GGVV : ಗರುಡ ಗಮನ, ವೃಷಭ ವಾಹನ : ಶತಮಾನಗಳ ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಾಯಿಸುವುದು ಸರಿಯೆ?

ಸದ್ಯ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ, ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು ಗರುಡ ಗಮನ ವೃಷಭ ವಾಹನ ( GGVV ). ರಾಜ್ ಬಿ ಶೆಟ್ಟಿ ನಟನೆ ನಿರ್ದೇಶನಕ್ಕೆ ಚಿತ್ರರಸಿಕರು ತಲೆದೂಗುತ್ತಿ ದ್ದಾರೆ. ಆದರೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಬಳಸಿರುವ ಹಾಡಿನ ಕುರಿತು ಅಪಸ್ವರವೊಂದು ಕೇಳಿಬಂದಿದೆ. ಸೋಜುಗದ ಸೂಜು ಮಲ್ಲಿಗೆ ಹಾಡನ್ನು( Sojugada Sooju Mallige ) ಚಿತ್ರದ ಸನ್ನಿವೇಶ ವೊಂದರಲ್ಲಿ ಬಳಸಿರುವ ಕುರಿತು ಮಲೆ ಮಹದೇಶ್ವರ ಭಕ್ತರು ಸಿಡಿದೆದ್ದಿದ್ದಾರೆ. ಈಕುರಿತು ಶ್ರೀ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯ ಸಂಪೂರ್ಣ ಪಠ್ಯ ಇಲ್ಲಿದೆ.

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ “ಗರುಡ ಗಮನ ವೃಷಭ ವಾಹನ’ ( GGVV ) ಚಿತ್ರದಲ್ಲಿ ಪುರಾಣದ ಐತಿಹ್ಯಗಳನ್ನು ಹೋಲಿಸಿ ಚಿತ್ರಕಥೆಯನ್ನು ರೂಪಿಸಲಾಗಿದೆ ಎಂದು ಕೇಳಿ ತಿಳಿದಿದ್ದೇವೆ. ಸಿನೆಮಾ ರಂಗಕ್ಕೆ ಇದೇನೂ ಹೊಸತಲ್ಲ. ಆದರೆ ಈ ಸಿನೆಮಾದ ಒಂದು ಕೊಲೆಯ ನಂತರದ ದೃಶ್ಯದ ಹಿನ್ನೆಲೆಯಾಗಿ ಕೊಲೆಗಾರನು ನರ್ತಿಸುವಾಗ “ಸೋಜುಗದ ಸೂಜು ಮಲ್ಲಿಗೆ” ಎಂಬ ಮಲೈ ಮಹದೇಶ್ವರ ಸ್ವಾಮಿ ಕುರಿತಾದ ಜಾನಪದ ಗೀತೆಯನ್ನು ಹೊಸದಾಗಿ ಸಂಯೋಜಿಸಿದ ಸಂಗೀತದ ಮೂಲಕ ಹಾಡಿಸಲಾಗಿದೆ. ಯಾವುದೇ ಕಲಾತ್ಮಕ ಕೃತಿಗಳ ಹಾಗೆಯೇ ಸಿನೆಮಾ ರಂಗವೂ ರಚನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ನಡೆದುಕೊಳ್ಳಬೇಕಾಗಿರುವುದು ಈ ಕಾಲದ ಅಗತ್ಯ. ಹೀಗೆ ಮಾಡುವಾಗ ಸೃಜನಶೀಲತೆಯು ಹಲವು ರೂಪಗಳನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಯಾರ ವಿರೋಧವೂ ಇರಕೂಡದು.

