ಅಧಿಕ ಮಾಸ 2026 : ಲಕ್ಷ್ಮಿನಾರಾಯಣನ ಕೃಪೆಗಾಗಿ ಈ 5 ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ

ಧಾರ್ಮಿಕ ನಂಬಿಕೆಗಳ ಪ್ರಕಾರ ಮಹಾ ವಿಷ್ಣು ಅಧಿಕ ತಿಂಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ.

ಹಿಂದೂ ಕ್ಯಾಲೆಂಡರ್‌ನ ಹೆಚ್ಚುವರಿ ತಿಂಗಳನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ ಮಹಾ ವಿಷ್ಣು ಈ ತಿಂಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ. ಈ ತಿಂಗಳನ್ನು ಪೂಜೆ, ದಾನಕ್ಕೆ ಮೀಸಲಿಡಲಾಗಿದೆ. ಈ ವರ್ಷ ಅಧಿಕ ಮಾಸವು ಜ್ಯೇಷ್ಠ ಮಾಸದಲ್ಲಿ ಬಂದಿದೆ. ಮೇ 17 ರಿಂದ ಜೂನ್‌ 15 ರವರೆಗೆ ಜ್ಯೇಷ್ಠ ಮಾಸದ ಆಚರಣೆಯಿರುತ್ತದೆ.

ಅಧಿಕ ಮಾಸದಲ್ಲಿ ಯಾವ ದೇವರನ್ನು ಪೂಜಿಸಬೇಕು?

ಧಾರ್ಮಿಕ ನಂಬಿಕೆಗಳ ಪ್ರಕಾರ ಅಧಿಕ ಮಾಸದಲ್ಲಿ ಶ್ರೀಹರಿ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಇದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ. ಅಧಿಕ ಮಾಸದಲ್ಲಿ ಮಾಡಿದ ಪೂಜೆಗೆ ಅಧಿಕ ಶುಭ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಲಕ್ಷ್ಮಿ ನಾರಾಯಣನಿಗೆ ಸಂಬಂಧಿಸಿದ ಪೂಜೆ–ಪುನಸ್ಕಾರಗಳನ್ನು ಮಾಡಲಾಗುತ್ತದೆ. ಪ್ರಿಯವಾದ ವಸ್ತುಗಳನ್ನು ದಾನ ಮಾಡುತ್ತಾರೆ. ಜೊತೆಗೆ ಕೆಲವು ಪವಿತ್ರ ವಸ್ತುಗಳನ್ನು ಮನೆಗೆ ತರುವುದು ಲಕ್ಷ್ಮಿ ನಾರಾಯಣನ ಕೃಪೆಗೆ ಪಾತ್ರರರಾಗಬಹುದು. ಅಧಿಕ ಮಾಸದಲ್ಲಿ ಈ ಕೆಳಗಿನ 5 ವಸ್ತುಗಳನ್ನು ಮನೆಗೆ ತರುವುದರಿಂದ ಏನೆಲ್ಲಾ ಪ್ರಯೋಜನಗಳು ದೊರಕುತ್ತವೆ ಎಂದು ನೋಡೋಣ.

ತುಳಸಿ ಗಿಡ

ಇದನ್ನು ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗಿದೆ. ಇದು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಅಧಿಕ ಮಾಸದಲ್ಲಿ ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಟ್ಟು ಅದನ್ನು ಪ್ರತಿದಿನ ಪೂಜಿಸುವುದರಿಂದ ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ದಾಂಪತ್ಯ ಜೀವನವು ಮಾಧುರ್ಯದಿಂದ ಕೂಡಿರುತ್ತದೆ. ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಲು ಮರೆಯದಿರಿ.

ಇದನ್ನೂ ಓದಿ : ಅಧಿಕ ಮಾಸದ ಮೊದಲ ಗುರು ಪ್ರದೋಷ ವ್ರತ 2026 : ಪೂಜಾ ಸಮಯ, ವ್ರತಾಚರಣೆ ತಿಳಿಯಿರಿ

ಗೋಮತಿ ಚಕ್ರ

ಸಮುದ್ರ ಮಂಥನದಲ್ಲಿ ಲಕ್ಷ್ಮಿ ದೇವಿಯ ಜೊತೆಗೆ ಉದ್ಭವಿಸಿದ ವಸ್ತುಗಳಲ್ಲೊಂದು. ಇದನ್ನು ಸುದರ್ಶನ ಚಕ್ರದ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ದೇವಸ್ಥಾನದಲ್ಲಿ ಅಥವಾ ನಿಮ್ಮ ಮನೆಯ ತಿಜೋರಿಯಲ್ಲಿ ಇಡುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಕುಟುಂಬದ ಸಮೃದ್ಧಿ ಹೆಚ್ಚುತ್ತದೆ.

