ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

ಅದ್ಬುತ ನಟನೆಯಿಂದ ಚಿತ್ರಪ್ರೇಮಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್‌ ಪ್ರತಿಭಾನ್ವಿತ ನಟಿ, ಮಲೆನಾಡ ಬೆಡಗಿ ಅನಿತಾ ಭಟ್‌ ಇದೀಗ ನಿರ್ಮಾಪಕಿಯಾಗಿದ್ದಾರೆ. ಸದ್ದಿಲ್ಲದೇ ತಮ್ಮ ಸಿನಿಮಾದ ಟೈಟಲ್‌ ಕೂಡ ರಿಲೀಸ್‌ ಮಾಡಿಸಿದ್ದಾರೆ. ಅನಿತಾ ಭಟ್‌ಗೆ ರೋರಿಂಗ್ ಸ್ಟಾರ್ ನಟ ಶ್ರೀಮುರುಳಿ ಸಾಥ್‌ ಕೊಟ್ಟಿದ್ದಾರೆ.

‘ಸಮುದ್ರಂ’ ಕನ್ನಡ ಚಿತ್ರರಂಗದ ಪಾಲಿಗೆ ಕುತೂಹಲ ಹುಟ್ಟಿಸಿರೋ ಸಿನಿಮಾ. ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿ, ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ ಸಹಯೋಗದಲ್ಲಿ ಮೂಡಿ ಬಂದಿರುವ ‘ಸಮುದ್ರಂ’ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾವೂ ಹೌದು.

ಕನ್ನಡದ ಖ್ಯಾತ ನಟ ಶ್ರೀ ಮುರುಳಿ ‘ಸಮುದ್ರಂ’ ಟೈಟಲ್‌ ಲಾಂಚ್‌ ಮಾಡಿದ್ದಾರೆ. ಟೈಟಲ್‌ ಪೋಸ್ಟರ್‌ ಕೂಡ ಅದ್ಬುತವಾಗಿ ಮೂಡಿಬಂದಿದೆ. ಆಕಾಶವಾಣಿ ಮಂಗಳೂರು ಅಂತಾನೇ ಶುರುವಾಗೋ ಟೈಟಲ್‌ ಕಾರ್ಡ್‌ ಕಡಲ ಕಿನಾರೆಯಲ್ಲಿ ಬಚ್ಚಿಟ್ಟುಕೊಂಡಿರುವ ಕಥೆಯನ್ನು ಹೇಳೋ ಪ್ರಯತ್ನವನ್ನು ಮಾಡಿದೆ. ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ. ಅದು ನಿಜವೂ ಹೌದು. ಯಾಕೆಂದರೆ, ಇದು ಕಡಲ ಕಿನಾರೆಯ ನಿಗೂಢ ಕಥಾ ಹಂದರವನ್ನೊಳಗೊಂಡಿರೋ ಚಿತ್ರ. ಕಡಲೆಂದರೆ ಬಹುತೇಕರ ಮನಸು ನೀಲಾಕಾಶದಂತೆ ಪ್ರಪುಲ್ಲವಾಗುತ್ತದಲ್ಲಾ? ಅದರ ಕಿನಾರೆಗಳಲ್ಲಿ ಮೈಚಾಚಿಕೊಂಡ ಭೂಗತ ಚಟುವಟಿಕೆಗಳ ಹೇಳ ಹೊರಟಿದೆ. ಅಂಥಾದ್ದೇ ಒಂದು ರಸವತ್ತಾದ ಕಥೆ ಈ ಚಿತ್ರದಲ್ಲಿದೆಯಂತೆ.

ಸದ್ಯ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿಯರ ಸಾಲಿನಲ್ಲಿರುವ ಅನಿತಾ ಭಟ್‌ ನಟನೆಯ ಜೊತೆಯಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಕನ್ನಡಿಗರಿಗೆ ಸದಬಿರುಚಿಯ ಸಿನಿಮಾ ನೀಡಬೇಕು ಅನ್ನೋದು ಅನಿತಾ ಭಟ್‌ ಬಹು ವರ್ಷಗಳ ಕನಸು. ಈ ಕನಸು ಇದೀಗ ಸುಮುದ್ರಂ ಮೂಲಕ ನನಸಾಗುತ್ತಿದೆ.

ಸಾಮಾನ್ಯವಾಗಿ ಸಿನಿಮಾ ಮುಹೂರ್ತದ ಆಸುಪಾಸಲ್ಲಿಯೇ ಟೈಟಲ್ ಲಾಂಚ್ ಮಾಡೋದು ರೂಢಿ. ಆದರೆ ಸಮುದ್ರಂ ಚಿತ್ರ ತಂಡ ಮಾತ್ರ ಆ ಪದ್ಧತಿಯನ್ನು ಬ್ರೇಕ್ ಮಾಡಿದೆ. ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ ನಂತರದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸಿದೆ. ಇದೇ ಮೊದಲ ಬಾರಿಗೆ ನಟಿ ಅನಿತಾ ಭಟ್‌ ಸವಾಲಿನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಓರ್ವ ಗೃಹಿಣಿಯಾಗಿ, ಸಂದರ್ಭಕ್ಕೆ ತಕ್ಕಂತೆ ರೆಬೆಲ್ ಆಗಿ ಈ ಸಮಾಜದೆದುರು ನಿಲ್ಲೋ ದಿಟ್ಟ ಹೆಣ್ಣಾಗಿಯೂ ನಟಿಸಿದ್ದಾರೆ. ನಾಯಕ ನಟ ಶಿವಧ್ವಜ್‌ ಡಾನ್‌ ಆಗಿ ಮಿಂಚಲಿದ್ರೆ, ರಾಜ್‌ ಕಿಶೋರ್‌ ಹಾಗೂ ಸ್ವಾತಿ ಬಂಗೇರ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವ ಮಹರ್ಶಿ ನಿರ್ದೇಶನದಲ್ಲಿ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ. ಆಕಾಶ್ ಪರ್ವ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೆ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ರಿಷಿಕೇಶ್ ನಿಭಾಯಿಸಿದ್ದಾರೆ.

ಇದನ್ನೂ ಓದಿ : ಸೈಕೋ ಸುಂದರಿಗೆ ಟ್ರೋಲ್ ಕಾಟ: ಬ್ಯಾಡ್ ಕಮೆಂಟ್ ವಿರುದ್ಧ ಪೊಲೀಸರ ಮೊರೆ ಹೋದ ನಟಿ

ಬಹುತೇಕ ಚಿತ್ರವನ್ನು ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಶರವೇಗದಲ್ಲಿ ಸಮುದ್ರಂ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಸಿನಿಮಾದ ಬಹುತೇಕ ಕಾರ್ಯ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಸಿನಿಮಾ ಬಿಡುಗಡೆಯ ದಿನಾಂಕ ಅನೌನ್ಸ್‌ ಮಾಡೋಕೆ ಚಿತ್ರತಂಡ ಕಾಯುತ್ತಿದೆ.

(Actress Anita Bhat as a producer : Shri Muruli released the title of a samudram movie)

Comments are closed.