Malyadi : ಆಟವಾಡುತ್ತಿದ್ದಾಗ ಘೋರ ದುರಂತ : ಇದ್ದೊಬ್ಬ ಮಗನನ್ನು ಕಳೆದುಕೊಂಡ ಮಲ್ಯಾಡಿಯ ದಂಪತಿ, ತೆಲಂಗಾಣ ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ

ಕೋಟ : ರಷ್ಯಾ ಯುಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಗಾಗಿ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿಗಾಗಿ ಸರಕಾರ ಕನಿಷ್ಠ ಸಾಂತ್ವಾನ ಹೇಳದಿರುವುದು ಮಾನವೀಯತೆಗೆ ಸವಾಲಾಗಿದೆ. ಆದರೆ ಹೊರರಾಜ್ಯದವರು ಎನ್ನುವ ಕಾರಣಕ್ಕೆ ಮೃತಪಟ್ಟ ಮಗುವಿಗೆ ಅಂತಿಮ ಗೌರವವನ್ನು ಸಲ್ಲಿಸದೆ ತೆಲಂಗಾಣ (Telangana ) ಸರಕಾರದ ದಾಷ್ಟ್ಯತನ ಮೆರೆದಿದೆ. ಇದರಿಂದಾಗಿ ಉಡುಪಿ ಜಿಲ್ಲೆಯ ಮಲ್ಯಾಡಿಯ (Malyadi ) ದಂಪತಿ ಇದೀಗ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ.

ಹೌದು, ಹೀಗೆ ಇದ್ದ ಓರ್ವ ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಇವರೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೇದೂರು ಗ್ರಾಮ ಪಂಚಾಯತ್ ಮಲ್ಯಾಡಿ ಗ್ರಾಮದ ನಿವಾಸಿಗಳಾದ ದಿನಕರ ಶೆಟ್ಟಿ ಮತ್ತು ಶೀಲಾ ಶೆಟ್ಟಿ ದಂಪತಿ. ಸುಮಾರು 21 ವರ್ಷಗಳ ಹಿಂದೆ ತೆಲಂಗಾಣದ ಕಮ್ಮಾಮ್ ಗೆ ಉದರ ನಿಮಿತ್ತಂ ಎಂಬಂತೆ ಬಂದ ದಂಪತಿ ಬದುಕು ಕಟ್ಟಿಕೊಂಡಿದ್ದರು. ಮುದ್ದಾದ ಮಗನೊಂದಿಗೆ ದಂಪತಿಗಳದ್ದು ಸುಂದರ ಸಂಸಾರ. ಆದರೆ ಜನವರಿ 18 ರಂದು ಇವರ ಬದುಕಲ್ಲಿ ವಿಧಿ ಅಟ್ಟಹಾಸವನ್ನು ಮೆರೆದಿದ್ದ, ತೆಲಂಗಾಣದ ಕಮ್ಮಾಮ್ ನಲ್ಲಿನ ಆಟದ ಮೈದಾನದ ಗೋಡೆ ಕುಸಿದು ಆಟವಾಡುತ್ತಿದ್ದ ಇವರ ಪುತ್ರ ದಿಗಂತ್ ಶೆಟ್ಟಿ ಮೃತಪಟ್ಟಿದ್ದಾನೆ. ಆದರೆ ತೆಲಂಗಾಣ ಸರಕಾರವಾಗಲಿ, ಅಧಿಕಾರಿಗಳಾಗಲಿ ಸಹಾಯ ಹಸ್ತ ಚಾಚುವುದು ಬಿಡಿ ಕನಿಷ್ಠ ಕಂಬನಿ ಒರೆಸುವ ಕಾರ್ಯವನ್ನೂ ಮಾಡಿಲ್ಲ ಎಂದು ನೊಂದು ನುಡಿಯುತ್ತಿದ್ದಾರೆ ದಿನಕರ ಶೆಟ್ಟಿ.

ತೆಲಂಗಾಣದ ಕಮ್ಮಾಮ್ ನಲ್ಲಿ ನೆಲೆಸಿದ್ದ ದಿನಕರ ಶೆಟ್ಟಿ ಉಡುಪಿ ಮೂಲದ ಹೋಟೇಲ್ ಉದ್ಯಮಿ ರಾಘವೇಂದ್ರ ರಾವ್ ಅವರ ಹೋಟೇಲ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸಕ್ಕಿದ್ದರು. ಮಗ ದಿಗಂತ್ ಶೆಟ್ಟಿ ಕಮ್ಮಾಮ್ ನಲ್ಲಿರುವ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲೆಗೆ ರಜೆ ನೀಡಿದ ಕಾರಣ ಮನೆಯ ಪಕ್ಕದ ಜಾಗದಲ್ಲಿ ಆಟವಾಡಲು ತೆರಳಿದ್ದ. ಈ ವೇಳೆಯಲ್ಲಿ ಆಟ ಮೈದಾನದ ಪಕ್ಕದ ಕಂಪೌಂಡ್ ಗೋಡೆ ಜೊತೆಗೆ ಮರ ಉರುಳಿ ಬಿದ್ದು ದಿಗಂತ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಒಟ್ಟು ಮೂವರು ಮಕ್ಕಳು ಮೇಲೆ ಮರ ಉರುಳಿ ಬಿದ್ದಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದು, ಈ ಪೈಕಿ ಕರ್ನಾಟಕದ ದಿಗಂತ್ ಕೂಡ ಒಬ್ಬ. ಇದ್ದೊಬ್ಬ ಮಗನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದ್ದಾರೆ. ತಾಯಿ ಶೀಲಾ ಶೆಟ್ಟಿ.

ಒಟ್ಟಾರೆಯಾಗಿ ಯಾರೋ ಮಾಡಿದ ತಪ್ಪಿಗೆ ಬಾಳಿ ಬದುಕಬೇಕಾದ ಹುಡುಗ ಮೃತಪಟ್ಟಿದ್ದಾನೆ. ಆದರೆ ಇದುವರೆಗೆ ಕನಿಷ್ಠ ಸಹಾಯ ಸಾಂತ್ವಾನವನ್ನು ಹೇಳದ ತೆಲಂಗಾಣ ಸರಕಾರ ನಡೆಗೆ ದಂಪತಿಗಳು ಇನ್ನಷ್ಟು ಮರಗುತ್ತಿದ್ದಾರೆ. ಮಗನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ಕರ್ನಾಟಕ ಸರಕಾರ ಮಾಡಬೇಕಾಗಿದೆ. ಈ ಮೂಲಕ ನೊಂದ ದಂಪತಿಯ ಕಣ್ಣೀರು ಒರೆಸಬೇಕಾಗಿದೆ.

ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾತ : ಎಎಸ್ಐ ಹಾಗೂ ಮಗಳು ಸಾವು

ಇದನ್ನೂ ಓದಿ : ಕೋಟದ ECR ಕಾಲೇಜಿನಲ್ಲಿ ರಾಗಿಂಗ್‌ : ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ, ಇಬ್ಬರ ಬಂಧನ

( Malyadi couple who lost their only child while playing tragedy in Telangana)

Comments are closed.