ಹಳದಿ ಕವಡೆಗಳು

ಹಳದಿ ಕವಡೆಗಳು ಸಂಪತ್ತನ್ನು ಆಕರ್ಷಿಸಲು ಉತ್ತಮವಾಗಿದೆ ಪರಿಗಣಿಸಲಾಗಿದೆ. ಅಧಿಕ ಮಾಸದ ಸಮಯದಲ್ಲಿ, ಅವುಗಳನ್ನು ತಂದು ಲಕ್ಷ್ಮಿ ದೇವಿಯ ಪಾದಗಳಿಗೆ ಅರ್ಪಿಸಿ. ನಂತರ, ಅವುಗಳನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಿಜೋರಿಯಲ್ಲಿ ಇಡಿ. ಇದು ಹಣದ ಕೊರತೆಯಾಗದಂತೆ ತಡೆಯುತ್ತದೆ.

ಬಲಮುರಿ ಶಂಖ (ದಕ್ಷಿಣಾವರ್ತಿ ಶಂಖ)

ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ವಸ್ತುಗಳಲ್ಲಿ ಬಲಮುರಿ ಶಂಖವು ಒಂದು. ಆದ್ದರಿಂದ ಇದನ್ನು ಲಕ್ಷ್ಮಿ ದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ಶಂಖಗಳು ಎಡಕ್ಕೆ ತೆರೆದುಕೊಂಡಿದ್ದರೆ, ದಕ್ಷಿಣಾವರ್ತಿ ಅಥವಾ ಬಲಮುರಿ ಶಂಖವು ಬಲಕ್ಕೆ ತೆರೆದುಕೊಳ್ಳುತ್ತದೆ. ಇದು ಅತ್ಯಂತ ಅಪರೂಪ ಮತ್ತು ಮಂಗಳಕರವಾಗಿದೆ. ಅಧಿಕ ಮಾಸದ ಸಮಯದಲ್ಲಿ ಇದನ್ನು ತಂದು ನಿಮ್ಮ ಪೂಜಾ ಸ್ಥಳದಲ್ಲಿ ಇರಿಸಿ. ಅದನ್ನು ನೀರಿನಿಂದ ತುಂಬಿಸಿ ಮನೆಯಾದ್ಯಂತ ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಮತ್ತು ಸಕಾರಾತ್ಮಕತೆ ಬರುತ್ತದೆ. ಇದರಿಂದ ನಿಮ್ಮ ಬಡತನವೆಲ್ಲವೂ ದೂರವಾಗುತ್ತದೆ.

ಕಾಮಧೇನು ಹಸುವಿನ ಪ್ರತಿಮೆ

ಸನಾತನ ಧರ್ಮದಲ್ಲಿ, ಹಸುವನ್ನು 33 ಕೋಟಿ ದೇವರುಗಳ ವಾಸಸ್ಥಾನ ಎಂದು ನಂಬಲಾಗಿದೆ. ಕಾಮಧೇನು ಹಸು ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ಪರಿಗಣಿಸಲಾಗಿದೆ. ಅಧಿಕ ಮಾಸದ ಸಮಯದಲ್ಲಿ ಕರು ಸಹಿತ ಕಾಮಧೇನು ಹಸುವಿನ ವಿಗ್ರಹವನ್ನು (ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದಿಂದ ಮಾಡಿದ) ಮನೆಗೆ ತರುವುದು ಬಹಳ ಶುಭ. ಇದನ್ನು ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದು ಮನಸ್ಸಿಗೆ ಶಾಂತಿ ತರುವುದರ ಜೊತೆಗೆ ಮನೆಯಲ್ಲಿರುವ ಮಕ್ಕಳ ಆರೋಗ್ಯ ಮತ್ತು ವೃತ್ತಿಜೀವನವನ್ನು ಸುಧಾರಿಸುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories