New Cricket Stadiums Karnataka : ಪುತ್ತೂರು, ಬಳ್ಳಾರಿಯಲ್ಲಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಪ್ರಿಯರಿಗೊಂದು ಶುಭ ಸುದ್ದಿ. ರಾಜ್ಯದ ಎರಡು ಕಡೆ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳು (New Cricket Stadiums Karnataka) ತಲೆ ಎತ್ತಲಿವೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಸ್ಥಳ ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association – KSCA) ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರದ ಪುರಸ್ಕರಿಸಿದೆ. ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮಗಳಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಜಮೀನು ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ 10.26 ಎಕರೆ ಜಮೀನನು ನೀಡಲು ನಿರ್ಧರಿಸಲಾಗಿದ್ದು, ಸ್ಟೇಡಿಯಂ ನಿರ್ಮಾಣ ಕಾರ್ಯ ಸದ್ಯದಲ್ಲೇ ಶುರುವಾಗಲಿದೆ. ಇನ್ನು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರಿಕೆಟ್ ಸ್ಟೇಡಿಯಂಗಾಗಿ 23.25 ಎಕರೆ ನೀಡುವ ಪ್ರಸ್ತಾಪಕ್ಕೂ ರಾಜ್ಯ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ.

ರಾಜ್ಯದಲ್ಲಿ ಸದ್ಯ KSCA ಒಡೆತನದ 8 ಕಡೆ ಕ್ರಿಕೆಟ್ ಕ್ರೀಡಾಂಗಣಗಳಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರಿನಲ್ಲಿ ಮೂರು ಕ್ರೀಡಾಂಗಣಗಳು, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಶಿವಮೊಗ್ಗದ KSCA ನವಿಲೆ ಕ್ರೀಡಾಂಗಣ, ಹುಬ್ಬಳ್ಳಿಯ ರಾಜನಗರ KSCA ಕ್ರೀಡಾಂಗಣ ಹಾಗೂ ಬೆಳಗಾವಿಯಲ್ಲಿ ಮತ್ತೊಂದು ಮೈದಾನವಿದೆ. ಆದರೆ ಈ ಪೈಕಿ ಫ್ಲಡ್ ಲೈಟ್ ವ್ಯವಸ್ಥೆಯುಳ್ಳ ಅಂತಾರಾಷ್ಟ್ರೀಯ ಕ್ರೀಡಾಂಗಣವಿರುವುದು ಚಿನ್ನಸ್ವಾಮಿ ಮೈದಾನದಲ್ಲಿ ಮಾತ್ರ. ಮೈಸೂರು ಹಾಗೂ ಹುಬ್ಬಳ್ಳಿಯ ಕ್ರೀಡಾಂಗಣಗಳನ್ನೂ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಿ ಅಲ್ಲೂ ಅಂತಾರಾಷ್ಟ್ರೀ ಪಂದ್ಯಗಳನ್ನು ಆಡಿಸಬೇಕೆಂಬ ಒತ್ತಾಯವಿದೆ. ಇದರ ಜೊತೆಗೆ ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲೂ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಬೇಡಿಕೆಗಳು ಹೆಚ್ಚಿದ್ದವು. ಈ ಬಗ್ಗೆ ಪರಿಶೀಲಿಸಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆ ಜಮೀನಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಆ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು ಜಮೀನು ನೀಡಲು ಮುಂದಾಗಿದೆ.

ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ರಣಜಿ ಪಂದ್ಯಗಳು ನಡೆಯಲಿವೆ. ಕ್ರೀಡಾಂಗಣ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣವಾಗಲಿದ್ದರೂ, ಅಂತಾರಾಷ್ಟ್ರೀಯ ಪಂದ್ಯಗಳು ಬೆಂಗಳೂರು ಬಿಟ್ಟು ಹೊರಬರುವ ಸಾಧ್ಯತೆಗಳು ಸದ್ಯಕ್ಕಂತೂ ಕಂಡು ಬರುತ್ತಿಲ್ಲ.

ಇದನ್ನೂ ಓದಿ : KSCA Election 2022 : ನವೆಂಬರ್ 20ಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ನಾಮಪತ್ರ ಸಲ್ಲಿಕೆ ಬುಧವಾರ ಶುರು

ಇದನ್ನೂ ಓದಿ : Raghavendra Divgi life story : ಭಾರತ ವಿಶ್ವಕಪ್ ತಂಡದಲ್ಲಿರುವ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರ ಮನಮಿಡಿಯುವ ಕಥೆ

New Cricket Stadiums in Karnataka Puttur and Bellary Approvals Karnataka Cabinet

Comments are closed.