ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಕೊರೊನಾ ಪ್ರಕರಣ ದಾಖಲಾಗಿದೆ. ಭಾನುವಾರವಷ್ಟೇ ಕೊರೊನಾಕ್ಕೆ ಬಲಿಯಾಗಿದ್ದ ಮಹಿಳೆಯ ಸಂಪರ್ಕದಲ್ಲಿದ್ದ 67 ವರ್ಷದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ನಂತರ ಸಾವನ್ನಪ್ಪಿದ್ದರು. ಆದರೆ ಮಹಿಳೆಯ ಸಾವಿಗೆ ಕೊರೊನಾ ಸೋಂಕು ಕಾರಣ ಅಂತಾ ದೃಢಪಟ್ಟಿತ್ತು. ಹೀಗಾಗಿ ಮಹಿಳೆ ವಾಸವಿದ್ದ ಬಂಟ್ವಾಳ ಕೆಳಪೇಟೆಯನ್ನೇ ಸೀಲ್ ಡೌನ್ ಮಾಡಲಾಗಿದೆ.
ಇದೀಗ ಮೃತ ಮಹಿಳೆಯ ಸಂಪರ್ಕದಲ್ಲಿದ್ದ ಪಕ್ಕದ ಮನೆಯ ಅಜ್ಜಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಹಿಳೆ ಸಾವನ್ನಪ್ಪಿದ್ದ ಬೆನ್ನಲ್ಲೇ ಅಕ್ಕಪಕ್ಕದ ಮನೆಯವರನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲಾಗಿದ್ದು, ಇದೀಗ ವೃದ್ದೆಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ವೃದ್ದ ಮಹಿಳೆಯನ್ನು ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ, 3 ಮಂದಿ ಕೊರೊನಾ ಸೋಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದಂತೆ 12 ಮಂದಿ ಈಗಾಗಲೇ ಕೊರೊನಾ ಸೋಂಕಿನ ಗುಣಮುಖರಾಗಿದ್ದಾರೆ. ವೃದ್ದ ಮಹಿಳೆಗೆ ಕೊರೊನಾ ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ಬಂಟ್ವಾಳದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.