DK Shivakumar | Karnataka CM Power Sharing Deal: ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ‘ಅಧಿಕಾರ ಹಸ್ತಾಂತರ’ದ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ಶಾಸಕರ ಬಳಿ ಆಡಿರುವ ಒಂದು ಮಾತು ಈಗ ಕೈ ಪಾಳಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ದೆಹಲಿ ಪ್ರವಾಸ ಮುಗಿಸಿ ಬಂದಿರುವ ಡಿಕೆಶಿ, “It was a fruitful meeting” (ಅದೊಂದು ಫಲಪ್ರದ ಭೇಟಿಯಾಗಿತ್ತು) ಎಂದು ಹೇಳುವ ಮೂಲಕ ಹೈಕಮಾಂಡ್ನಿಂದ ತಮಗೆ ಗ್ರೀನ್ ಸಿಗ್ನಲ್ ಸಿಕ್ಕಿದೆಯೇ ಎಂಬ ಕುತೂಹಲ ಮೂಡಿಸಿದ್ದಾರೆ.
ದೆಹಲಿ ಭೇಟಿಯ ರಹಸ್ಯವೇನು?
ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿದ್ದ ಶಿವಕುಮಾರ್, ರಾಜ್ಯ ರಾಜಕಾರಣದ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ವಿದೇಶಕ್ಕೆ ಹಾರಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬೆಳವಣಿಗೆಯಿಂದ ಕಂಗಾಲಾಗಿದ್ದ ಡಿಕೆಶಿ ಆಪ್ತ ಶಾಸಕರು, “ಮುಂದಿನ ಕಾರ್ಯತಂತ್ರವೇನು? ವರಿಷ್ಠರು ಯಾವ ಅಭಯ ನೀಡಿದ್ದಾರೆ?” ಎಂದು ಪ್ರಶ್ನಿಸಿದಾಗ ಡಿಕೆಶಿ “ಫಲಪ್ರದ ಮಾತುಕತೆ”ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆಪ್ತರಿಗೆ ಡಿಕೆಶಿ ನೀಡಿದ ಕಟ್ಟುನಿಟ್ಟಿನ ಸೂಚನೆಗಳು:
ಮೌನಕ್ಕೆ ಶರಣಾಗಿ: “ನೀವ್ಯಾರೂ ಸದ್ಯಕ್ಕೆ ಬಹಿರಂಗ ಹೇಳಿಕೆಗಳನ್ನು ನೀಡಬೇಡಿ. ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ” ಎಂದು ಆಪ್ತರಿಗೆ ಸೂಚಿಸಿದ್ದಾರೆ.
ಕೌಂಟರ್ ಅಟ್ಯಾಕ್: ಸಿದ್ದು ಪಾಳಯದಿಂದ ಬರುವ ಹೇಳಿಕೆಗಳಿಗೆ ತಾವೇ ಖುದ್ದಾಗಿ ಟಾಂಗ್ ನೀಡುವುದಾಗಿ ಡಿಕೆಶಿ ತಿಳಿಸಿದ್ದಾರೆ.
ವರಿಷ್ಠರ ಮಾರ್ಗದರ್ಶನ: ಹೈಕಮಾಂಡ್ ತಮಗೆ ಕೆಲವು ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ಎಲ್ಲ ಪ್ರಶ್ನೆಗಳಿಗೂ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಸಮಾಧಾನಪಡಿಸಿದ್ದಾರೆ.
SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಮಾರ್ಚ್ 18 ರಿಂದ ಪರೀಕ್ಷೆ ಆರಂಭ- ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಸಿದ್ದರಾಮಯ್ಯ ಅಂಗಳಕ್ಕೆ ಚೆಂಡು!
ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಚಾಣಾಕ್ಷ ಉತ್ತರ ನೀಡಿರುವ ಶಿವಕುಮಾರ್, “ಸಿದ್ದರಾಮಯ್ಯನವರೇ ಕಾಲ ಬಂದಾಗ ಅಧಿಕಾರ ಹಂಚಿಕೆ ಸೂತ್ರವನ್ನು ಜನತೆಗೆ ತಿಳಿಸುತ್ತಾರೆ” ಎನ್ನುವ ಮೂಲಕ ಇಡೀ ಚೆಂಡನ್ನು ಸಿಎಂ ಅಂಗಳಕ್ಕೆ ಎಸೆದಿದ್ದಾರೆ. ಇದು ಪರೋಕ್ಷವಾಗಿ ‘ಅಧಿಕಾರ ಹಸ್ತಾಂತರದ ಒಪ್ಪಂದ ಜಾರಿಯಾಗಲಿದೆ’ ಎಂಬ ಸಂದೇಶವನ್ನು ರವಾನಿಸಿದಂತಿದೆ.
ರಾಜಕೀಯ ವಿಶ್ಲೇಷಣೆ:
ಡಿಕೆಶಿ ಅವರ ಈ ‘ಫಲಪ್ರದ’ ಎಂಬ ಶಬ್ದ ಕಾಂಗ್ರೆಸ್ನಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ. ಹೈಕಮಾಂಡ್ ಮಟ್ಟದಲ್ಲಿ “ಒಪ್ಪಂದದ ಸೂತ್ರ” ಜಾರಿಗೆ ಸೂಚನೆ ಸಿಕ್ಕಿರಬಹುದೇ? ಅಥವಾ ಲೋಕಸಭೆ ಚುನಾವಣೆಯ ನಂತರದ ಬದಲಾವಣೆಯ ಬಗ್ಗೆ ಚರ್ಚೆಯಾಗಿದೆಯೇ? ಎಂಬ ಪ್ರಶ್ನೆಗಳು ಈಗ ರಾಜಕೀಯ ಪಡಸಾಲೆಯಲ್ಲಿ ರಂಗೇರಿವೆ.


