ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ

ಪ್ಯಾನ್‌ ಇಂಡಿಯಾ ಟ್ರೆಂಡ್‌ನ್ನು ಸದ್ಯ ಸಿನಿರಂಗದ ಸ್ಟಾರ್ ನಟರೇ ಅನುಸರಿಸುತ್ತಿದ್ದು, ಈ ಟ್ರೆಂಡ್‌ ಬಂದ ಬಳಿಕ ಬೇರೆ ಬೇರೆ ಭಾಷೆ ಸಿನಿರಂಗಗಳ ನಡುವೆ ಇದ್ದ ಅಂತರ (Simple Star Rakshit Shetty) ಕಡಿಮೆಯಾಗಿದೆ. ಇದೀಗ ದಕ್ಷಿಣ ಭಾರತ ಸಿನಿರಂಗದ ನಟರು ಬಾಲಿವುಡ್‌ ಸಿನಿಮಾಗಳಲ್ಲಿ, ಬಾಲಿವುಡ್‌ ಸಿನಿರಂಗದ ಕಲಾವಿದರು ಸೌತ್‌ ಇಂಡಸ್ಟ್ರಿಗಳಲ್ಲಿ ನಟಿಸುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ಇಂಡಸ್ಟ್ರಿಗಳ ನಟರು ಪಕ್ಕದ ಇಂಡಸ್ಟ್ರಿಗಳಿಗೆ ಹೋಗಿ ಅಲ್ಲಿನ ಸಿನಿಮಾಗಳಲ್ಲಿ ನಟಿಸುವುದು ಕಾಮನ್‌ ಆಗಿದೆ.

ತಮಿಳಿನ ನಟ ವಿಜಯ್‌ ಸೇತುಪತಿ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದ ಡಾಲಿ ಧನಂಜಯ್‌ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಮಾಲಯಾಳಂ ನಟ ಫಾಹದ್‌ ಫಾಸಿಲ್‌ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಹೀಗೆ ಬೇರೆ ಸಿನಿರಂಗದಲ್ಲಿ ಕಲಾವಿದರು ಬಣ್ಣ ಹಚ್ಚುವುದು ಕಾಮನ್‌ ಆಗಿದ್ದು, ಪ್ರತಿಭಾವಂತ ನಟರಿಗೆ ಬೇರೆ ಇಂಡಸ್ಟ್ರಿಗಳಿಂದ ಅವಕಾಶಗಳು ಅರಸಿ ಬರುತ್ತಿದೆ. ಇನ್ನು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್ ತಮಿಳಿನಲ್ಲಿ ರಜನಿಕಾಂತ್‌ ನಟನೆಯ ಜೈಲರ್‌ ಹಾಗೂ ಧನುಷ್‌ ನಟನೆಯ ಕ್ಯಾಪ್ಟನ್‌ ಮಿಲ್ಲರ್‌ ಎನ್ನುವ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ತಮಿಳು ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ.

ಹೀಗೆ ದೊಡ್ಡ ಸ್ಟಾರ್‌ ನಟರುಗಳೇ ಇಂಡಸ್ಟ್ರಿ ಬಿಟ್ಟು ಪರ ಭಾಷೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದು, ಅಂತಹ ನಟರ ಫೇಮ್‌ ಕೂಡ ಹೆಚ್ಚುತ್ತಿದೆ. ಈ ಸಾಲಿಗೆ ಇದೀಗ ಕನ್ನಡದ ಪ್ರತಿಭಾವಂತ ನಟ ರಕ್ಷಿತ್‌ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಇದೀಗ ನಟ ರಕ್ಷಿತ್‌ ಶೆಟ್ಟಿ ತಮಿಳಿನ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾನಗರಂ, ಖೈದಿ, ಮಾಸ್ಟರ್‌ ಹಾಗೂ ವಿಕ್ರಮ್‌ ರೀತಿಯ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿ ಸ್ಟಾರ್‌ ನಿರ್ದೇಶಕನ ಪಟ್ಟ ಗಿಟ್ಟಿಸಿಕೊಂಡಿರುವ ನಂಬುಗೆಯ ನಿರ್ದೇಶಕ ಲೋಕೇಶ್‌ ಕನಕರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತಂತೆ ಸಿನಿತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಮೊದಲೇ ಹೇಳಿದಂತೆ ಇಂಡಸ್ಟ್ರಿಯ ಬೇಲಿಯನ್ನು ದಾಟಿ ನಟರು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್‌ನ ಈ ಸಿನಿಮಾದಲ್ಲೂ ಸಹ ವಿವಿಧ ಸಿನಿರಂಗದ ಸ್ಟಾರ್ ನಟರು ನಟಿಸಲಿದ್ದಾರೆ. ಕನ್ನಡದ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಮಲಯಾಳಂನ ನಿವಿನ್ ಪೌಲಿ, ಪೃಥ್ವಿರಾಜ್ ಸುಕುಮಾರನ್ ಹಾಗೂ ಬಾಲಿವುಡ್‌ನ ಸಂಜಯ್ ದತ್ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಇನ್ನು ನಾಯಕಿಯರಾಗಿ ತ್ರಿಶಾ ಕೃಷ್ಣನ್ ಹಾಗೂ ಕೀರ್ತಿ ಸುರೇಶ್ ನಟಿಸಲಿದ್ದಾರೆ.

ಇದನ್ನೂ ಓದಿ : KL Rahul Athiya Shetty marriage : ಕೆ.ಎಲ್ ರಾಹುಲ್-ಆತಿಯಾ ಶೆಟ್ಟಿ ಮದುವೆಗೆ ಬಾಲಿವುಡ್ ಸ್ಟಾರ್ಸ್‌ಗೆ ಆಹ್ವಾನ ಇಲ್ಲ!

ಇದನ್ನೂ ಓದಿ : ದೊಡ್ಮನೆಯ ಮತ್ತೊಂದು ಕುಡಿ ಸಿನಿರಂಗಕ್ಕೆ ಎಂಟ್ರಿ

ಇದನ್ನೂ ಓದಿ : “ಫಸ್ಟ್‌ ಡೇ ಫಸ್ಟ್‌ ಶೋ” ಮೂಲಕ ಬೆಳ್ಳಿ ತೆರೆಗೆ ಮರಳಿದ ರೋಹಿತ್‌ ಶ್ರೀನಾಥ್

ಇನ್ನು ಸಂದರ್ಶನವೊಂದರಲ್ಲಿ ಈ ಸಿನಿಮಾದ ಕುರಿತಾಗಿ ಮಾತನಾಡಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಜನವರಿ 22ರಂದು ಸಿನಿಮಾದ ಅಪ್‌ಡೇಟ್ ಸಿಗಲಿವೆ ಎಂದಿದ್ದರು. ಸಿನಿಮಾವನ್ನು ಚೆನ್ನೈ ಹಾಗೂ ಕಾಶ್ಮೀರದಲ್ಲಿ ಹೆಚ್ಚಾಗಿ ಚಿತ್ರೀಕರಿಸಲಾಗುವುದು. ಕಳೆದ ವರ್ಷ ವಿಕ್ರಮ್ ಮೂಲಕ ಮೋಡಿ ಮಾಡಿದ್ದ ಲೋಕೇಶ್ ಕನಕರಾಜ್ ತಮ್ಮದೇ ಆದ ಸಿನಿಮಾ ಯೂನಿವರ್ಸ್ ಸೃಷ್ಟಿಸಲಿದ್ದು, ಯಾವ ಯಾವ ನಟರನ್ನು ಇದರಲ್ಲಿ ಸೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗೂ ಇನ್ನು ಮುಂದೆ ತಾನು ಮಾಡುವ ಸಿನಿಮಾಗಳೆಲ್ಲಾ ಸಂಪೂರ್ಣವಾಗಿ ತನ್ನ ಶೈಲಿಯಲ್ಲೇ ಇರಲಿದೆ, ಯಾವುದಕ್ಕೂ ರಾಜಿಯಾಗುವುದಿಲ್ಲ ಎಂದು ಲೋಕೇಶ್ ತಿಳಿಸಿದ್ದರು. ಈ ಮೂಲಕ ಈ ಬಾರಿ ವಿಜಯ್ ಹೊಸ ರೀತಿಯ ಪಾತ್ರ ನಿಭಾಯಿಸುವುದಂತೂ ಪಕ್ಕಾ ಎನ್ನಬಹುದು.

Simple star Rakshit Shetty entered Tamil cinema

Comments are closed.