ ಹೃದಯ ಶುದ್ಧ, ನಿಷ್ಕಲ್ಮಶವಾಗಿತ್ತು. ಈ ವಿಷಯವನ್ನೇ ಎಲ್ಲರೂ ಮೆಚ್ಚಿರುವುದು ಎಂದರು. ಜೇಮ್ಸ್ ಚಿತ್ರವನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಅದರ ಹಿಂದಿನ ಶ್ರಮ ಮೇಕಿಂಗ್‌ನಲ್ಲಿಯೇ ತಿಳಿಯುತ್ತದೆ. ಇಂದು ಜೇಮ್ಸ್ ಚಿತ್ರವನ್ನು ಒಬ್ಬ ಅಭಿಮಾನಿಯಾಗಿ ನೋಡಿದ್ದೇನೆ, ಎಂಜಾಯ್ ಮಾಡಿದ್ದೇನೆ. ಆದರೆ ಅಲ್ಲಲ್ಲಿ ಅಪ್ಪು ಇಲ್ಲ ಎಂಬುದು ನೆನೆಪಿಗೆ ಬರುತ್ತಿತ್ತು, ಕಣ್ಣಲ್ಲಿ ನೀರು ತರುತ್ತಿತ್ತು. ಅಪ್ಪು ಇಲ್ಲದೇ ಈ ಸಿನಿಮಾ ತೆರೆ ಮೇಲೆ ಬಂದಿರುವುದು ತುಂಬಾ ದುಃಖದ ವಿಷಯ ಎಂದರು.

ಇನ್ನು ಜೇಮ್ಸ್ ಸಿನಿಮಾದ ಪ್ರತಿ ಡೈಲಾಗ್ ನ್ನು ನೆನಪಿಸಿಕೊಂಡ ಶಿವಣ್ಣ, ಅಪ್ಪು ಸಿನಿಮಾದಲ್ಲಿ ಹೇಳಿರುವುದು ಕೇವಲ ಡೈಲಾಗ್ ಅಲ್ಲ. ಅವನ ವ್ಯಕ್ತಿತ್ವದಂತೆಯೇ ಡೈಲಾಗ್‌ಗಳನ್ನು ಬರೆಯಲಾಗಿದೆ. ಅಪ್ಪು ಸಿನಿಮಾಗೆ ನಾನು ಧ್ವನಿ ಕೊಟ್ಟಿರುವುದು ನನ್ನ ಭಾಗ್ಯ. ನಾನು ಸಿನಿಮಾ ನೋಡುತ್ತಿರುವಾಗ ತೆರೆ ಮೇಲೆ ಕೇವಲ ಅಪ್ಪು ಕಾಣಿಸುತ್ತಿದ್ದ. ನನ್ನ ಧ್ವನಿ ಅಲ್ಲ. ಇದನ್ನು ಅಭಿಮಾನಿಗಳು ಇಷ್ಟ ಪಟ್ಟರೆ ಅಷ್ಟೇ ನನಗೆ ಸಂತೋಷ ಎಂದು ಭಾವುಕರಾದರು.

ಇದಕ್ಕೂ ಮುನ್ನ ಶಿವಣ್ಣ ಶಕ್ತಿದಾಮದ ಮಕ್ಕಳ ಜೊತೆ ಪುನೀತ್ ಹುಟ್ಟುಹಬ್ಬವನ್ನು ಆಚರಿಸಿದ್ದರು.ಪುನೀತ್ ನಿಧನದ ಬಳಿಕ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮದ ಜವಾಬ್ದಾರಿ ಹೊತ್ತಿದ್ದು ಆಗಾಗ ಅಲ್ಲಿನ ಮಕ್ಕಳ ಜೊತೆ ಸಮಯ ಕಳೆದು ಅವರಿಗೆ ಪುನೀತ್ ಅಗಲಿಕೆಯ ಕೊರತೆ ತಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಕೆಜಿಎಫ್ ದಾಖಲೆ ಮುರಿದ ಜೇಮ್ಸ್: ಟಿವಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟ

ಇದನ್ನೂ ಓದಿ : ಅಪ್ಪುಗೆ ರಾಜ್ಯ ಸರ್ಕಾರದ ಗೌರವ : ಸದ್ಯದಲ್ಲೇ ಘೋಷಣೆಯಾಗಲಿದ್ಯಾ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯ್ತಿ

(Puneeth Rajkumar did not ask about film : passionate Shiva Rajkumar)

Comments are closed.