ಮಂಗಳೂರು : ಹಿಂದೂ ಮಹಿಳೆಯೋರ್ವಳನ್ನು ಯುವಕನೋರ್ವ ಮುಸ್ಲೀಂ ಧರ್ಮಕ್ಕೆ ಮತಾಂತರಗೊಳಿಸಿದ್ದ. ಗಂಡನಿಂದ ಮಹಿಳೆಯನ್ನು ಬೇರೆ ಮಾಡಿದ್ದು ಅಲ್ಲದೇ ಆಕೆಯೊಂದಿಗೆ ಮೂರು ವರ್ಷಗಳ ಕಾಲ ಸಂಸಾರವನ್ನೂ ನಡೆಸಿದ್ದ. ಆದ್ರೀಗ ಮಹಿಳೆಗೆ ಕೈಕೊಟ್ಟು ಯುವಕ ಪರಾರಿಯಾಗಿದ್ದಾರೆ.
ಲವ್ ಜಿಹಾದ್ ಮಾದರಿಯ ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಫೇಸ್ ಬುಕ್ ನಲ್ಲಿ ಕೇರಳದ ಕಣ್ಣೂರಿನ ನಿವಾಸಿ ಶಾಂತಿ ಜೂಬಿ ಎಂಬಾಕೆಗೆ ಸುಳ್ಯ ಮೂಲದ ಇಬ್ರಾಹಿಂ ಖಲೀಲ್ ಎಂಬಾತನ ಪರಿಚಯವಾಗಿದೆ. ಪರಿಚಯ ಸ್ವಲ್ಪ ಸಮಯದಲ್ಲಿಯೇ ಪ್ರೇಮಕ್ಕೆ ತಿರುಗಿತ್ತು. ಸುಮಾರು ಮೂರು ವರ್ಷಗಳ ಬಳಿಕ 2017ರಲ್ಲಿ ಶಾಂತಿ ಗಂಡನನ್ನು ಬಿಟ್ಟು ಇಬ್ರಾಹಿಂ ಖಲೀಲ್ ಜೊತೆಗೆ ಬಂದಿದ್ದಾಳೆ. ಮಾತ್ರವಲ್ಲ ಶಾಂತಿ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡು ಆಸಿಯಾ ಆಗಿ ಬದಲಾಗಿದ್ದಳು.
ಆಸಿಯಾ ಹಾಗೂ ಖಲೀಲ್ ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಖಲೀಲ್ ತಾನು ಮದುವೆಯಾಗಿರುವ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಆದರೆ ಕಳೆದ ಜನವರಿ ತಿಂಗಳಲ್ಲಿ ಖಲೀಲ್ ಮನೆಯವರಿಗೆ ಮದುವೆ ವಿಚಾರ ತಿಳಿಯುತ್ತಿ ದ್ದಂತೆಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದಲೂ ಖಲೀಲ್ ಸಂಪರ್ಕಕ್ಕೆ ಸಿಗದೇ ಇದ್ದಾಗ ಆಸಿಯಾ ಗಂಡನನ್ನು ಹುಡುಕಿಕೊಂಡು ಬೆಂಗಳೂರಿನಿಂದ ಸುಳ್ಯಕ್ಕೆ ಬಂದಿದ್ದಾಳೆ. ಅಲ್ಲದೇ ಗಂಡ ಹಾಗೂ ಗಂಡನ ಮನೆಯವರು ತನಗೆ ಮೋಸ ಮಾಡಿದ್ದಾರೆ ಅಂತಾ ಆಸಿಯಾ ಗಂಭೀರ ಆರೋಪ ಮಾಡಿದ್ದಾಳೆ.
ಕೆಲವು ತಿಂಗಳ ಹಿಂದೆಯಷ್ಟೇ ಬೆಳಕಿಗೆ ಬಂದಿದ್ದ ಖಲೀಲ್ ಹಾಗೂ ಆಸಿಯಾ ಪ್ರಕರಣಕ್ಕೆ ಇದೀಗ ಟ್ವೀಸ್ಟ್ ಸಿಕ್ಕಿದ್ದು, ಆಸಿಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಭಜರಂಗದಳ ಮುಖಂಡ ಶರಣ್ ಪಂಪವೆಲ್ ಬಳಿಯಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನಂತರ ಸೀದಾ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ತನ್ನ ಪತಿಯ ಜೊತೆಗೆ ಬಾಳಲು ಅವಕಾಶ ಕಲ್ಪಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೇ ಈ ಕುರಿತು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ.
ನಾನು ನ್ಯಾಯಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಮತ್ತು ಗಂಡನ ನಡುವೆ ಸಮಸ್ಯೆ ಎದುರಾಗಲು ಅವರ ಸಹೋದರ ಕಾರಣ. ಹೀಗಾಗಿ ಆತನ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು. ಪ್ರೀತಿಯ ಬಲೆಗೆ ಬಿದ್ದು ನನ್ನ ಧರ್ಮವನ್ನು ಬಿಟ್ಟು ಮುಸ್ಲೀಂ ಧರ್ಮಕ್ಕೆ ಬಂದಿದ್ದೇನೆ. ಮತ್ತೆ ಹಿಂದೂ ಧರ್ಮಕ್ಕೆ ಬರಲಾರೆ. ನನಗೆ ನನ್ನ ಗಂಡ ಖಲೀಲ್ ಬೇಕು. ನನ್ನ ಜೀವನದಂತೆ ಬೇರೆ ಯಾವುದೇ ಹೆಣ್ಣು ಮಕ್ಕಳ ಜೀವನ ಹಾಳಾಗಬಾರದು ಎಂದು ಆಸಿಯಾ ತಿಳಿಸಿದ್ದಾರೆ.
ಓರ್ವ ಹಿಂದೂ ಯುವತಿ ಪ್ರೀತಿಯ ಮೋಸದ ಬಲೆಗೆ ಬಿದ್ದು ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರ ಜೊತೆಗೆ ಮಾತುಕತೆ ನಡೆಸಿದ್ದೇವೆ. ಲವ್ ಜಿಹಾದ್ ನ ಮೂಲಕ ಮೋಡಿ ಮಾಡಿ ನಂಬಿಸಿ ಮದುವೆಯಾಗಿ ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದು, ದೈಹಿಕ ಸಂಪರ್ಕವನ್ನು ಹೊಂದಿ ನಂತರದಲ್ಲಿ ಗಂಡನ ಕುಟುಂಬದವರು ಮನೆಯಿಂದ ಹೊರ ಹಾಕಿ ದೌರ್ಜನ್ಯವೆಸಗಿರುವುದು ಖಂಡನೀಯ.
ಆಕೆ ಮುಸ್ಲೀಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮರಳುವುದಾದರೆ ನಾವು ಆಕೆಯನ್ನು ನಮ್ಮ ಧರ್ಮದ ಆಧಾರದ ಮೇಲೆ ಸೇರಿಸಿಕೊಳ್ಳಲು ಸಿದ್ದರಿದ್ದೇವೆ. ಮುಂದಿನ ದಿನಗಳಲ್ಲಿ ಹಿಂದೂ ಯುವತಿಯರು ಇಂತಹ ಮೋಸದ ಬಲೆಗೆ ಬೀಳಬಾರದು ಎಂದು ಶರಣ್ ಪಂಪ್ ವೆಲ್ ಮನವಿ ಮಾಡಿಕೊಂಡಿದ್ದಾರೆ.
Comments are closed.