ಹೆಂಡ್ತಿ ಎಂದು ಶ್ರೀಮಂತ ಎಂದು ಬಿಲ್ಡಪ್ ತೋರಿಸಿದ್ದ ಸರಗಳ್ಳ ಅಂದರ್
ಬಂಧಿತ ಆರೋಪಿಗಳನ್ನು 36 ವರ್ಷದ ಗುರುಪ್ರಸಾದ್ ಅಲಿಯಾಸ್ ಗುರು, 20 ವರ್ಷದ ರೋಹಿತ್ ಅಲಿಯಾಸ್ ಗೆದ್ವಾ, 19 ವರ್ಷದ ನಂಜೇಗೌಡ ಅಲಿಯಾಸ್ ಕಾಶಿ ಹಾಗೂ 20 ವರ್ಷದ ಮಾದೇಶ್ ಅಲಿಯಾಸ್ ಮಾದ ಎಂದು ಗುರುತಿಸಲಾಗಿದೆ.

ಪತ್ನಿಯ ಎದುರು ತಾನು ಆಗರ್ಭ ಶ್ರೀಮಂತ ಎಂದು ಹೇಳಿಕೊಂಡಿದ್ದ ಪತಿರಾಯನೊಬ್ಬ ತನ್ನ ಸ್ಟೇಟಸ್ ಮೇಂಟೇನ್ ಮಾಡಲು ಸರಗಳ್ಳತನಕ್ಕೆ ಇಳಿದು ಇದೀಗ ಪೊಲೀಸ್ ಠಾಣಾ ಅತಿಥಿಯಾದ ಘಟನೆಯೊಂದು ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬಂಧಿತ ಆರೋಪಿಗಳನ್ನು 36 ವರ್ಷದ ಗುರುಪ್ರಸಾದ್ ಅಲಿಯಾಸ್ ಗುರು, 20 ವರ್ಷದ ರೋಹಿತ್ ಅಲಿಯಾಸ್ ಗೆದ್ವಾ, 19 ವರ್ಷದ ನಂಜೇಗೌಡ ಅಲಿಯಾಸ್ ಕಾಶಿ ಹಾಗೂ 20 ವರ್ಷದ ಮಾದೇಶ್ ಅಲಿಯಾಸ್ ಮಾದ ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು 70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಸಿಎಂ ಕುರ್ಚಿ ಕೈ ತಪ್ಪುತ್ತಾ ಸಿದ್ದರಾಮಯ್ಯಗೆ? ರಾಷ್ಟ್ರ ರಾಜಕಾರಣಕ್ಕೆ ಟಗರು ಎಂಟ್ರಿ!
ಈ ಕಳ್ಳರ ಪೈಕಿ ಗುರುಪ್ರಸಾದ್ ಎಂಬಾತನೇ ಈ ಎಲ್ಲಾ ಕಳ್ಳತನಗಳ ಮಾಸ್ಟರ್ಮೈಂಡ್. ಪತ್ನಿಯ ಎದುರು ತಾನು ಶ್ರೀಮಂತ ಎಂದು ತೋರಿಸಿಕೊಳ್ಳುವ ಹುಚ್ಚು. ಇದೇ ಚಟ ಈತನನ್ನು ಕಳ್ಳತನದ ಹಾದಿಗೆ ದೂಡಿತ್ತು. ಉಳಿದ ಯುವಕರೊಂದಿಗೆ ಗ್ಯಾಂಗ್ ಕಟ್ಟಿದ್ದ ಈತ ಶ್ರೀಮಂತನಾಗುವ ಸುಲಭ ಮಾರ್ಗ ಎಂಬಂತೆ ಸರಗಳ್ಳತನದ ಕೆಲಸಕ್ಕೆ ಇಳಿದಿದ್ದ ಎನ್ನಲಾಗಿದೆ.
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗುತ್ತಿತ್ತು. ಇದೇ ಹಣದಲ್ಲಿ ಶೋಕಿ ಮಾಡಿಕೊಂಡು ಹಾಯಾಗಿದ್ದ ಗುರುಪ್ರಸಾದ್ & ಗ್ಯಾಂಗ್ಗೆ ಪೊಲೀಸರು ಇದೀಗ ಖೆಡ್ಡಾ ತೋಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 30ರಂದು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ವಿಶೇಷ ತಂಡ ರಚಿಸಿ ಶೋಧ ಕಾರ್ಯಕ್ಕೆ ಇಳಿದಿದ್ದರು. ಕೊನೆಗೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸರು 475 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಮೇಲೆ ವಿವಿಧ ಠಾಣೆಗಳಲ್ಲಿ ಒಟ್ಟೂ 16 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.