ಆದರೆ ಪ್ರಸ್ತುತ ಪ್ರಕರಣದಲ್ಲಿ ಸಿನೆಮಾ ನಿರ್ದೇಶಕರು ಮಂಗಳೂರಿನ ಸುತ್ತಮುತ್ತಲ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಒಂದು ಕ್ರೌರ್ಯದತ್ತ ವಾಲುವ ಕಥಾಹಂದರವನ್ನು ರೂಪಿಸಿ ಅದರಲ್ಲಿ ನಡೆಯುವ ಕೊಲೆಯೆಂಬ ಹೀನಕೃತ್ಯ ಮಾಡಿ ಸಂಭ್ರಮಿಸುವ ದೃಶ್ಯದ ಹಿನ್ನೆಲೆಯಾಗಿ ಮಾದೇವನನ್ನು ಪೂಜಿಸುವ, ಆರಾಧಿಸುವ ಜಾನಪದ ಹಾಡನ್ನು ಬಳಸಿರುವುದನ್ನು ನೋಡಿದಾಗ ನಿರ್ದೇಶಕರ ಮಾರುಕಟ್ಟೆ ಆಧಾರಿತ ಚಿಂತನೆಯ ಬಗ್ಗೆ ಅನುಕಂಪ ಮೂಡುತ್ತದೆ. ಮಂಗಳೂರಿನ ದಟ್ಟ ಅನುಭವ ಕೊಡುವ ಚಿತ್ರದಲ್ಲಿ ಮೈಸೂರು ಸೀಮೆಯಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಮಾದೇವನ ಸ್ತುತಿಸುವ, ಈಗ ಹಠಾತ್ತಾಗಿ ಜನಪ್ರಿಯವಾಗಿರುವ ಗೀತೆಯನ್ನು ಯಾವುದೇ ಕಾರಣವಿಲ್ಲದೆ ಸೃಜನಶೀಲತೆ ಎಂಬ ಕಾರಣ ನೀಡಿ ಬಳಸಿರುವುದು ಏಕೆ ಎಂಬುದನ್ನು ಕನ್ನಡ ನಾಡಿನ ಜನರೇ ನಿರ್ಧರಿಸಬೇಕು. ಮಂಗಳೂರು ಸೀಮೆಯಲ್ಲೂ ನೂರಾರು ಶೈವ ಸ್ಥಾನಗಳಿವೆ; ಶಿವನನ್ನು ಸ್ತುತಿಸುವ ನೂರಾರು ಜನಪ್ರಿಯ ಹಾಡುಗಳಿವೆ. ಹೀಗಿದ್ದೂ ದೂರದ ಮಲೈ ಮಹದೇಶ್ವರನ ಕುರಿತ ಹಾಡನ್ನು ಬಳಸುವ ಅನಿವಾರ್ಯತೆ ಅವರಿಗೆ ಏಕೆ ಬಂತು ಎಂಬುದನ್ನು ಕರ್ನಾಟಕದ ಜನತೆಯೇ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಿದೆ.

ಈ ಹಾಡಲ್ಲದೆ ದಾಸಶ್ರೇಷ್ಠ ಪುರಂದರದಾಸರ “ಚಂದ್ರಚೂಡ ಶಿವಶಂಕರ ಪಾರ್ವತಿ” ಹಾಡನ್ನೂ ಇದೇ ಸಿನೆಮಾದಲ್ಲಿ ಇನ್ನೊಂದು ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ ಎಂಬುದನ್ನೂ ತಿಳಿದಿದ್ದೇವೆ. ಪುರಂದರ ದಾಸರಾಗಲೀ, ಮನುಷ್ಯತ್ವದಿಂದ ದೈವತ್ವಕ್ಕೇರಿದ ಮಹಾಮಹಿಮ ಮಲೈ ಮಹದೇಶ್ವರ ಸ್ವಾಮಿಗಳಾಗಲೀ, ಭಕ್ತಿ ಪರವಶತೆಯಿಂದ ಪದ್ಯಗಳನ್ನು ರಚಿಸಿದ ಜನಪದರಾಗಲೀ ಈ ಹಾಡುಗಳ ಮೇಲೆ ಯಾವ ಹಕ್ಕುಗಳನ್ನೂ ಇಟ್ಟುಕೊಂಡಿಲ್ಲ. ತಮ್ಮ ಹಾಡುಗಳೆಲ್ಲವೂ ಸಮಾಜದ ಅಭ್ಯುದಯಕ್ಕಾಗಿ ಎಂದೇ ಅವರೆಲ್ಲ ಭಾವಿಸಿದ್ದರು; ಇಂದೇನಾದರೂ ಈ ಹಾಡುಗಳು ಕೃತಿಸ್ವಾಮ್ಯದಡಿ ಇದ್ದ ಪಕ್ಷದಲ್ಲಿ ಏನಾಗುತ್ತಿತ್ತು ಎಂಬುದನ್ನೂ ಈ ನಾಡಿನ ಚಿಂತಕರು, ಸಿನೆಮಾ ರಂಗದ ಅನುಭವಿಗಳು ಯೋಚಿಸಬೇಕಲ್ಲವೆ? ಶತಮಾನಗಳ ಕಾಲ ಉಳ್ಳವರು – ಬಡವರು ಎಂಬ ಭೇದ ಭಾವವಿಲ್ಲದೆ ಈ ಹಾಡುಗಳನ್ನು ಭಜಿಸುತ್ತ ಶಿವನ ಸಾನಿಧ್ಯ ಬಯಸುತ್ತ ಮೈಲುಗಟ್ಟಲೆ ಪಾದಯಾತ್ರೆ ಮಾಡಿ ಬರುವ ಅಸಂಖ್ಯ ಭಕ್ತರು ಮಹದೇಶ್ವರ ಬೆಟ್ಟವನ್ನು ಹತ್ತುವುದು ತಮ್ಮಲ್ಲಿರುವ ಎಲ್ಲ ಬಗೆಯ ಅರಿ ಷಡ್ವರ್ಗಗಳು ನಾಶವಾಗಲಿ ಎಂದೇ ಹೊರತು ಕ್ರೌರ್ಯದ ಮಾನಸಿಕತೆ ಬೆಳೆಯಲಿ ಎಂದು ಅಲ್ಲವೇ ಅಲ್ಲ.

ಶತಮಾನಗಳ ಕಾಲ ಬಾಳಿದ ಈ ಹಾಡುಗಳು, ಭಗವದ್ಗೀತೆ, ಶಿವಶರಣರ ವಚನಗಳು ಮುಂತಾದ ಸಂತ ಸಾಹಿತ್ಯ, ಜನಪದ ಸಾಹಿತ್ಯದ ಕೃತಿಗಳು ಈ ಎಲ್ಲ ಘಟನೆಗಳನ್ನೂ ಮೀರಿ ಇನ್ನೂ ನೂರಾರು ವರ್ಷಗಳ ಕಾಲ ಜನರ ಮನದಾಳದಲ್ಲಿ ಇದ್ದೇ ಇರುತ್ತವೆ. ಅದರೆ ಡಿಜಿಟಲ್‌ ವೇದಿಕೆಗಳಲ್ಲಿ ಹೆಚ್ಚು ಕಾಲ ಬಾಳುವ ಸಿನೆಮಾಗಳಲ್ಲಿ ಹೀಗೆ ಸಂಬಂಧವಿಲ್ಲದೆ, ಸತರ್ಕವಿಲ್ಲದೆ ಸೃಜನಶೀಲತೆಯ ಹೆಸರಿನಲ್ಲಿ ಹಾಡುಗಳನ್ನು ಬಳಸಿ, ಇನ್ನೊಬ್ಬರು ಹಾಡುವಾಗ ಈ ಕ್ರೌರ್ಯದ ಸನ್ನಿವೇಶಗಳೇ ನೆನಪಾಗುವ ಹಾಗೆ ಮಾಡುವ ಮಾನಸಿಕತೆಗೆ ಏನೆನ್ನಬೇಕು? ಜಾನಪದ, ತಾತ್ವಿಕ ಹಾಡುಗಳ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ ಬೆಳೆಸುವುದು ಮುಖ್ಯವೋ, ಅವುಗಳನ್ನು ವಾಣಿಜ್ಯ ಉದ್ದೇಶದ ರೂಪಕಗಳನ್ನಾಗಿ ರೂಪಾಂತರಿಸುವುದು ಮುಖ್ಯವೋ? ಇದನ್ನೂ ಜನರೇ ತೀರ್ಮಾನಿಸಬೇಕು. ಸೃಜನಶೀಲತೆ ಎಂಬುದು ಸಾಂಸ್ಕೃತಿಕ ಪತನಕ್ಕೆ ಕಾರಣವಾಗದೆ, ಸಮಾಜದ ಉನ್ನತಿಗೆ ಬಳಕೆಯಾಗಲಿ ಎಂದಷ್ಟೆ ಅಂತಿಮವಾಗಿ ಹೇಳಬಹುದಾದ ಮಾತು.

