ಪಾಂಡೇಶ್ವರ ಶಾಲೆಯ ಬಾವಿಗೆ ಹಾರಿ ಬಾವಿ ಗುತ್ತಿಗೆದಾರ ಆತ್ಮಹತ್ಯೆ !

ಪೋಟೋ : ಅಲ್ವಿನ್ ಅಂದ್ರಾದೆ

ಬ್ರಹ್ಮಾವರ : ಬಾವಿ ನಿರ್ಮಾಣ ಕಾರ್ಯ ಮಾಡುವ ಗುತ್ತಿಗೆದಾರರೊಬ್ಬರು ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರದಲ್ಲಿ ನಡೆದಿದೆ.

ಪಾಂಡೇಶ್ವರದ ನಿವಾಸಿ ಅಬ್ಬಾಸ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಇಂದು ಮಧ್ಯಾಹ್ನದ ವೇಳೆಯಲ್ಲಿ ಶಾಲೆಯ ಆವರಣದಲ್ಲಿಯೇ ಕುಳಿತಿದ್ದ ಅಬ್ಬಾಸ್ ತನ್ನ ಪರಿಚಯಸ್ಥರಿಗೆ ತನ್ನ ಬಳಿಯಲ್ಲಿದ್ದ ಚೀಟಿ ಹಾಗೂ ಮೊಬೈಲ್ ಕೊಟ್ಟು. ಇದನ್ನು ಮನೆಗೆ ಕೊಟ್ಟು ಬನ್ನಿ ಎಂದು ಹೇಳಿದ್ದಾರೆ. ಅದರಂತೆಯೇ ಶಾಲೆಯ ಪಕ್ಕದಲ್ಲಿಯೇ ಇರುವ ಅಬ್ಬಾಸ್ ಅವರ ಮನೆಗೆ ತೆರಳಿ ಚೀಟಿ ಮತ್ತು ಮೊಬೈಲ್ ಕೊಟ್ಟು ಬಂದಿದ್ದಾರೆ.

ಆದರೆ ಮನೆಯವರು ಶಾಲೆಗೆ ಬರುವ ಮೊದಲೇ ಅಬ್ಬಾಸ್ ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.