ಮುಂಬೈ : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ್ದ ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಇದೀಗ ನಿಸರ್ಗ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಬರೋಬ್ಬರಿ 28,000 ಮಂದಿ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿದ್ದಾರೆ ಸೋನುಸೂದ್.
ಹೌದು, ಕೊರೊನಾ ಸಂಕಷ್ಟ ಎದುರಾದಾಗ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಿ ನಿರಾಶ್ರಿತರನ್ನ ಅವರ ಊರುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ನಟ ಸೋನು ಸೂದ್ ಮಾನವೀಯತೆ ಮೆರದಿದ್ದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಕಾರ್ಮಿಕರನ್ನು ತನ್ನದೇ ಖರ್ಚಿನಲ್ಲಿ ಕಳುಹಿಸಿ ಕೊಡುವ ಮೂಲಕ ರಿಯಲ್ ಲೈಫ್ ನಲ್ಲಿಯೂ ಹೀರೋ ಆಗಿದ್ದರು.
ನಂತರ ಕೇರಳದಲ್ಲಿ ಸಿಲುಕಿಕೊಂಡಿದ್ದ ಒಡಿಶಾ ಮೂಲದ 177 ಮಂದಿ ಯುವತಿಯನ್ನು ವಿಶೇಷ ವಿಮಾನದ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡುವ ಮೂಲಕ ಸೋನು ಸೂದ್ ನೆರವಾಗಿದ್ದರು. ಅಲ್ಲದೇ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ಗಳನ್ನೂ ಕೂಡ ವಿತರಣೆ ಮಾಡಿದ್ದರು.
ಇದೀಗ ನಿಸರ್ಗ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಮುಂಬೈ ಕರಾವಳಿ ಪ್ರದೇಶದಲ್ಲಿರುವ ಸುಮಾರು 28,000 ಮಂದಿ ನಿರಾಶ್ರಿತರಿಗೆ ನೆರವಾಗಿದ್ದಾರೆ. ಚಂಡಮಾರುತದ ಸೂಚನೆ ಸಿಗುತ್ತಿದ್ದಂತೆಯೇ ನಿವಾಸಿಗಳನ್ನು ಸ್ಥಳಾಂತರ ಮಾಡಿಸಿರುವ ಸೋನುಸೂದ್ ಆಹಾರ ವಸ್ತುಗಳನ್ನು ಒದಗಿಸುವುದರ ಜೊತೆಗೆ ಆಶ್ರಯದ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.