CM Bommai tests corona positive : ಕೊರೊನಾ ಸೋಂಕಿಗೊಳಗಾದ ಸಿಎಂ ಬೊಮ್ಮಾಯಿಯಿಂದ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಓಮಿಕ್ರಾನ್​ನಿಂದಾಗಿ ಕೊರೊನಾ ಸೋಂಕು ಹಿಂದೆಂದಿಗಿಂತಲೂ ಅತ್ಯಂತ ವೇಗವಾಗಿ ಹರಡುತ್ತಿದೆ. ಕೋವಿಡ್​ ಸೋಂಕನ್ನು ನಿಯಂತ್ರಣಕ್ಕೆ ತರಬೇಕೆಂದು ಈಗಾಗಲೇ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ನಂತಹ ವಿವಿಧ ನಿಯಮಗಳನ್ನು ಜಾರಿಗೆ ತಂದಿದೆ. ಆದರೂ ಸಹ ಕೊರೊನಾ ಸೋಂಕು ತಹಬಧಿಗೆ ಬರುವಂತೆ ಕಾಣುತ್ತಿಲ್ಲ. ಈ ಎಲ್ಲದರ ನಡುವೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Bommai tests corona positive) ಕೂಡ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಸೌಮ್ಯ ಲಕ್ಷಣಗಳನ್ನು ಹೊಂದಿರುವ ನನಗೆ ಇಂದು ಕೊರೊನಾ ವರದಿ ಪಾಸಿಟಿವ್​ ಬಂದಿದೆ. ನಾನು ಆರೋಗ್ಯವಾಗಿದ್ದೇನೆ, ಪ್ರಸ್ತುತ ನಾನು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದೇನೆ. ಹೀಗಾಗಿ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಒಳಗಾದವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕೊರೊನಾ ಪರೀಕ್ಷೆಗೆ ಒಳಗಾದವರು ಪರೀಕ್ಷೆಯ ವರದಿಯ ಬರುವವರೆಗೂ ಐಸೋಲೇಷನ್​ನಲ್ಲಿ ಇರಬೇಕೆಂಬ ನಿಯಮವಿದೆ. ಆದರೆ ಜನರಿಗೊಂದು ಕಾನೂನು ಅಧಿಕಾರಿಗಳಿಗೆ ಒಂದು ಕಾನೂನು ಎಂಬಂತೆ ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್​ ಅವರ ಅಂತ್ಯಕ್ರಿಯೆಯಲ್ಲಿಯೂ ಭಾಗಿಯಾಗಿದ್ದರು.

ಇದು ಮಾತ್ರವಲ್ಲದೇ ಇಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ವಿಶ್ರಾಂತ ಕುಲಪತಿಗಳ ಸಂಘದ ಪದಾಧಿಕಾರಿಗಳು ಇಂದು ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿದ್ದರು. ಇದರ ಜೊತೆಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಇಂದು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸಭೆ ಮಾಡಲಾಗಿತ್ತು. ಈ ಸಭೆಯಲ್ಲಿ ಸಚಿವರಾದ ಡಾ. ಕೆ ಸುಧಾಕರ್​, ಆರಗ ಜ್ಞಾನೇಂದ್ರ, ಬೈರತಿ ಬಸರವಾಜು, ಸರ್ಕಾರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಸುಧಾರಣಾ ಆರೋಗ್ಯ ಅಧ್ಯಕ್ಷ ಟಿ. ಎಂ ವಿಜಯ ಭಾಸ್ಕರ್​ ಭಾಗಿಯಾಗಿದ್ದರು. ಅಲ್ಲದೇ ನಿನ್ನೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಬೊಮ್ಮಾಯಿ ಅನೇಕ ಬಾರಿ ಮಾಧ್ಯಮಗಳ ಎದುರು ಹೇಳಿಕೆಗಳನ್ನೂ ನೀಡಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಿಎಂ ನಡೆ ಸಾಕಷ್ಟು ಅಸಮಾಧಾನಗಳಿಗೆ ಕಾರಣವಾಗಿದೆ.

ಅಲ್ಲದೇ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ 30 ಮಂದಿ ಮೇಲೆ ಎಫ್​ಐಆರ್ ದಾಖಲಾದ ಬಗ್ಗೆಯೂ ಇಂದು ಬೆಳಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್​ ನಿಯಮ ಉಲ್ಲಂಘಿಸಿದವರು ಎಷ್ಟೇ ದೊಡ್ಡ ಲೀಡರ್​ ಆಗಿದ್ದರೂ ಸಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಸಿಎಂ ಬೊಮ್ಮಾಯಿಯರೆ ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಾತ್ರವಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ರಿಗೂ ಸಹ ಕೊರೊನಾ ಸೋಂಕು ಧೃಡಪಟ್ಟಿದೆ. ನಳೀನ್​ ಕುಮಾರ್​ ಕಟೀಲ್​ ಕೂಡ ಟ್ವೀಟ್​ ಮೂಲಕ ತಮಗೆ ಸೋಂಕು ಧೃಡಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಮಾತ್ರವಲ್ಲದೇ ಕೆಲ ದಿನಗಳ ಹಿಂದಷ್ಟೇ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದರ ಜೊತೆಯಲ್ಲಿ ಮೂರು ದಿನಗಳ ಹಿಂದೆಯಷ್ಟೇ ಕಂದಾಯ ಸಚಿವ ಆರ್​.ಅಶೋಕ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗೆ ಸಂಪುಟದಲ್ಲಿರುವ ಸಚಿವರು ಒಬ್ಬೊಬ್ಬರಾಗಿಯೇ ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದು ಸಾಕಷ್ಟು ಆತಂಕಗಳಿಗೆ ಮನೆ ಮಾಡಿದೆ.

ಇನ್ನು ಕಾಂಗ್ರೆಸ್​ ಹಿರಿಯ ನಾಯಕ ಸಿಎಂ ಇಬ್ರಾಹಿಂ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೊನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರ ಕನಕಪುರ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಇಬ್ರಾಹಿಂ ಭಾಗಿಯಾಗಿದ್ದರು . ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು ಪರೀಕ್ಷಾ ವರದಿ ಪಾಸಿಟಿವ್​ ಬಂದಿದೆ. ಸಿಎಂ ಇಬ್ರಾಹಿಂ ಪ್ರಾಥಮಿಕ ಸಂಪರ್ಕಿತರಾದ ಡಿಕೆಶಿ ಸೇರಿದಂತೆ ಹಲವರು ಕಾಂಗ್ರೆಸ್​ ನಾಯಕರು ಮೇಕೆದಾಟು ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಜನರಿಗೆ ಬುದ್ಧಿ ಹೇಳಬೇಕಾದ ಜನ ನಾಯಕರೇ ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಜನ ಸಾಮಾನ್ಯರ ಕಣ್ಣು ಕೆಂಪಗಾಗಿಸಿದೆ.

ಇದನ್ನೂ ಓದಿ : ರಾಜ್ಯ ಬಿಜೆಪಿಗೆ ವಲಸಿಗರೇ ಕಂಟಕ : ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನ ಪ್ರಕರಣದ ವರದಿ ಕೇಳಿದ ಹೈಕಮಾಂಡ್

ಇದನ್ನೂ ಓದಿ : ಕೊರೊನಾ ಮೂರನೇ ಅಲೆಯಿಂದ ಕಾದಿದೆ ಮಕ್ಕಳಿಗೆ ಅಪಾಯ

CM basavaraja bommai tests corona positive

Comments are closed.