ಗುವಾಹಟಿ: (Selfless Virat Kohli ) ದಾಖಲೆಗಾಗಿ ಆಡಲ್ಲ ವಿರಾಟ್, ಇಲ್ಲಿದೆ ಮತ್ತೊಂದು ಸಾಕ್ಷಿ, ಕಿಂಗ್ ಕೊಹ್ಲಿ ನಿಸ್ವಾರ್ಥತೆಗೆ ಫ್ಯಾನ್ಸ್ ಫಿದಾ) ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ದಾಖಲೆಗಳಿಗಾಗಿ ಆಡುವವರಲ್ಲ. ವಿರಾಟ್ ಕೊಹ್ಲಿಗೆ ವೈಯಕ್ತಿಕ ದಾಖಲೆಗಳಿಗಿಂತ ತಂಡದ ಹಿತವೇ ಮುಖ್ಯ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯ ಅಸ್ಸಾಂ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ (India vs South Africa T20 Series) ಮತ್ತೊಮ್ಮೆ ಸಾಬೀತಾಗಿದೆ.
ರನ್ ಮಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿ ಭಾರತದ ಗೆಲುವಿಗೆ ತಮ್ಮ ಅಮೂಲ್ಯ ಕಾಣಿಕೆ ನೀಡಿದರು. ಈ ವೇಳೆ ವಿರಾಟ್ ಕೊಹ್ಲಿ ತೋರಿದ ನಡವಳಿಕೆಯೊಂದು ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಹ್ಲಿ ಎಂಥಾ ನಿಸ್ವಾರ್ಥ ಆಟಗಾರ ಎಂಬುದಕ್ಕೆ ಈ ಘಟನೆ ಸಾಕ್ಷಿ ನುಡಿಯುತ್ತಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ, 19ನೇ ಇನ್ನಿಂಗ್ಸ್ ಅಂತ್ಯಕ್ಕೆ ವಿರಾಟ್ ಕೊಹ್ಲಿ 49 ರನ್ ಗಳಿಸಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿಶ್ವದಾಖಲೆಯ 34ನೇ ಅರ್ಧಶತಕಕ್ಕೆ ವಿರಾಟ್ ಕೊಹ್ಲಿ ಅವರಿಗೆ ಬೇಕಿದ್ದದ್ದು ಒಂದೇ ಒಂದು ರನ್. ಆದರೆ ಕೊನೆಯ ಓವರ್’ನಲ್ಲಿ ಒಂದೇ ಒಂದು ಎಸೆತವನ್ನು ಎದುರಿಸುವ ಅವಕಾಶ ಕೊಹ್ಲಿಗೆ ಸಿಗಲಿಲ್ಲ. 20ನೇ ಓವರ್’ನ ಆರೂ ಎಸೆತಗಳನ್ನು ದಿನೇಶ್ ಕಾರ್ತಿಕ್ ಎದುರಿಸಿದ್ದರಿಂದ ಕೊಹ್ಲಿ ನಾನ್’ಸ್ಟ್ರೈಕ್’ನಲ್ಲೇ ಉಳಿಯುವಂತಾಯಿತು.
20ನೇ ಓವರ್ ಮಧ್ಯೆ “ಸಿಂಗಲ್ ರನ್ ತೆಗೆದುಕೊಂಡು ನಿಮಗೆ ಸ್ಟ್ರೈಕ್ ಬಿಟ್ಟುಕೊಡುತ್ತೇನೆ” ಎಂದು ದಿನೇಶ್ ಕಾರ್ತಿಕ್ ವಿರಾಟ್ ಕೊಹ್ಲಿಗೆ ಹೇಳಿದ್ದಾರೆ. ಆಗ ವಿರಾಟ್ ಕೊಹ್ಲಿ, “ಏನೂ ಬೇಡ ನೀನು ನಿನ್ನ ಆಟ ಮುಂದುವರಿಸು” ಎಂದು ಡಿಕೆಗೆ ಸೂಚಿಸಿದ್ದಾರೆ. ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿರುವ ಆ ದೃಶ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿಯವರಿಗೆ ತಮ್ಮ ವೈಯಕ್ತಿಕ ದಾಖಲೆಯಿಂದ ತಂಡದ ಹಿತವೇ ಮುಖ್ಯ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿ. ಕೊಹ್ಲಿ ಸಲಹೆಯನ್ನು ಪಾಲಿಸಿದ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಎಸೆದ 20ನೇ ಓವರ್’ನಲ್ಲಿ ಒಂದು ಬೌಂಡರಿ ಎರಡು ಸಿಕ್ಸರ್ ಬಾರಿಸಿದ ಡಿಕೆ ಭಾರತದ ಮೊತ್ತ 3 ವಿಕೆಟ್ ನಷ್ಟಕ್ಕೆ 237 ರನ್ ತಲುಪಲು ಕಾರಣರಾದರು. ಕೊನೆಯಲ್ಲಿ ಡಿಕೆ 7 ಎಸೆತಗಳಲ್ಲಿ ಬಾರಿಸಿದ 17 ರನ್’ಗಳೇ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ವಿಶೇಷ. ಮತ್ತೊಂದೆಡೆ ತಮ್ಮ ಅರ್ಧಶತಕಕ್ಕಾಗಿ ಹಪಹಪಿಸದೆ ತಂಡದ ಹಿತಾಸಕ್ತಿಗಾಗಿ ವಿರಾಟ್ ಕೊಹ್ಲಿ ತೋರಿದ ನಡವಳಿಕೆಗೆ ಕ್ರಿಕೆಟ್ ಪ್ರಿಯರು ಭೇಷ್ ಎಂದಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೊಹ್ಲಿಯವರನ್ನು ಕೊಂಡಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್’ಗಳ ಭಾರೀ ಮೊತ್ತ ಕಲೆ ಹಾಕಿತು. ಓಪನರ್ ಕೆ.ಎಲ್ ರಾಹುಲ್ 28 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್’ಗಳನ್ನೊಳಗೊಂಡ 57 ರನ್ ಬಾರಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಅಜೇಯ 49 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಕೇವಲ 22 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್’ಗಳನ್ನೊಳಗೊಂಡ ಸಿಡಿಲಬ್ಬರದ 61 ರನ್ ಬಾರಿಸಿದರು.
ನಂತರ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ವೀರೋಚಿತ ಸೋಲು ಅನುಭವಿಸಿತು. ಹರಿಣಗಳ ಪರ ಡೇವಿಡ್ ವಾರ್ನರ್ ಸ್ಫೋಟಕ ಶತಕ (106* ರನ್, 47 ಎಸೆತ, 8 ಬೌಂಡರಿ, 7 ಸಿಕ್ಸರ್) ಬಾರಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 16 ರನ್’ಗಳಿಂದ ಪಂದ್ಯ ಗೆದ್ದ ಭಾರತ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ನಾಳೆ (ಅಕ್ಟೋಬರ್ 4) ಇಂದೋರ್’ನಲ್ಲಿ ನಡೆಯಲಿದೆ.
ಇದನ್ನೂ ಓದಿ : Virat Kohli 11000 runs : ಟಿ20 ಕ್ರಿಕೆಟ್: ಕೊಹ್ಲಿ@11000, ವಿರಾಟ ದಾಖಲೆ ಬರೆದ ಕಿಂಗ್
Virat Kohli don’t play for record, here is another proof, King Kohli selflessness