Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Panya) ಅವರ ಕ್ರಿಕೆಟ್ ಬದುಕದಲ್ಲಿ ಇದು ಪರ್ವಕಾಲ. ಕೆಲವೇ ತಿಂಗಳುಗಳ ಹಿಂದೆ ಟೀಮ್ ಇಂಡಿಯಾದಲ್ಲೇ ಕಾಣಿಸಿಕೊಳ್ಳದ ಪಾಂಡ್ಯ ಈಗ ಮುಟ್ಟಿದ್ದೆಲ್ಲಾ ಚಿನ್ನ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿ ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟಿದ್ದ ಹಾರ್ದಿಕ್ ಪಾಂಡ್ಯ (Sunil Shetty Praises Hardik Pandya) , ಅದಕ್ಕೆ ಪ್ರತಿಫಲ ಎಂಬಂತೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದರು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟರ್”ನಲ್ಲೊಂದು ವೀಡಿಯೋ ಪೋಸ್ಟ್ ಮಾಡಿ ಕೆಲ ಸಾಲುಗಳನ್ನು ಬರೆದಿದ್ದರು.

“ಏಳುಬೀಳುಗಳಲ್ಲಿ ನನ್ನ ಜೊತೆ ನನ್ನವರು ನಿಂತಿದ್ದರು. ಪ್ರತೀದಿನ ಬೆಳಗ್ಗೆ ಎದ್ದು ಅಭ್ಯಾಸಕ್ಕೆ ಮರಳಲು, ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಲು, ಮತ್ತೆ ಭಾರತ ಪರ ಆಡಲು ಕಾತರಿಸುತ್ತಿದ್ದೆ. ಕಷ್ಟದ ದಿನಗಳಲ್ಲಿ ನನ್ನ ಜೊತೆ ನಿಂತವರಿಗೆ, ನನ್ನನ್ನು ಬೆಂಬಲಿಸಿದವರಿಗೆ ಮತ್ತು ಮಾರ್ಗದರ್ಶನ ನೀಡಿದವರಿಗೆ ಆಭಾರಿಯಾಗಿದ್ದೇನೆ” ಎಂದು ಟ್ವಿಟರ್”ನಲ್ಲಿ ಬರೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ, ಕಳೆದ ಕೆಲ ವರ್ಷಗಳಲ್ಲಿ ಕ್ರಿಕೆಟ್ ಬದುಕಲ್ಲಿ ಎದುರಿಸಿದ ಸವಾಲುಗಳ ಕುರಿತಾದ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು.

ಹಾರ್ದಿಕ್ ಪಾಂಡ್ಯ ಟ್ವಿಟರ್”ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಮತ್ತು ಬರೆದಿರುವ ಸಾಲುಗಳಿಗೆ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಟ್ವಿಟರ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ನೀನೊಬ್ಬ ನಿಜವಾದ ಸ್ಫೂರ್ತಿ ಹಾರ್ದಿಕ್. ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂದು ಸುನಿಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಮಂಗಳೂರು ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕನ್ನಡಿಗ ಕೆ.ಎಲ್ ರಾಹುಲ್ ಅವರ ಭಾವೀ ಮಾವ ಕೂಡ ಹೌದು. ಸುನಿಲ್ ಶೆಟ್ಟಿ ಅವರ ಮಗಳು ಆತಿಯಾ ಶೆಟ್ಟಿಯನ್ನು ರಾಹುಲ್ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಮುಂದಿನ ವರ್ಷ ಇಬ್ಬರೂ ಮದುವೆಯಾಗಲಿದ್ದಾರೆ. ಮಗಳು ಮತ್ತು ರಾಹುಲ್ ಪ್ರೀತಿಗೆ ಸುನಿಲ್ ಶೆಟ್ಟಿ ಒಪ್ಪಿಗೆ ಸೂಚಿಸಿದ್ದು, ಮದುವೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
 
ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಆತ್ಮೀಯ ಸ್ನೇಹಿತರೂ ಹೌದು. 2018ರಲ್ಲಿ ಇಬ್ಬರೂ “ಕಾಫಿ ವಿಥ್ ಕರಣ್” ಕಾರ್ಯಕ್ರಮದಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಆಡಿದ್ದ ಮಾತೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದಾತ್ಮಕ ಮಾತಿನ ಪರಿಣಾಮ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರನ್ನು ಬಿಸಿಸಿಐ ಒಂದು ವರ್ಷ ಕ್ರಿಕೆಟ್”ನಿಂದ ಬ್ಯಾನ್ ಮಾಡಿತ್ತು. ನಿಷೇಧ ತೆರವಾದ ನಂತರ ಟೀಮ್ ಇಂಡಿಯಾಗೆ ಮರಳಿದ್ದ ರಾಹುಲ್, ಅಮೋಘ ಆಟದ ಮೂಲಕ ಟೆಸ್ಟ್, ಏಕದಿನ ಹಾಗೂ ಟಿ20.. ಹೀಗೆ ಮೂರೂ ಪ್ರಕಾರಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಆಧಾರಸ್ಥಂಭ ಎನಿಸಿಕೊಂಡ್ರೆ, ಹಾರ್ದಿಕ್ ಪಾಂಡ್ಯ ವೃತ್ತಿಜೀವನ ಮಾತ್ರ ಏಳುಬೀಳಿನಿಂದಲೇ ಕೂಡಿತ್ತು.
 
ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ2 ವಿಶ್ವಕಪ್ ಟೂರ್ನಿಯ ಬಳಿಕ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ನಂತರ ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿದ್ದ ಪಾಂಡ್ಯ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ನಾಯಕನಾಗಿ ನೇಮಕಗೊಂಡಿದ್ದ ಪಾಂಡ್ಯ, ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂತಚಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿರುವ ಪಾಂಡ್ಯ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : T20 Franchise in South Africa : ದಕ್ಷಿಣ ಆಫ್ರಿಕಾದಲ್ಲಿ ಮಿನಿ ಐಪಿಎಲ್, 6 ಟಿ20 ತಂಡ ಖರೀದಿಸಿದ 6 ಐಪಿಎಲ್ ಫ್ರಾಂಚೈಸಿಗಳು

ಇದನ್ನೂ ಓದಿ : KL Rahul Training at NCA : ಕೆ.ಎಲ್ ರಾಹುಲ್ ಬ್ಯಾಟಿಂಗ್ ; ದಿಗ್ಗಜ ಮಹಿಳಾ ಕ್ರಿಕೆಟರ್ ಬೌಲಿಂಗ್, NCAನಲ್ಲಿ ಭರ್ಜರಿ ಪ್ರಾಕ್ಟೀಸ್

Sunil Shetty Praises Hardik Pandya

Comments are closed.