Guest Lecturers : ಮಂಗಳೂರು : ಅತಿಥಿ ಉಪನ್ಯಾಸಕರಿಗೆ ಹೊಸ ಸಂಕಷ್ಟ : ಯುಜಿಸಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

Guest Lecturers : ಮಂಗಳೂರು : 2025-26ನೇ ಸಾಲಿನ ಬಾಕಿ ಉಳಿದ ಸೆಮಿಸ್ಟರ್ಗಳ ಬೋಧನೆಗೆ ಅತಿಥಿ ಶಿಕ್ಷಕರ ಹುದ್ದೆಗೆ ನೇಮಕಾತಿ ಆರಂಭಿಸಲಾಗಿದ್ದು ನೇಮಕಾತಿಯ ನಿರೀಕ್ಷೆಯಲ್ಲಿದ್ದ ಅತಿಥಿ ಉಪನ್ಯಾಸಕರಿಗೆ ಆಘಾತ ಎದುರಾಗಿದೆ.
ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಅರ್ಹತೆ ಆಧಾರದಲ್ಲಿಯೇ ನೇಮಕಾತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿರುವುದು ಹೊಸ ಆತಂಕಕ್ಕೆ ದಾರಿ ಮಾಡಿದೆ.
ನ್ಯಾಯಾಲಯ ನೀಡಿರುವ ಸೂಚನೆಯ ಅನುಸಾರ ರಾಜ್ಯ ಸರ್ಕಾರವು ಯುಜಿಸಿ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದೆ. ಈ ಕ್ರಮದಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಉಪನ್ಯಾಸಕರು ನಿರುದ್ಯೋಗಿಗಳಾಗುವ ಸಾಧ್ಯತೆ ದಟ್ಟವಾಗಿದೆ.
ಈ ವಿಚಾರವಾಗಿ ಮಂಗಳೂರಿನ ಹಿರಿಯ ಅತಿಥಿ ಉಪನ್ಯಾಸಕರೊಬ್ಬರು ಮಾತನಾಡಿದ್ದು, ಕಳೆದ 15 ವರ್ಷಗಳಿಂದ ನಾನು ಸೇವೆ ಸಲ್ಲಿಸುತ್ತಿದ್ದೇನೆ. 2018ರವರೆಗೆ ಕೇವಲ ಪಿಜಿ ವ್ಯಾಸಂಗ ಮಾಡಿದ್ದರೆ ಸಾಕು ಅತಿಥಿ ಉಪನ್ಯಾಸಕ ಹುದ್ದೆ ಪಡೆಯಲು ನಮಗೆ ಅರ್ಹತೆ ಸಿಗುತ್ತಿತ್ತು.
ಆದರೆ ಈಗ ಹೊಸ ನಿಯಮದ ಪ್ರಕಾರ ಯುಜಿಸಿ ಅರ್ಹತೆ ಕೇಳಲಾಗುತ್ತಿದೆ. ಯುಜಿಸಿ ಮಾರ್ಗಸೂಚಿಯ ಪ್ರಕಾರ ಎನ್ಇಟಿ ಇಲ್ಲವೇ ಕೆಸೆಟ್ ಉತ್ತೀರ್ಣರಾದವರಿಗೆ ಮಾತ್ರ ಅತಿಥಿ ಉಪನ್ಯಾಸಕರಾಗುವ ಅವಕಾಶ ಸಿಗಲಿದೆ. ಪಿಎಚ್ಡಿ ಕೂಡ ಹೊಂದಿರಬೇಕು ಎಂದಿದೆ. ಇದು ನಮಗೆಲ್ಲ ಸಂಕಷ್ಟ ತಂದಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 400 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ಇವರಲ್ಲಿ ಕೇವಲ 297 ಮಂದಿ ಮಾತ್ರ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಶಿಕ್ಷಕರಾಗಿದ್ದಾರೆ.
Mangalore New Crisis for Guest Lecturers State Government Makes UGC Norms Mandatory



