ಭೀಕರ ಅಪಘಾತದಿಂದ ಹೊತ್ತಿ ಉರಿದ ಟ್ರಕ್‌ : 4 ಮಂದಿ ದುರ್ಮರಣ

ಅಜ್ಮೀರ್‌ : ಎರಡು ಟ್ರಕ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಚಾಲಕರು ಹಾಗೂ ಸಹಾಯಕರು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.

ಬೇವಾರ್‌ ನಿಂದ ಬರುತ್ತಿದ್ದ ಅಮೃತ ಶಿಲೆ ತುಂಬಿದ್ದ ಟ್ರಕ್‌ ಅಜ್ಮೀರ್‌ ನಿಂದ ಬರುತ್ತಿದ್ದ ಗ್ಯಾಸ್‌ ತುಂಬಿದ್ದ ಟ್ರಕ್‌ಗೆ ಢಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಟ್ರಕ್‌ ಹೊತ್ತಿ ಉರಿದಿದ್ದು, ಎರಡೂ ಟ್ರಕ್‌ಗಳಲ್ಲಿದ್ದ ಚಾಲಕರು ಹಾಗೂ ಸಹಾಯಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ನಾಲ್ಕು ಮಂದಿಯನ್ನು ಬದುಕಿಸಲು ಮಾತ್ರ ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಎಸ್ಪಿ ಸೀತಾರಾಮ್‌ ಪ್ರಜಾಪತಿ ಅವರು ಮಾಹಿತಿಯನ್ನು ನೀಡಿದ್ದಾರೆ.

ಒಂದು ಟ್ರಕ್‌ನಲ್ಲಿ ಸುಮಾರು 300ಕ್ಕೂ ಅಧಿಕ ಗ್ಯಾಸ್‌ ಸಿಲಿಂಡರ್‌ ತುಂಬಿಸಲಾಗಿತ್ತು ಎಂದು ತಿಳಿಬಂದಿದೆ. ಇದೇ ಕಾರಣದಿಂದಲೇ ಟ್ರಕ್‌ಗೆ ಬೇಗನೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಿಂದಾಗಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಶವಗಳನ್ನು ಹೊರತೆಗೆಯಲು ಕಷ್ಟಕರವಾಗಿತ್ತು. ಇದೀಗ ಶವಗಳನ್ನು ಜೆಎಲ್‌ಎನ್‌ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಆದರ್ಶ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.