ಅದ್ಭುತ ಪ್ರತಿಭೆಗಳ ಸಂಗಮ ಎಂದೇ ಸುದ್ದಿಯಾಗಿರುವ ಸಿನೆಮಾ ನಿರ್ಮಾಣ ತಂಡದ ಯಾರೊಬ್ಬರ ಕ್ಷಮೆ ಕೇಳಿ ಆಗಬೇಕಾದ್ದೇನೂ ಇಲ್ಲ. ಕ್ಷಮಾಭಾವವು ವ್ಯಕ್ತಿಯ ಅಂತರಂಗದಲ್ಲಿ ಅದಾಗೇ ಮೂಡಬೇಕೇ ವಿನಃ ಯಾವುದೇ ಒತ್ತಡಕ್ಕೆ ಕೃತಕವಾಗಿ ಹುಟ್ಟಬಾರದು. ಆತ್ಮಸಾಕ್ಷಿ ಇದ್ದವರಿಗೆ ಕ್ಷಮೆ ಕೇಳಬೇಕೇ ಬೇಡವೆ ಎಂದು ನಿರ್ಧರಿಸುವುದೂ ಕಷ್ಟವಾಗುವುದಿಲ್ಲ! ಕೊಲೆಗೆ ರೂಪಕವಾಗಿ ದೇವರ ಹಾಡನ್ನು, ದುರ್ಗಾಸ್ತುತಿಯನ್ನು ಬಳಸುವುದು ತುಂಬ ಹಳೆಯ ತಂತ್ರ. ಹಲವು ಟಿವಿ ಸೀರಿಯಲ್‌ಗಳಲ್ಲೂ ಹೀಗೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಇಂತಹ ಚರ್ವಿತಚರ್ವಣ ಸಿದ್ಧ ಮಾದರಿಗಳನ್ನು ಮೀರುವ ಸೃಜನಶೀಲತೆ ಇವರಿಗೆಲ್ಲ ಒದಗಲಿ ಎಂದು ಹಾರೈಸುತ್ತೇವೆ. ಶತಮಾನಗಳಿಂದ ಅರಳಿದ ಜನಪದ ಸೊಗಡಿನ ಹಾಡೊಂದರ ಮೌಲ್ಯವನ್ನು, ಅದರಿಂದ ದೊರಕುವ ಅಮೂಲ್ಯ ದೈವಿಕ ರೂಪಕಗಳನ್ನು ಒಂದು ಸಿನೆಮಾದ ವಾಣಿಜ್ಯ ಉದ್ದೇಶದ ರೂಪಕಕ್ಕಾಗಿ ಬಲಿ ಕೊಡುವುದು ಎಷ್ಟು ಸರಿ?

ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವಕ್ಕೆ ಬೆಳೆದವರು. ಅವರು ಜಾತಿ – ಪಂಥ ಭೇದವಿಲ್ಲದೆ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಅವರು ಸಕಲಜೀವಿಗಳಿಗೂ ಲೇಸನ್ನೇ ಬಯಸುವವರು; ಅಲ್ಪಮತಿಗಳಿಗೆ ಜ್ಞಾನ ನೀಡಿ, ಅಂತಹವರ ಅಪಸವ್ಯಗಳನ್ನು ಕ್ಷಮಿಸಿ ನಸುನಗು ಬೀರಿದ ಮಹಾಯೋಗಿ. ಇಂತಹ ಮಹಾಮಹಿಮರ ಬಗ್ಗೆ ಇದ್ದ ಅದ್ಭುತ ಗೀತೆಯೊಂದನ್ನು ಹಾಡುವಾಗ ಯಾವುದೋ ಲೌಕಿಕ ಜಗತ್ತಿಗೆ ಸೇರಿದ ಹಿಂಸಾತ್ಮಕ ಕಥೆಯೊಳಗಿನ ಕ್ರೌರ್ಯವು ನೆನಪಾಗುವಂತೆ ಮಾಡಿದ ನಿರ್ದೇಶಕರನ್ನೂ ಮಹದೇಶ್ವರರು ಹರಸಲಿ; ಅವರಿಗೆ ಮುಂದೆಂದೂ ಇಂತಹ ಚಿಂತನೆಗಳು ಬರದಂತೆ ಸದ್ಬುದ್ಧಿ ನೀಡಲಿ. ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿಜಿಯವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: Gandhada Gudi : Puneeth ಕನಸಿಗೆ ಜೀವತುಂಬಿದ ಅಶ್ವಿನಿ ಪುನೀತ್ ರಾಜ್ ಕುಮಾರ್ : ಡಿ.6 ರಂದು ಗಂಧದಗುಡಿ ಟ್ರೇಲರ್ ರಿಲೀಸ್

(Raj B Shetty GGVV used Sojugada Sooju Mallige song makes issue about Mahadeshwara devotees)

Comments are closed.