Shivrajkumar: ಇಂದು ಮಂಗಳೂರಿನಲ್ಲಿ ‘ವೇದ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್; ಕೊರಗಜ್ಜನ ಸನ್ನಿಧಾನಕ್ಕೆ ನಟ ಶಿವಣ್ಣ ದಂಪತಿ ಭೇಟಿ

ಮಂಗಳೂರು: ವೇದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ (Shivrajkumar) ಕುತ್ತಾರಿನ ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜನ ಆದಿಸ್ಥಳವಾದ ಕುತ್ತಾರುಪದವಿಗೆ ಭೇಟಿ ನೀಡಿದ ಕೊರಗಜ್ಜನ ಆಶೀರ್ವಾದ ಪಡೆದರು.

ಇಂದು ಸಂಜೆ ಮಂಗಳೂರಿನಲ್ಲಿ ವೇದ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಕಾರ್ಯಕ್ರಮದಲ್ಲಿ ವೇದ ಚಿತ್ರತಂಡ ಭಾಗಿಯಾಗಲಿದೆ. ಈ ಹಿನ್ನೆಲೆ ಮಂಗಳೂರಿಗೆ ಆಗಮಿಸಿದ ಶಿವರಾಜ್ ಕುಮಾರ್ ಪತ್ನಿ ಗೀತಾ ಜೊತೆ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದರು. ಶಿವಣ್ಣ ದಂಪತಿಗೆ ವೇದ ಚಿತ್ರತಂಡ ಕೂಡಾ ಸಾಥ್ ನೀಡಿದೆ.

ಇದನ್ನೂ ಓದಿ: Kantara 2 Movie : “ಕಾಂತಾರ 2” ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ಒಪ್ಪಿಗೆ : ರಿಷಬ್ ಶೆಟ್ಟಿಗೆ ದೈವ ವಿಧಿಸಿದ ಷರತ್ತುಗಳೇನು ಗೊತ್ತಾ ?

ಕೊರಗಜ್ಜನ ದರ್ಶನ ಪಡೆದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಇದೊಂದು ಆಡಂಬರವಿಲ್ಲದ ದೈವಿಕ ಶಕ್ತಿಯ ಸ್ಥಳ. ಗೆಳೆಯರ ಮೂಲಕ ಈ ಸ್ಥಳದ ಬಗ್ಗೆ ಅರಿತುಕೊಂಡೆ. ವೇದ ಸಿನಿಮಾದ ಪ್ರಚಾರದ ನಿಮಿತ್ತ ಮಂಗಳೂರಿಗೆ ಚಿತ್ರತಂಡ ಸಮೇತ ಆಗಮಿಸಿದ್ದೇವೆ. ಈ ಹಿಂದೆ ಕರಾವಳಿಯ ಹಲವಾರು ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ಇದೇ ಮೊದಲ ಬಾರಿಗೆ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿದ್ದೇನೆ. ಇದೊಂದು ವಿಶೇಷ ಕ್ಷೇತ್ರವಾಗಿದ್ದು, ಭಕ್ತಿಯಿಂದ ಕೈ ಮುಗಿದಿದ್ದೇನೆ. ಜೊತೆಗೆ ಅಜ್ಜನಿಗೆ ಚಕ್ಕುಲಿ ಹಾಗೂ ವೀಳ್ಯದೆಲೆ ಅರ್ಪಿಸಿದ್ದೇನೆ ಎಂದರು.

ಅಂದಾಹಾಗೆ ಶಿವಣ್ಣ ಅಭಿನಯದ ವೇದ ಸಿನಿಮಾವು ಡಿಸೆಂಬರ್ 23ರಂದು ರಾಜ್ಯದ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. 1960ರ ದಶಕದಲ್ಲಿ ನಡೆದ ಕ್ರೂರ ಕಥೆಯನ್ನು ಚಿತ್ರದಲ್ಲಿ ಹೆಣೆಯಲಾಗಿದೆ. ಈಗಾಗಲೇ ಪೋಸ್ಟರ್ ಗಳು ಹಾಗೂ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಶಿವಣ್ಣನ ಮಗಳ ಪಾತ್ರದಲ್ಲಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ನಟಿಸಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಡಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣಗೆ ಜೋಡಿಯಾಗಿ ಗಾನವಿ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸೌತ್ ಸ್ಟಾರ್ ಮಂಗ್ಲಿ ಕಂಠದಲ್ಲಿ ಮೂಡಿಬಂದಿರುವ ಏಳೇಳು ಬೆಟ್ಟ ದಾಟ್ಕೊಂಡು ಹಾಡು ಗಮನ ಸೆಳೆಯುತ್ತಿದೆ. ನಿರ್ದೇಶಕ ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ 4ನೇ ಸಿನಿಮಾ ಇದಾಗಿದ್ದು, ಜಿ ಸ್ಟುಡಿಯೋ ಕೈ ಜೋಡಿಸಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: Senior actor Doddanna | “ಬಹುರೂಪಿ” ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ನಟ ದೊಡ್ಡಣ್ಣ

ವೇದ ಸಿನಿಮಾ ಬೆನ್ನಲ್ಲೇ ಶಿವಣ್ಣ ಕಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದು, ಧನುಷ್ ಅಣ್ಣನ ಪಾತ್ರದಲ್ಲಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Shivrajkumar: ‘Veda’ pre-release event in Mangalore today Actor Shivrajumar offer prayer at kuttaru koragajja temple

Comments are closed.