ಬೆಂಗಳೂರಿಗೆ ಅದಾನಿ ಲಗ್ಗೆ; ಸುರಂಗ ರಸ್ತೆಗೆ ಅತಿ ಕಡಿಮೆ ಮೊತ್ತಕ್ಕೆ ಬಿಡ್

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಉದ್ದೇಶಿಸಿರುವ ಬಹುಕೋಟಿ ವೆಚ್ಚದ ಸುರಂಗ ರಸ್ತೆ (Bengaluru Tonnel Road) ಯೋಜನೆಯ ಗುತ್ತಿಗೆ ಪ್ರಕ್ರಿಯೆಯಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ನಗರದ ಉತ್ತರ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ ಈ ಬೃಹತ್ ಯೋಜನೆಯ ಎರಡೂ ಪ್ಯಾಕೇಜ್‌ಗಳ ನಿರ್ಮಾಣಕ್ಕಾಗಿ ಅದಾನಿ ಸಮೂಹವು (Adani Group) ಅತಿ ಕಡಿಮೆ ಮೊತ್ತದ ಬಿಡ್ (L1 Bidder) ಸಲ್ಲಿಸಿ ಮುಂಚೂಣಿಯಲ್ಲಿದೆ.

ವೆಚ್ಚದಲ್ಲಿ ಭಾರಿ ವ್ಯತ್ಯಾಸ
ಅದಾನಿ ಎಂಟರ್‌ಪ್ರೈಸಸ್ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದ್ದರೂ, ಅದು ಸರ್ಕಾರ ನಿಗದಿಪಡಿಸಿದ ಅಂದಾಜು ವೆಚ್ಚಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ. ಈ ಇಡೀ ಯೋಜನೆಗಾಗಿ ಸರ್ಕಾರವು ಸುಮಾರು 17,698 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ನಿಗದಿಪಡಿಸಿತ್ತು. ಆದರೆ, ಅದಾನಿ ಸಮೂಹವು 22,267 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ಇದು ಮೊದಲ ಪ್ಯಾಕೇಜ್‌ನಲ್ಲಿ ಶೇ. 24ರಷ್ಟು ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ ಶೇ. 28ರಷ್ಟು ಅಧಿಕ ಮೊತ್ತವಾಗಿದೆ. ಈ ಭಾರಿ ವ್ಯತ್ಯಾಸವಿರುವ ಕಾರಣದಿಂದಾಗಿ, ಟೆಂಡರ್ ಅಂತಿಮಗೊಳಿಸುವ ವಿಚಾರವನ್ನು ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ತಾಂತ್ರಿಕ ಅರ್ಹತೆ ಮತ್ತು ಪೈಪೋಟಿ
ಆರಂಭದಲ್ಲಿ ಅದಾನಿ ಗ್ರೂಪ್ ಹೊರತಾಗಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ವಿಶ್ವ ಸಮುದ್ರ ಎಂಜಿನಿಯರಿಂಗ್ ಮತ್ತು ದಿಲ್ಲಿಪ್ ಬಿಲ್ಡ್‌ಕಾನ್ ಕಂಪನಿಗಳು ಬಿಡ್ ಸಲ್ಲಿಸಿದ್ದವು. ಆದರೆ, ತಾಂತ್ರಿಕ ಮೌಲ್ಯಮಾಪನದ ವೇಳೆ RVNL ಮತ್ತು ದಿಲ್ಲಿಪ್ ಬಿಲ್ಡ್‌ಕಾನ್ ಕಂಪನಿಗಳು ನಿಯಮಗಳ ಅಡಿಯಲ್ಲಿ ಅನರ್ಹಗೊಂಡವು. ಅಂತಿಮವಾಗಿ ಹಣಕಾಸು ಬಿಡ್ ಹಂತಕ್ಕೆ ತಲುಪಿದ್ದು ಅದಾನಿ ಮತ್ತು ಹೈದರಾಬಾದ್ ಮೂಲದ ವಿಶ್ವ ಸಮುದ್ರ ಕಂಪನಿಗಳು ಮಾತ್ರ. ಇವುಗಳಲ್ಲಿ ಅದಾನಿ ಸಮೂಹವು ಕಡಿಮೆ ಮೊತ್ತವನ್ನು ಕೋರಿದೆ.

ಯೋಜನೆಯ ಸ್ವರೂಪ:
ಸುಮಾರು 16.75 ಕಿಲೋಮೀಟರ್ ಉದ್ದದ ಈ ಸುರಂಗ ರಸ್ತೆಯು ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣವಾಗಲಿದೆ. ಇದನ್ನು ‘ಬಿಲ್ಡ್-ಆಪರೇಟ್-ಟ್ರಾನ್ಸ್ಫರ್’ (BOT) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸರ್ಕಾರವು ಒಟ್ಟು ವೆಚ್ಚದ ಶೇ. 40ರಷ್ಟು ಹಣ ನೀಡಿದರೆ, ಉಳಿದ ಶೇ. 60ರಷ್ಟು ಹಣವನ್ನು ಗುತ್ತಿಗೆ ಪಡೆದ ಕಂಪನಿಯೇ ಭರಿಸಬೇಕಾಗುತ್ತದೆ. ಕಾಮಗಾರಿ ಆರಂಭವಾದರೆ ಪೂರ್ಣಗೊಳ್ಳಲು ಸುಮಾರು 50 ತಿಂಗಳುಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, 2029ರ ವೇಳೆಗೆ ಇದು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.‌

ಇದನ್ನೂ ಓದಿ: ಯುಜಿ-ನೀಟ್ 2025ರ 3ನೇ ಸುತ್ತಿನ ಕೌನ್ಸೆಲಿಂಗ್‌ಗೆ ಮಹತ್ವದ ಅಪ್‌ಡೇಟ್‌ ಬಿಡುಗಡೆ

ಸದ್ಯಕ್ಕೆ ಈ ಯೋಜನೆಯು ಪರಿಸರ ಹಾನಿ ಮತ್ತು ಅತಿ ಹೆಚ್ಚಿನ ವೆಚ್ಚದ ಕಾರಣಕ್ಕೆ ವಿರೋಧವನ್ನೂ ಎದುರಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಅರ್ಜಿಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಅಂತಿಮವಾಗಿ ಸರ್ಕಾರವು ಅದಾನಿ ಸಮೂಹದ ಹೆಚ್ಚಿನ ದರದ ಬಿಡ್ ಅನ್ನು ಒಪ್ಪಿಕೊಳ್ಳುತ್ತದೆಯೇ ಅಥವಾ ಮರು ಟೆಂಡರ್ ಕರೆಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories