Heavy rains : ಸುಳ್ಯ ತಾಲೂಕಿನಲ್ಲಿ ವರುಣನ ರೌದ್ರ ನರ್ತನ : ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಸೇತುವೆ, ಹಲವು ಗ್ರಾಮಗಳ ಸಂಪರ್ಕ ಕಡಿತ

ದಕ್ಷಿಣ ಕನ್ನಡ : Heavy rains : ಕುಂಭದ್ರೋಣ ಮಳೆಯ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಅಕ್ಷರಶಃ ನಲುಗಿ ಹೋಗಿದೆ. ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ ಇನ್ನೂ ಹಲವೆಡೆ ಭಾರಿ ಗಾತ್ರದ ಮರಗಳು ಧರಾಶಾಹಿಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮತ್ತೆ ಕೆಲವಡೆ ಸೇತುವೆಗಳು ಕೊಚ್ಚಿ ಹೋಗಿದ್ದು ಸುಳ್ಯ ಸಂಪೂರ್ಣ ತತ್ತರಿಸಿ ಹೋಗಿದೆ.


ಸುಳ್ಯ ತಾಲೂಕಿನ ಕಲ್ಮಕಾರಿ ಎಂಬಲ್ಲಿ ಉಂಟಾಗಿರುವ ಜಲಸ್ಫೋಟದಿಂದಾಗಿ ಸೇತುವೆಯು ಕೊಚ್ಚಿ ಹೋಗಿದ್ದು ಪರಿಣಾಮ ಕಲ್ಮಕಾರಿನಿಂದ ಕೊಪ್ಪಡ್ಕ,ಗುಳಿಕಾನ,ಶೆಟ್ಟಿಕಟ್ಟ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಈ ಗ್ರಾಮಗಳಲ್ಲಿ ವಾಸವಿರುವ ಇನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಬೇರೆ ಗ್ರಾಮಗಳ ಜೊತೆಯಲ್ಲಿ ಸಂಪರ್ಕ ಕಡಿತಗೊಂಡಿದೆ.


ಗುಳಿಕಾನ ಎಂಬ ಗ್ರಾಮದಲ್ಲಿ ವರುಣನ ಅಬ್ಬರದಿಂದಾಗಿ ಅಪಾಯಕ್ಕೆ ಸಿಲುಕಿದ್ದ ಆರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆರು ಕುಟುಂಬದಲ್ಲಿದ್ದ ಒಟ್ಟು 21 ಮಂದಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡಿದ್ದಾರೆ. ಎನ್​ಡಿಆರ್​ಎಫ್​ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಕಲ್ಮಕಾರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆ ವಹಿಸುತ್ತಿದೆ.


ಪರ್ವತದ ತಪ್ಪಲಿನಲ್ಲಿರುವ ಗುಳಿಕಾನ ಎಂಬ ಊರಿಗೆ ಸೇರಿದ ಆರು ಕುಟುಂಬಗಳನ್ನು ಕಲ್ಮಕಾರು ಸರ್ಕಾರಿ ಶಾಲೆಯ ಆಶ್ರಯ ಕೇಂದ್ರಗಳಿಗೆ ಶಿಫ್ಟ್​ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ ಜಿಲ್ಲಾಡಳಿತ ಸಂತ್ರಸ್ತರ ವಾಸ್ತವ್ಯಕ್ಕೆ ಸಕಲ ವ್ಯವಸ್ಥೆಯನ್ನು ಮಾಡಿದೆ. 2018ರಲ್ಲಿಯೂ ಗುಳಿಕಾನದಲ್ಲಿ ಇದೇ ರೀತಿ ಜಲಸ್ಫೋಟ ಸಂಭವಿಸಿತ್ತು. ಆಗ ಕೂಡ ಈ ಎಲ್ಲಾ ಕುಟುಂಬಗಳನ್ನು ಶಾಶ್ವತವಾಗಿ ಬೇರೆಡೆಗೆ ಶಿಫ್ಟ್​ ಮಾಡೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಸಹ ಅದು ಈಡೇರಿರಲಿಲ್ಲ. ಹೀಗಾಗಿ ಈ ಬಾರಿಯಾದರೂ ನಮಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ : Paytm Down : ಪೇಟಿಯಂ ಆ್ಯಪ್, ವೆಬ್‌ಸೈಟ್‌ ಡೌನ್‌ : ಗ್ರಾಹಕರ ಪರದಾಟ

ಇದನ್ನೂ ಓದಿ : karnataka ratna award to puneeth : ನವೆಂಬರ್​ 1ರಂದು ಪುನೀತ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

Heavy rains in Kalmakaru village of Sulya taluk: Displacement of villagers

Comments are closed.